ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ ಅಂಗವಾಗಿ ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಯೋಧರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಮಾತನಾಡಿ ಭಾರತೀಯರ ಪಾಲಿಗೆ ಜುಲೈ 26 ಎನ್ನುವುದು ಕೇವಲ ಒಂದು ದಿನವಲ್ಲ. ದೇಶದ ಗಡಿ ನುಗ್ಗಲು ಯತ್ನಿಸಿದ ಪರಕೀಯರಿಗೆ ಪಾಠ ಕಲಿಸಿದ ದಿನ. ರಾಷ್ಟ್ರಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರನ್ನು ಸ್ಮರಿಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಕಾರ್ಗಿಲ್ನಲ್ಲಿ 60 ದಿನಗಳ ಕಾಲ ನಡೆದ ಸಂಘರ್ಷದಲ್ಲಿ ಪಾಕಿಸ್ತಾನದ ಸೇನೆಯನ್ನು ಭಾರತೀಯ ಯೋಧರು ಹಿಮ್ಮೆಟ್ಟಿಸಿದರು. ಈ ಯುದ್ಧದಲ್ಲಿ ಹುತಾತ್ಮರಾದ ನೂರಾರು ಭಾರತೀಯ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದಲೇ ಈ ದಿನವನ್ನು ಆಚರಿಸಲಾಗುತ್ತದೆ. ದೇಶದ ಗಡಿಯಲ್ಲಿ ಸಂಘಟಿತರಾಗಿದ್ದುಕೊಂಡು ವೈರಿಗಳ ಗುಂಡೇಟುಗಳಿಗೆ ಎದೆಯೊಡ್ಡಿದ ಯೋಧರ ಯಶೋಗಾಥೆ ನಮ್ಮ ಹೃದಯದಲ್ಲಿ ಸದಾ ಅನುರಣಿಸುತ್ತಿರಬೇಕು. ಸೈನಿಕರ ಆದರ್ಶವನ್ನು ಮೈಗೂಡಿಸಿಕೊಂಡು ಅವರ ಜೀವನಗಾಥೆಗಳನ್ನು ಇತರರೊಂದಿಗೆ ಹಂಚಿಕೊಂಡು ದೇಶ ಕಟ್ಟುವ ಕಾರ್ಯದಲ್ಲಿ ಕೈಗೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ, ಉಪನ್ಯಾಸಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.