ಪುತ್ತೂರು: ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಪೋಷಕರ ಸಭೆಯು ಸಂಚಾಲಕ ಕೆ. ಸೀತಾರಾಮ ರೈ ಸವಣೂರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪೋಷಕರನ್ನುದ್ದೇಶಿಸಿ ಮಾತನಾಡಿದ ಅವರು ಯಾವುದೇ ಫಲಾಪೇಕ್ಷೆಯಿಲ್ಲದೆ ನಾನು ನನ್ನ ತಂದೆಯವರ ಹೆಸರಿನಲ್ಲಿ ಕಟ್ಟಿದ ಈ ಶಾಲೆಯನ್ನು ನೀವೆಲ್ಲರೂ ಬೆಳೆಸಿ ಸಹಕರಿಸಬೇಕು ಎಂದರು. ಇದುವರೆಗೂ ಈ ಸಂಸ್ಥೆ ನನಗೆ ಯಾವುದೇ ಲಾಭ ತಂದು ಕೊಟ್ಟಿಲ್ಲವಾದರೂ ನಾನು ಶಿಕ್ಷಣ ಪ್ರೀತಿಗಾಗಿ ಈ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ 2021-22ನೆ ಸಾಲಿನಲ್ಲಿ ಜರುಗಿದ 10ನೆ ತರಗತಿ ಮತ್ತು ದ್ವಿತೀಯ ಪಿ.ಯು.ಸಿ. ತರಗತಿಗಳಲ್ಲಿ ವಿಶಿಷ್ಟ ಶ್ರೇಣಿ ಪಡೆದು ತೇರ್ಗಡೆಯಾದ ಒಟ್ಟು 20 ವಿದ್ಯಾರ್ಥಿಗಳನ್ನು ಮತ್ತು ಅವರ ಪೋಷಕರನ್ನು ಪುಸ್ತಕ ಬಹುಮಾನ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ರಕ್ಷಕ-ಶಿಕ್ಷಕ ಸಂಘದ ನಿರ್ಗಮನಾಧ್ಯಕ್ಷ ಪ್ರದೀಪ್ ಕುಮಾರ್ ರೈ ಪನ್ನೆ, ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ಪ್ರಾಂಶುಪಾಲ ಸೀತಾರಾಮ ಕೇವಳ, ಉಪಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ಮತ್ತು ಬೋಧಕ ವರ್ಗದವರು ವೇದಿಕೆಯಲ್ಲಿದ್ದರು.
2022-23ನೆ ಸಾಲಿನ ರಕ್ಷಕ-ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶಾಲಾ ಸಂಚಾಲಕ ಕೆ. ಸೀತಾರಾಮ ರೈ ಸವಣೂರು, ಉಪಾಧ್ಯಕ್ಷರಾಗಿ ಸುರೇಶ್ ರೈ ಸೂಡಿಮುಳ್ಳು, ಸದಸ್ಯರಾಗಿ ಕರುಣಾಕರ ರೈ, ತಾರಾನಾಥ ಕಾಯರ್ಗ ಮತ್ತು ಸವಿತಾ ಮೊಗೇರು ಆಯ್ಕೆಯಾದರು.
ಶಿಕ್ಷಕಿಯರಾದ ಪರಿಮಳ ಎನ್.ಎಂ. ಪ್ರಾರ್ಥನೆ, ಶ್ರೀಲೇಖಾ ಶೆಟ್ಟಿ ಎಂ. ಸ್ವಾಗತ, ಕೌಶಲ್ಯ ಎಸ್. ವಂದನಾರ್ಪಣೆ ಮತ್ತು ಶೀಲಾವತಿ ಕೆ.ಯವರು ನಿರೂಪಣೆಗಳಲ್ಲಿ ಸಹಕರಿಸಿದರು.