ಉಪ್ಪಿನಂಗಡಿ: ಪ್ರಧಾನಿ ನರೇಂದ್ರ ಮೋದಿಯವರು ಕಂಡ ಮಾಲಿನ್ಯ ಮುಕ್ತ ಭಾರತದ ಕಲ್ಪನೆಯನ್ನು ಸಾಕಾರಗೊಳಿಸುವ ಸಂಬಂಧ ಜನ ಜಾಗೃತಿಗಾಗಿ ಭಾರತದಾದ್ಯಂತ ಏಕಾಂಗಿಯಾಗಿ ಸೈಕಲ್ ಯಾತ್ರೆ ಕೈಗೊಂಡಿರುವ ಬೃಜೇಶ್ ಶರ್ಮಾ(33) ರವರು ಜು. 24ರಂದು ಉಪ್ಪಿನಂಗಡಿಗೆ ಆಗಮಿಸಿದ್ದು, ಉಪ್ಪಿನಂಗಡಿಯಲ್ಲಿ ಹೃದಯಸ್ಪರ್ಶಿ ಸ್ವಾಗತವನ್ನು ನೀಡಲಾಯಿತು.
ಸೈಕಲ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ , ಸೈಕಲ್ ನ್ನು ದೂಡಿಕೊಂಡು ಬಂದ ಬೃಜೇಶ್ ಶರ್ಮಾ ರವರ ಸಂಕಷ್ಠವನ್ನು ಕಂಡು ಇಲ್ಲಿನ ರಿಕ್ಷಾ ಚಾಲಕರು ವಿಚಾರಿಸಿ ಸಹಾಯಕ್ಕೆ ಮುಂದಾದರು.
ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು, ಸಾವಯವ ಕೃಷಿಯ ಮಹತ್ವವನ್ನು ಪಸರಿಸಬೇಕು ಎಂಬಿತ್ಯಾದಿ ಪರಿಸರ ರಕ್ಷಣೆಯ ಉದ್ದೇಶದಿಂದ 2019 ರ ಸೆಪ್ಟೆಂಬರ್ ತಿಂಗಳ 17 ರಂದು ಪ್ರಾರಂಭಿಸಿದ ಸೈಕಲ್ ಜನ ಜಾಗೃತಿ ಯಾತ್ರೆಯು ಈಗಾಗಲೇ 9 ರಾಜ್ಯಗಳನ್ನು ಸಂದರ್ಶಿಸಿ ಕರ್ನಾಟಕವನ್ನು ಪ್ರವೇಶಿಸಿದೆ. ದೇಶದ ಪ್ರಾಕೃತಿಕ ಸೊಬಗನ್ನು ಕಣ್ಣಾರೆ ಕಾಣುವ ಸೌಭಾಗ್ಯ ನನಗೊದಗಿದೆ ಎಂದು ವಿವರಿಸಿದ ಶರ್ಮಾ ರವರು , ಈಗಾಗಲೇ 36000 ಕಿಮೀ ಕ್ರಮಿಸಿರುವೆನೆಂದೂ, 32 ಲಕ್ಷ ವಿದ್ಯಾರ್ಥಿಗಳನ್ನು , 9 ಲಕ್ಷ ರೈತರನ್ನು ಸಂಪರ್ಕಿಸಿ ಮಾಲಿನ್ಯ ರಹಿತ ದೇಶದ ನಿರ್ಮಾಣಕ್ಕೆ ಕೈ ಜೋಡಿಸಲು ವಿನಂತಿಸಲಾಗಿದೆ ಎಂದರು.
ಉಪ್ಪಿನಂಗಡಿಯ ಸಾಮಾಜಿಕ ಮುಂದಾಳು ಕೈಲಾರ್ ರಾಜಗೋಪಾಲ ಭಟ್ ಅವರಿಗೆ ಆತಿಥ್ಯವನ್ನು ಒದಗಿಸಿದ್ದಾರೆ.