ಬಡಗನ್ನೂರುಃ ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಪುತ್ತೂರು ಇದರ ಗ್ರಾಮೀಣ ಶಾಖೆ ಮರಾಟಿ ಸಮಾಜ ಸೇವಾ ಸಂಘ ಪಡುಮಲೆ, ಬಡಗನ್ನೂರು, ಇದರ ವಾರ್ಷಿಕ ಮಹಾಸಭೆ, ಆಟಿ ಐಸಿರಿ, ವನಮಹೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಜು. 24 ರಂದು ಪಟ್ಟೆ ಶ್ರೀ ನಿಲಯದಲ್ಲಿ ನಡೆಯಿತು.
ನಿವೃತ್ತ ಪೊಲೀಸ್ ಉಪನಿರೀಕ್ಷಕ ಪಿ. ಎಂ. ಕೃಷ್ಣ ನಾಯ್ಕ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಅಟಿ ತಿಂಗಳಲ್ಲಿ ಒಂದು ಹೊತ್ತು ತುತ್ತಿಗೂ ಕಷ್ಟಕರವಾಗಿತ್ತು. ಅದರಿಂದ ಹಿರಿಯರು ಸುತ್ತ ಮುತ್ತಲಿನ ಪ್ರದೇಶದ ಔಷಧೀಯ ಗುಣಗಳಿರುವ ಗೆಡ್ಡೆ ಗೆಣಸು ಹಾಗೂ ಸೊಪ್ಪು ತರಕಾರಿ ತಿಂದು ಜೀವನ ಮಾಡುತ್ತಿದ್ದರು. ಆದರೆ ಇಂದು ಕಾಲ ಬದಲಾವಣೆಯಾಗಿದೆ. ಸರ್ಕಾರ ಪಡಿತರ ಕಾರ್ಡ್ ಮೂಲಕ ಅಕ್ಕಿ ಹಾಗೂ ಇತರೆ ಸಾಮಾಗ್ರಿಗಳನ್ನು ನೀಡುತ್ತದೆ ಎಂದರು. ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕ್ರತಿ ನೀಡಿ ಬೆಳೆಸುವಂತೆ ಕರೆನೀಡಿ, ಮಾತೃ ಸಂಘದ ಹೆಚ್ಚು ಸಂಖ್ಯೆಯಲ್ಲಿ ಸದಸ್ಯರಾಗಿ ಸಂಘಟನೆಯ ಬಲಪ್ರದರ್ಶಿವಂತೆ ಕಿವಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮವು ಪಡುಮಲೆ ಮರಾಟಿ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ ಮುಂಡೋಳೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಪುತ್ತೂರು ಕೊಂಬೆಟ್ಟು ಮ. ಸ.ಸೇ ಸಂಘದ ಅಧ್ಯಕ್ಷ ರಾಮಚಂದ್ರ ನಾಯ್ಕ ಮಾತನಾಡಿ, ಪಡುಮಲೆ ಇ ಗ್ರಾಮೀಣ ಶಾಖೆ ಮಾತೃ ಸಂಘದ ಅಭಿವೃದ್ಧಿಗೆ ಪೂರಕವಾಗಿ ವಿವಿಧ ಚಟುವಟಿಕೆ ನೀಡುತ್ತ ಬರುತ್ತಿದೆ. ತಾಲೂಕಿನಲ್ಲಿ 2011 ಅಂಕಿ ಅಂಶಗಳ ಪ್ರಕಾರ ಸುಮಾರು 25 ಸಾವಿರಕ್ಕೂ ಹೆಚ್ಚು ಸ್ವಜಾತಿ ಬಾಂಧವರಿದ್ದಾರೆ. ಆದರೆ ಮಾತೃ ಸಂಘದಲ್ಲಿ 18 ಸಾವಿರ ಮಂದಿ ಮಾತ್ರ ಶಾಶ್ವತ ಸದಸ್ಯತ್ವ ಪಡೆದಿದ್ದಾರೆ. ಶಾಶ್ವತ ಸದಸ್ಯತ್ವ ಹೆಚ್ಚಿಸುವಲ್ಲಿ ಪಡುಮಲೆ ಗ್ರಾಮೀಣ ಶಾಖೆ ಸಹಕಾರ ನೀಡುವಂತೆ ವಿನಂತಿಸಿದರು.
ಪುತ್ತೂರು ಶ್ರೀ ಮಹಮ್ಮಾಯಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಕೆ. ಶೀನ ನಾಯ್ಕ ಅಟಿ ತಿಂಗಳ ಮಹತ್ವದ ಬಗ್ಗೆ ಅರ್ಥಪೂರ್ಣವಾಗಿ ತಿಳಿಸಿದರು. ಮಹಮ್ಮಾಯಿ ಸೌಹಾರ್ದ ಸಹಕಾರಿ ಸಂಘದ ಅಂಕಿ ಅಂಶಗಳ ಬಗ್ಗೆ ತಿಳಿಸಿದರು ಮತ್ತು ಸ್ವಜಾತಿ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಹೊಂದುವಂತೆ ಕರೆ ನೀಡಿದರು.
ಪುತ್ತೂರು ಕೊಂಬೆಟ್ಟು ಮ.ಸ.ಸೇ ಸಂಘದ ಕಾರ್ಯದರ್ಶಿ ಸಾವಿತ್ರಿ ಎಸ್, ಅಟಿ ವಿಶೇಷತೆ ಬಗ್ಗೆ ಮಾತನಾಡಿದರು. ತಾ.ಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ ಮಾತನಾಡಿ ನಾವು ಬೆಳೆದುಬಂದ ಹಾದಿಯನ್ನು ಮರುಕಳಿಸುವ ಕೆಲಸ ಅಗಬೇಕು. ಅಗ ಮಾತ್ರ ಯಶಸ್ಸು ಸಾಧ್ಯ. ಯಮುನಾ ಟೀಚರ್ ಅವರ ಕಲಿಸಿದ ಗುರುಗಳನ್ನು ಮತ್ತು ಅವರಿಗೆ ಸಹಕಾರ ನೀಡಿದವರಿಗೆ ಮಾಡಿದ ಸನ್ಮಾನ ಇದಕ್ಕೆ ನಿದರ್ಶನ. ಇದು ಒಂದು ಅರ್ಥಪೂರ್ಣ ಕಾರ್ಯಕ್ರಮ ಎಂದು ಹೇಳಿ ಶುಭ ಹಾರೈಸಿದರು.
ಪುತ್ತೂರು ನೋಟರಿ ವಕೀಲರಾದ ಮಂಜುನಾಥ ಎನ್ ಎಸ್ ಮಾತನಾಡಿ ಮರಾಟಿ ಸಮಾಜದ ಅಭಿವೃದ್ಧಿಗೆ ಡಾ.ಅಂಬೇಡ್ಕರ್ ಸಂವಿಧಾನ ಕಾರಣ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಪುತ್ತೂರು, ಕೊಂಬೆಟ್ಟು ಮರಾಟಿ ಮಹಿಳಾ ವೇದಿಕೆಯ ಕಾರ್ಯದರ್ಶಿ ಗೌರಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಮತ್ತೂರು ಕೊಂಬೆಟ್ಟು ಮ.ಸ.ಸೇ ಸಂಘದ ಕೋಶಾಧಿಕಾರಿ ಬಾಲಕೃಷ್ಣ ನಾಯ್ಕ ಉಪಸ್ಥಿತರಿದ್ದರು.
ಪಡುಮಲೆ ಮರಾಟಿ ಸೇವಾ ಸಂಘದ ಗೌರವ ಅಧ್ಯಕ್ಷ ವೈ. ಕೆ. ನಾಯ್ಕ ಪಟ್ಟೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಗೋಪಾಲ ನಾಯ್ಕ ದೊಡ್ಡಡ್ಕ ವರದಿ ಮಂಡಿಸಿದರು. ಕೋಶಾಧಿಕಾರಿ ಸುಂದರ ನಾಯ್ಕ ಲೆಕ್ಕ ಪತ್ರ ಮಂಡಿಸಿದರು. ಉಪಾಧ್ಯಕ್ಷ ಅಪ್ಪಯ್ಯ ನಾಯ್ಕತಲೆಂಜಿ ವಂದಿಸಿದರು. ಸಂಘದ ಪದಾಧಿಕಾರಿಗಳಾದ ಕೇಶವ ಪ್ರಸಾದ್ ಪಟ್ಟೆ ಹಾಗೂ ರೇಖಾನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು.
ಸನ್ಮಾನ ಕಾರ್ಯಕ್ರಮ
ನಿವೃತ್ತ ಶಿಕ್ಷಕ ಪಿ.ಬಿ ನಾಯ್ಕ, ಮಂಗಳೂರು ಮಹಾನಗರ ಪಾಲಿಕೆ ನಿವೃತ್ತ ಕಛೇರಿ ವ್ಯವಸ್ಥಾಪಕಿ ಭಾಗೀರಥಿ ನಾರಾಯಣ ನಾಯ್ಕ ದಂಪತಿಗಳು ಪೆರ್ನೆ, ಮಾಜಿ ಸೈನಿಕ ಸುಬ್ಬಪ್ಪ ಪಾಟಾಳಿ ಪಟ್ಟೆ ಹಾಗೂ ಪಟ್ಟೆ ಶ್ರೀ ಕೃಷ್ಣ ಹಿ.ಪ್ರಾ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಯಮುನಾ ವೈ.ಕೆ ನಾಯ್ಕ ಇವರನ್ನು ಹಾರ ಶಾಲು ಫಲಪುಷ್ಪ ಸ್ಮರಣೆ ನೀಡಿ ಗೌರವಿಸಲಾಯಿತು.
ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳಿಗೆ ಶಾಲು ಹಾಗೂ ಹೂ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ವಜಾತಿ ಭಾಂಧವರು ಸುಮಾರು 25 ಬಗೆಯ ರುಚಿಕರವಾದ ವಿವಿಧ ಖಾದ್ಯಗಳನ್ನು ತಯಾರಿಸಿ ತಂದಿದ್ದು ಅತಿಥಿಗಳು ಮತ್ತು ಸಭಿಕರು ಇದರ ಸವಿಯನ್ನುಂಡರು.
ಸಭೆಯಲ್ಲಿ ಪಡುಮಲೆ ಮರಾಠಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಊರಿನವರು ಭಾಗವಹಿಸಿದ್ದರು.