ಪುತ್ತೂರು: ಕಳೆದ 21 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸಿರುವ ನೆಲಪ್ಪಾಲು ನಿವಾಸಿ ವಿಜಯ ಕುಮಾರ್ ಎನ್ ಅವರು ಜು.31ರಂದು ಸೇವಾ ನಿವೃತ್ತಿ ಹೊಂದಿದ್ದು, ಆ.3ರಂದು ಅವರು ಹುಟ್ಟೂರಿಗೆ ಆಗಮಿಸುವ ನಿಟ್ಟಿನಲ್ಲಿ ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಸ್ವಾಗತಿಸಲಾಗುವುದು.
ಪಡ್ನೂರು ಗ್ರಾಮದ ನೆಲಪ್ಪಾಲು ನಿವಾಸಿಯಾಗಿದ್ದ ಕೆಎಸ್ಸಾರ್ಟಿಸಿ ಬಸ್ ಚಾಲಕ ದಿ. ರಾಮೇ ಗೌಡ ಮತ್ತು ಯಶೋದಾ ಅವರ ಪುತ್ರ ವಿಜಯ ಕುಮಾರ್ ಅವರು ಮಂಜಲ್ಪಡ್ಪು ಬಿಇಎಂ ಹಿ.ಪ್ರಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಸಂತ ಫಿಲೋಮಿನಾ ಕಾಲೇಜಿನಲ್ಲಿ ಪ್ರೌಢ ಶಿಕ್ಷಣ, ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ, ಮಹಾಲಿಂಗೇಶ್ವರ ಐಟಿಐಯಲ್ಲಿ ವೃತ್ತಿ ಶಿಕ್ಷಣ ಮತ್ತು ಮೈಸೂರು ವಿಶ್ವವಿದ್ಯಾನಿಲಯಲ್ಲಿ ಪದವಿ ಪಡೆದಿರುವ ವಿಜಯ ಕುಮಾರ್ ಅವರು 2001ರಲ್ಲಿ ಸಿಆರ್ಎಫ್ನಲ್ಲಿ ಸೇನೆ ಸೇರಿದ್ದರು. ತನ್ನ ಸೇವಾ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರ, ಅಸ್ಸಾಮ್, ಲಕ್ನೋ, ಬೆಂಗಳೂರು, ಒರಿಸ್ಸಾದಲ್ಲಿ ಸೇವೆ ಸಲ್ಲಿಸಿದ ಅವರು ಇದೀಗ ಹವಾಲ್ದಾರ್ ಹುದ್ದೆಯಿಂದ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಲಿದ್ದಾರೆ. ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಅವರನ್ನು ಅವರ ತಾಯಿ ಯಶೋದಾ, ಪತ್ನಿ ಸುದಾನ ವಸತಿಯುತ ಶಾಲೆಯಲ್ಲಿ ಶಿಕ್ಷಕಿಯಾಗಿರುವ ರಂಜಿತಾ, ಪುತ್ರಿ ಸೃಷ್ಟಿ, ಪುತ್ರ ಸಂಭ್ರಮ್ ಮತ್ತು ಊರವರು ಸ್ವಾಗತಿಸಲಿದ್ದಾರೆ.