ಪುತ್ತೂರು: ಶ್ರೀಸತ್ಯಸಾಯಿ ಸೇವಾ ಸಮಿತಿ ಪುತ್ತೂರು ಮತ್ತು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳು ನರಿಮೊಗರು ಇವುಗಳ ಜಂಟಿ ಆಶ್ರಯದಲ್ಲಿ ಭಗವಾನ್ ಶ್ರೀಸತ್ಯಸಾಯಿ ಬಾಬಾರವರ ದಿವ್ಯಾನುಗ್ರಹದಿಂದ ಆಧ್ಯಾತ್ಮಿಕ ಶಿಕ್ಷಣ ಶಿಬಿರ ಸಾಂದೀಪನಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಯಿತು.
ಶ್ರೀಸತ್ಯಸಾಯಿ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಪ್ರಸನ್ನ ಎನ್. ಭಟ್ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಒಳ್ಳೆಯ ಗುಣಗಳನ್ನು ಬೆಳೆಸದ ಶಿಕ್ಷಣ, ಮಾನವೀಯತೆ ಇಲ್ಲದ ವಿಜ್ಞಾನ, ನೀತಿ ಇಲ್ಲದ ವಾಣಿಜ್ಯ, ತತ್ವವಿಲ್ಲದ ರಾಜಕೀಯ, ಅತ್ಯಂತ ಋಣಾತ್ಮಕ ಆಪತ್ತಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರರವರು ಮಾತನಾಡಿ ಶಾಲೆ ಎಂಬುದು ಜೀವನವನ್ನು ಕಲಿಸುವ ದೇಗುಲ ಸಜ್ಜನರನ್ನು ರಕ್ಷಿಸಿ ದುರ್ಜನರನ್ನು ಶಿಕ್ಷಿಸಬೇಕು ಎನ್ನುವುದು ನಮ್ಮ ಧರ್ಮ ಎಂದರು. ಸಂಸ್ಥೆಯ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ, ಶ್ರೀಸತ್ಯಸಾಯಿ ಸೇವಾ ಸಂಸ್ಥೆಗಳ ಜಿಲ್ಲಾಧ್ಯಕ್ಷ ಪ್ರಸನ್ನ ಭಟ್, ಶ್ರೀಸತ್ಯಸಾಯಿ ಸೇವಾ ಸಮಿತಿಯ ಸಂಚಾಲಕ ರಘುನಾಥ ರೈ, ಶಾಲಾ ಸಂಚಾಲಕರಾದ ಭಾಸ್ಕರ್ ಆಚಾರ್ ಹಿಂದಾರು, ಸುದಾನ ಶಾಲೆಯ ಶಿಕ್ಷಕಿ ಕವಿತಾ ಅಡೂರು, ಆಡಳಿತ ಮಂಡಳಿಯ ಸದಸ್ಯ ಡಾ ಶಿವಾನಂದ್, ಹಾಗೂ ಸತ್ಯಸಾಯಿ ಸೇವಾ ಸಮಿತಿಯ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮೊದಲನೆ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಕವಿತಾ ಅಡೂರುರವರು ಬಾಳಿಗೊಂದು ನಂಬಿಕೆ ಎಂಬ ವಿಷಯದ ಬಗ್ಗೆ ಮಾತನಾಡಿ ಮಂಕುತಿಮ್ಮನ ಕಗ್ಗದೊಂದಿಗೆ ವಿವರಿಸಿದರು. ಎರಡನೆಯ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿ ಸತ್ಯಸಾಯಿ ಸಮಿತಿಯ ಆಧ್ಯಾತ್ಮಿಕ ಚಿಂತಕ ಜಯರಾಮ ಭಾರದ್ವಜ ವಿದ್ಯಾರ್ಥಿ ಜೀವನದಲ್ಲಿ ಆಧ್ಯಾತ್ಮಿಕತೆಯ ಬಗ್ಗೆ ಮಾತನಾಡಿದರು. ಮೂರನೇ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿ ಕೃಷ್ಣ ಉಪಾಧ್ಯಾಯ ಭಗವದ್ಗೀತಾ ಸಂದೇಶ ತಿಳಿಸಿದರು. ಸತ್ಯಸಾಯಿ ಸೇವಾ ಸಮಿತಿಯ ಸಂಚಾಲಕ ರಘುನಾಥ ರೈ ಸ್ವಾಗತಿಸಿದರು. ಶ್ರೀಸತ್ಯಸಾಯಿ ಸೇವಾ ಸಮಿತಿಯ ಸದಸ್ಯ ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯಗುರು ಜಯಮಾಲ ವಿ.ಎನ್ ರವರು ಪ್ರಾಸ್ತಾವಿಕ ಮಾತನಾಡಿ ವಂದಿಸಿದರು.