ಸವಣೂರು: ಪೇಟೆಯ ಶಾಲೆಗಳನ್ನು ಗುರುತಿಸುವ ದಿನದಲ್ಲಿ, ಗ್ರಾಮೀಣ ಪ್ರದೇಶದ ಶಾಲೆಗಳು ಉತ್ತಮ ಕಾರ್ಯದ ಮೂಲಕ ಮಾದರಿಯಾಗಿದೆ. ಎನ್. ಇ. ಸಿ. ಎಫ್. ತಂಡ ನೆಟ್ಟುಕೊಟ್ಟ ಗಿಡಗಳನ್ನು ಬೆಳೆಸುವ ಜವಾಬ್ದಾರಿ ಗ್ರಾಮದ ಜನರ ಮೇಲಿದೆ ಎಂದು ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಜೀವಿ ವಿ ಶೆಟ್ಟಿ ಹೇಳಿದರು.
ಅವರು ಆರೆಲ್ತಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪುತ್ತೂರು ಅರಣ್ಯ ಇಲಾಖೆ, ಮಂಗಳೂರು ಎನ್. ಇ. ಸಿ. ಎಫ್. ಹಾಗೂ ಯೂನಿವರ್ಸಲ್ ನಾಲೆಡ್ಜ್ ಟ್ರಸ್ಟ್ ವತಿಯಿಂದ ನಡೆದ ಪಶ್ಚಿಮ ಘಟ್ಟದ ಹಸಿರು ಹೊದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಎನ್. ಇ. ಸಿ. ಎಫ್ ತಂಡದ ದಿನೇಶ್ ಹೊಳ್ಳ ಮಾತನಾಡಿ ಪಶ್ಚಿಮ ಘಟ್ಟದ ನೆಮ್ಮದಿ ಬಹಳ ಅಗತ್ಯವಿದೆ. ಆದರೆ ಇಂದು ಪಶ್ಚಿಮ ಘಟ್ಟ ಕುಸಿಯುತ್ತಿದೆ, ಬೆಂಕಿಗೆ ಉರಿಯುತ್ತಿದೆ, ಪ್ರಕೃತಿ ಮಾತೆ ಅಳುತ್ತಿದ್ದರೂ ನಾವು ನಿಂತು ನೋಡುವ ಕಾರ್ಯವಾಗುತ್ತಿದೆ. ಎಷ್ಟು ಲಕ್ಷ ಗಿಡ ನೆಟ್ಟಿದ್ದೇವೆ ಎನ್ನುವುದಕ್ಕಿಂತ ನೆಟ್ಟ ಗಿಡಗಳ ಬಗ್ಗೆ ಎಷ್ಟು ಲಕ್ಷ್ಯ ವಹಿಸಿದ್ದೇವೆ ಎಂಬುದು ಮುಖ್ಯ ಎಂದು ತಿಳಿಸಿದರು.
ನೇರಳೆ, ನೆಲ್ಲಿ, ಹಲಸು, ಪುನರ್ಪುಳಿ, ಸೀತಾಫಲ, ರಂಬೂಟಾನ್, ಜಂಬುನೇರಳೆ, ಬಾದಾಮಿ ಸೇರಿ 8 ಜಾತಿಯ 400 ಗಿಡಗಳನ್ನು ನೆಡಲಾಯಿತು.
ಪುತ್ತೂರು ಸಂಚಾಲಕ ದಿನೇಶ್ ಹೆಗಡೆ, ರೋಶನ್ ಕುಮಾರ್ ಕುಂಬ್ಳೆ, ರಂಜಿತ್ ಬಂಗೇರ, ವೆಂಕಟ್ರಮಣ ಪುಣಚ, ಅಶೋಕ್ ಅಡ್ಯಂತಾಯ, ವಲಯ ಅರಣ್ಯಾಧಿಕಾರಿ ಪುತ್ತೂರು ಕಿರಣ್ ಬಿ ಎಂ., ನರಿಮೊಗರು ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಕುಮಾರ ಸ್ವಾಮಿ, ಅರಣ್ಯ ರಕ್ಷಕರಾದ ಚಿದಾನಂದ ಬಿ., ಸತ್ಯನ್ ಡಿ. ಜಿ., ದೀಪಕ್ ಕೆ. ಎಸ್. ಅರಣ್ಯ ವೀಕ್ಷಕ ಶೀನಪ್ಪ, ಸವಣೂರು ಗ್ರಾಮ ಪಂಚಾಯಿತಿ ಸದಸ್ಯ ತೀರ್ಥರಾಮ ಕೆಡೆಂಜಿ, ಎಸ್. ಡಿ. ಎಂ. ಸಿ. ಅಧ್ಯಕ್ಷೆ ಸೀತಮ್ಮ, ಶಾಲೆಯ ಮುಖ್ಯಶಿಕ್ಷಕ ಜಗನ್ನಾಥ ಎಸ್., ಶಿಕ್ಷಕ ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.