ಶಿಸ್ತು ಕಾಪಾಡಿ, ಭವಿಷ್ಯ ರೂಪಿಸಿ – ಗೀತಾಮಣಿ
ಪುತ್ತೂರು: ಕೊಂಬೆಟ್ಟು ಸರಕಾರಿ ಪದವಿ ಕಾಲೇಜು ಪ್ರೌಢಶಾಲಾ ವಿಭಾಗದಿಂದ ನಿವೃತ್ತಿಗೊಂಡ ದೈಹಿಕ ಶಿಕ್ಷಣ ಶಿಕ್ಷಕಿ ಗೀತಾಮಣಿಯವರಿಗೆ ವಿದ್ಯಾರ್ಥಿಗಳ ಸಮ್ಮುಖದಲ್ಲಿ ವಿದಾಯ ಸಮಾರಂಭ ಆ.1ರಂದು ಶಾಲಾ ವಠಾರದಲ್ಲಿ ನಡೆಯಿತು.
ಬೆಳಿಗ್ಗೆ ಶಿಕ್ಷಕಿ ಗೀತಾಮಣಿಯವರನ್ನು ಶಾಲೆಯ ವಠಾರದಲ್ಲಿ ಹಾರಾರ್ಪಣೆ ಮಾಡಿ ಸ್ವಾಗತಿಸಲಾಯಿತು. ಶಾಲಾ ಮೈದಾನದಲ್ಲಿ ವಿದ್ಯಾರ್ಥಿಗಳೆಲ್ಲಾ ತಮ್ಮ ಅನಿಸಿಕೆ ವ್ಯಕ್ತಪಡಿಸಿ, ಪ್ರತಿ ತರಗತಿಯ ವಿದ್ಯಾರ್ಥಿಗಳು ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನೀಡುವ ಮೂಲಕ ತಮ್ಮ ಗೌರವ ಸಮರ್ಪಣೆ ಮಾಡಿದರು. ಶಾಲಾಭಿವೃದ್ಧಿ ಸಮಿತಿಯ ಸದಸ್ಯೆ ಸವಿತಾ ರವರು ಶಿಕ್ಷಕಿಗೆ ಶುಭ ಹಾರೈಸಿದರು.
ಶಿಸ್ತು ಕಾಪಾಡಿ, ಭವಿಷ್ಯ ರೂಪಿಸಿ:
ವಿದ್ಯಾರ್ಥಿಗಳಿಂದ ಗೌರವಾರ್ಪಣೆಯನ್ನು ಸ್ವೀಕರಿಸಿದ ಗೀತಾಮಣಿ ಅವರು ಮಾತನಾಡಿ ವಿದ್ಯಾರ್ಥಿಗಳು ಶಿಸ್ತನ್ನು ಕಾಪಾಡಿಕೊಂಡು ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಮುಂಭಡ್ತಿಗೊಂಡ ಶಿಕ್ಷಕಿ ಅರುಣಾ ಅವರನ್ನು ಅಭಿನಂದಿಸಲಾಯಿತು. ಉಪಪ್ರಾಂಶುಪಾಲ ವಸಂತ ಮೂಲ್ಶ ಇವರು ನಿವೃತ್ತ ಶಿಕ್ಷಕಿ ಗೀತಾಮಣಿಯವರು ಸಂಸ್ಥೆಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯೆ ಸುಚಿತ್ರ ಉಪಸ್ಥಿತರಿದ್ದರು. ಸಂಸ್ಥೆಯ ಶಿಕ್ಷಕರು ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.