ವಿಟ್ಲ: ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರುರವರನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕಡಿದು ಹತ್ಯೆಗೈದ ಹಿನ್ನೆಲೆ ಸಂಘ ಪರಿವಾರ ಹಾಗೂ ಬಿಜೆಪಿ ಕಾರ್ಯಕರ್ತರು ವಿಟ್ಲ ಪೇಟೆಯಲ್ಲಿನ ಹಿಂದೂ ಸಮುದಾಯದ ಅಂಗಡಿಗಳಿಗೆ ತೆರಳಿ ಅಂಗಡಿಗಳನ್ನು ಮುಚ್ಚುವಂತೆ ಮನವಿ ಮಾಡಿದರು. ಆದರೆ ಇದೀಗ ವಿಟ್ಲಪೇಟೆಯ ಎಲ್ಲಾ ಅಂಗಡಿಗಳು ಸ್ವಯಂ ಪ್ರೇರಿತವಾಗಿ ಸಂಪೂರ್ಣವಾಗಿ ಬಂದ್ ಆಗಿದೆ.
ಸರಕಾರಿ ಹಾಗೂ ಕೆಲವು ಖಾಸಗಿ ಶಾಲೆಗಳಿಗೆ ರಜೆ ನೀಡಲಾಗಿದೆ. ಬಸ್ ಸಂಚಾರ ಸ್ಥಗಿತಗೊಂಡಿದೆ.
ಬೆಳಿಗ್ಗೆ ಹಿಂದು ಸಮುದಾಯದ ಅಂಗಡಿ ಮಾತ್ರ ಬಂದ್ ಮಾಡಲಾಗಿತ್ತು. ಇದೀಗ ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲಾ ವರ್ತಕರು ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದಾರೆ. ಇನ್ನೂ ಅಗತ್ಯ ವಸ್ತುಗಳಾದ ಮೆಡಿಕಲ್ ಎಂದಿನಂತೆ ವ್ಯಾಪಾರ ಮಾಡುತ್ತಿದೆ. ಪೇಟೆಯಲ್ಲಿ ಜನರ ಸಂಖ್ಯೆಯೂ ಕಡಿಮೆಯಾಗಿದೆ. ಆಟೋ ರಿಕ್ಷಾ, ಕಾರು ಸಂಚಾರ ಸ್ಥಗಿತಗೊಳಿಸಿದೆ. ವಿಟ್ಲ ಪೊಲೀಸರು ಬಿಗೀ ಬಂದೋ ಬಸ್ತ್ ಏರ್ಪಡಿಸಿದ್ದಾರೆ.
ಗಡಿಪ್ರದೇಶದ ಚೆಕ್ ಪೋಸ್ಟ್ ಲ್ಲಿ ಹೆಚ್ಚಿದ ವಾಹನ ತಪಾಸಣೆ:
ಘಟನೆ ನಡೆದ ಕೂಡಲೇ ಕೇರಳ ಕರ್ನಾಟಕ ಗಡಿಪ್ರದೇಶಗಳಾದ ಸಾರಡ್ಕ, ಕನ್ಯಾನ, ಸಾಲೆತ್ತೂರು ಚೆಕ್ ಪೋಸ್ಟ್ ಗಳಲ್ಲಿ ವಾಹನ ತಪಾಸಣೆ ಬಿಗುಗೊಳಿಸಲಾಗಿದೆ. ಕರ್ನಾಟಕಕ್ಕೆ ಆಗಮಿಸುವ ಹಾಗೂ ಕೆರಳಕ್ಕೆ ತೆರಳುವ ವಾಹನಗಳ ಬಗ್ಗೆ ತೀವ್ರ ನಿಗಾ ಇರಿಸಲಾಗುತ್ತಿದೆ.