ನೆಲ್ಯಾಡಿ: ಯುವಕನ ಮನೆ ಮುಂದೆ ಸುಮಾರು 2 ತಾಸಿಗೂ ಹೆಚ್ಚು ಹೊತ್ತು ಬಿಸಿಲಿನಲ್ಲೇ ಕುಳಿತು ಅಸ್ವಸ್ಥಗೊಂಡಿದ್ದ ಮಂಗಳೂರಿನ ವಿವಾಹಿತ ಮಹಿಳೆಯನ್ನು ಸ್ಥಳೀಯರೇ ಉಪಚರಿಸಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿರುವ ಘಟನೆಯೊಂದು ಜು.29ರಂದು ಸಂಜೆ ನೆಲ್ಯಾಡಿಯಲ್ಲಿ ನಡೆದಿದೆ.
ಮಂಗಳೂರಿನಲ್ಲಿ ಕೆಲಸಕ್ಕಿದ್ದ ವೇಳೆ ನೆಲ್ಯಾಡಿಯ ಯುವಕನಿಗೆ ಅಲ್ಲಿ ವಿವಾಹಿತ ಮಹಿಳೆಯೋರ್ವರ ಪರಿಚಯವಾಗಿದ್ದು ಇವರಿಬ್ಬರು ಅನ್ಯೋನ್ಯತೆಯಿಂದ ಇದ್ದರೆಂದು ಹೇಳಲಾಗಿದೆ. ಈ ನಡುವೆ ಯುವಕ ಕೆಲ ದಿನಗಳ ಹಿಂದೆ ಊರಿಗೆ ಬಂದಿದ್ದು ಆ ಬಳಿಕ ಮಹಿಳೆಯ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳೆ ಜು.29ರಂದು ಬೆಳಿಗ್ಗೆ ಮಂಗಳೂರಿನಿಂದ ನೆಲ್ಯಾಡಿಗೆ ಬಂದು ಯುವಕನ ಮನೆಗೆ ಹೋಗಿದ್ದರು. ಆದರೆ ಯುವಕನ ಮನೆಯವರು ಮಹಿಳೆಯನ್ನು ಮನೆಯೊಳಗೆ ಸೇರಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆ ಯುವಕನ ಮನೆ ಮುಂಭಾಗದಲ್ಲಿರುವ ಮರವೊಂದರ ಅಡಿಯಲ್ಲಿಯೇ ಕುಳಿತು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಬೆದರಿಕೆ ಹಾಕಿದರೆಂದು ಹೇಳಲಾಗಿದೆ. ಮರದಡಿಯಲ್ಲಿಯೇ ಸುಮಾರು ೨ ತಾಸಿಗೂ ಹೆಚ್ಚು ಸಮಯ ಅನ್ನ, ನೀರು ಇಲ್ಲದೇ ಕುಳಿತಿದ್ದ ಮಹಿಳೆ ಅಲ್ಲಿಯೇ ಅಸ್ವಸ್ಥಗೊಂಡು ಬಿದ್ದಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಸ್ಥಳೀಯ ಗ್ರಾಮ ಪಂಚಾಯತ್ನ ಸದಸ್ಯರು ಸ್ಥಳಕ್ಕೆ ತೆರಳಿ ಸ್ಥಳೀಯರ ನೆರವಿನೊಂದಿಗೆ ಮಹಿಳೆಯನ್ನು ರಿಕ್ಷಾವೊಂದರಲ್ಲಿ ನೆಲ್ಯಾಡಿ ಪೇಟೆಗೆ ಕರೆತಂದು ಉಪಚರಿಸಿ ಬಳಿಕ ಅದೇ ರಿಕ್ಷಾದಲ್ಲಿ ಪುತ್ತೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ