ಗ್ರಾಮೀಣ ಭಾಗದ ಬೆಟ್ಟಂಪಾಡಿ, ಪಾಣಾಜೆಯಲ್ಲಿ ಅಂಗಡಿ ಮುಂಗಟ್ಟು ಬಂದ್
ಬೆಟ್ಟಂಪಾಡಿ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಹಿಂದು ಸಂಘಟನೆಗಳು ಕೊಟ್ಟಿರುವ ಸ್ವಯಂಪ್ರೇರಿತ ಬಂದ್ ಕರೆಗೆ ಗ್ರಾಮೀಣ ಪ್ರದೇಶವಾದ ಬೆಟ್ಟಂಪಾಡಿ, ಪಾಣಾಜೆಯಲ್ಲಿಯೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬಹುತೇಕ ಅಂಗಡಿ ಮುಂಗಟ್ಟುಗಳು ಬೆಳಗ್ಗಿನಿಂದಲೇ ತೆರೆದಿರಲಿಲ್ಲ. ಹಾಗಾಗಿ ಜನಸಂಚಾರವೂ ವಿರಳವಾಗಿದೆ. ಹಿಂದು ವ್ಯಾಪಾರಸ್ಥರು ಅಂಗಂಡಿ, ವ್ಯಾಪಾರ ಮಳಿಗೆ ಬಂದ್ ನಡೆಸಿದ್ದಾರೆ. ಹಿಂದುಯೇತರ ಅಂಗಡಿಗಳು ತೆರೆದಿವೆ. ರೆಂಜ ಶ್ರೀರಾಮನಗರ, ರೆಂಜ ಸರ್ಕಲ್, ಬೆಟ್ಟಂಪಾಡಿಯವರೆಗೂ ಹೆಚ್ಚಿನ ಎಲ್ಲಾ ಅಂಗಡಿಗಳು ಬಂದ್ ಆಗಿವೆ. ರೆಂಜ ಮೇಲಿನಪೇಟೆ ಮಸೀದಿ ಬಳಿಯ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದು, ಜನರು ಮತ್ತು ವಾಹನಗಳ ಸಂಚಾರ ಎಂದಿನಂತೆ ಕಂಡುಬಂದಿದೆ.
ಪಾಣಾಜೆಯಲ್ಲಿಯೂ ಹಿಂದುಯೇತರರ ವ್ಯಾಪಾರ ಮಳಿಗೆ ಹೊರತುಪಡಿಸಿ ಉಳಿದೆಲ್ಲಾ ಅಂಗಡಿಮುಂಗಟ್ಟುಗಳು ಮುಚ್ಚಿವೆ. ಆದರೆ ಇಲ್ಲಿ ಜನಸಂಚಾರ ತೀರಾ ಕಡಿಮೆ ಕಂಡುಬಂದಿದೆ.
ಉಭಯ ಗ್ರಾಮಗಳಲ್ಲಿ ಶಾಲಾ ಕಾಲೇಜುಗಳು, ಸರಕಾರಿ ಕಚೇರಿಗಳು, ವೈದ್ಯಕೀಯ ಸೇವಾ ಕೇಂದ್ರಗಳು ಎಂದಿನಂತೆ ತೆರೆದು ಕಾರ್ಯಾಚರಿಸುತ್ತಿವೆ.