ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಕೊಲೆಗೆ ಪ್ರತೀಕಾರವಾಗಿ ನಡೆಯಿತೇ ಫಾಝಿಲ್ ಮರ್ಡರ್?

0

ಸುರತ್ಕಲ್‌ನಲ್ಲಿ ನಡೆದ ಫಾಝಿಲ್ ಕೊಲೆ ಕೃತ್ಯದ ಆರೋಪಿಗಳ ಬಂಧನ: ಕಸ್ಟಡಿಗೆ ಪಡೆದ ಪೊಲೀಸರು

  •  ಕಿನ್ನಿಗೋಳಿ ಬಾರ್‌ನಲ್ಲಿ ಊಟ ಮಾಡಿ ಕೊಲೆಗೆ ಸಿದ್ಧತೆ 
  • ಮಂಕಿ ಕ್ಯಾಪ್ ತಯಾರಿಸಿಟ್ಟುಕೊಂಡು ಕ್ಯಾಂಟೀನ್‌ನಲ್ಲಿ ಸೇರಿದ್ದರು

ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸುರತ್ಕಲ್‌ನಲ್ಲಿ ಜುಲೈ 28ರಂದು ರಾತ್ರಿ ನಡೆದ ಮಂಗಳಪೇಟೆ ನಿವಾಸಿ ಫಾಝೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರು ಆರೋಪಿಗಳನ್ನು ಪೊಲೀಸರು ಆಗಸ್ಟ್ 2ರಂದು ಬಂಧಿಸಿದ್ದಾರೆ. ಬಜಪೆ ಕೊಂಚಾರು ನಿವಾಸಿ ಸುಹಾಸ್ ಶೆಟ್ಟಿ(29), ಕಾವಿನಕಲ್ಲು ಕುಳಾಯಿ ನಿವಾಸಿ ಮೋಹನ್(26), ವಿದ್ಯಾನಗರ ಕುಳಾಯಿ ನಿವಾಸಿ ಗಿರಿಧರ(23), ಕಾಟಿಪಳ್ಳ ನಿವಾಸಿಗಳಾದ ಶ್ರೀನಿವಾಸ್(23), ದೀಕ್ಷಿತ್(21) ಮತ್ತು ಅಭಿಷೇಕ್ (21) ಬಂಧಿತರು. ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳು ಜು.26ರಂದು ರಾತ್ರಿ ಹತ್ಯೆಗೈಯಲು ಸಂಚು ರೂಪಿಸಿದ್ದು ಜು.28ರಂದು ಫಾಝಿಲ್‌ರವರನ್ನು ಗುರಿಯಾಗಿಸಿ ಹತ್ಯೆಗೈದಿದ್ದಾರೆ. ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು. ಬೆಳ್ಳಾರೆಯಲ್ಲಿ ಜುಲೈ 26ರಂದು ರಾತ್ರಿ ನಡೆದ ಬಿಜೆಪಿ ಯುವ ಮುಂದಾಳು ಪ್ರವೀಣ್ ನೆಟ್ಟಾರ್ ಹತ್ಯೆಗೆ ಪ್ರತೀಕಾರವಾಗಿ ಫಾಝೀಲ್ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿದೆಯಾದರೂ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.

ಮಂಗಳೂರಿನ ಸುರತ್ಕಲ್‌ನಲ್ಲಿ ಫಾಝಿಲ್ ಹತ್ಯೆ ಪ್ರಕರಣ: ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಸುದ್ದಿಗೋಷ್ಠಿ:

ಮಂಗಳೂರಿನ ಸುರತ್ಕಲ್‌ನಲ್ಲಿ ಜು.28ರಂದು ನಡೆದ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಗಳಾದ ಶ್ರೀನಿವಾಸ ಕಾಟಿಪಳ್ಳ(25), ಅಭಿಷೇಕ್(23) ದೀಕ್ಷಿತ್ ಕಾಟಿಪಳ್ಳ(21), ಸುಹಾಸ್( 29), ಮೋಹನ್(23) ಮತ್ತು ಗಿರೀಶ್(27) ಆರು ಜನರನ್ನು ಬಂಧಿಸಿದ್ದೇವೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಜಿತ್ ಕ್ರಾಸ್ತಾ ಎಂಬವರಿಗೆ ಮೂರು ದಿನಕ್ಕೆ 15 ಸಾವಿರ ರೂ ಬಾಡಿಗೆ ಕೊಡುವುದಾಗಿ ಆರೋಪಿಗಳು ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಣದ ಆಸೆಗೆ ಕಾರು ಗುರುತು ಮರೆ ಮಾಚಲು ಹೇಳಿ ಆರೋಪಿಗಳಿಗೆ ಕಾರು ನೀಡಿದ್ದಾರೆ. ಅಜಿತ್‌ಗೆ ಘಟನೆ ಕುರಿತು ಮಾಹಿತಿ ಇದ್ದರೂ ಕಾರು ನೀಡಿರುವುದರಿಂದ ಅಜಿತ್ ಕ್ರಾಸ್ತಾನನ್ನು ಬಂಧಿಸಲಾಗಿದೆ. ಇಯಾನ್ ಕಾರನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ತಿಳಿಸಿದ ಶಶಿಕುಮಾರ್‌ರವರು ಜು.27ರಂದು ಬಜಪೆಯ ಸುಹಾಸ್ ಶೆಟ್ಟಿ ಮತ್ತು ಅಭಿಷೇಕ್ ಹತ್ಯೆಗೆ ಸಂಚು ರೂಪಿಸಿದ್ದರು. ಕೃತ್ಯಕ್ಕೆ ಅಭಿಷೇಕ್, ಶ್ರೀನಿವಾಸ್‌ರವರನ್ನು ಸೇರಿಸಿಕೊಂಡು ಸುರತ್ಕಲ್‌ನಲ್ಲಿ ಹತ್ಯೆಗೆ ಸ್ಕೆಚ್ ರೂಪಿಸಲಾಗಿದೆ. ಮೋಹನ್ ಹಾಗೂ ಗಿರಿಧರ್‌ರವರು ಇಯಾನ್ ಕಾರನ್ನು ತಂದಿದ್ದು, ಗಿರಿಧರ್ ಕಾರನ್ನು ಡ್ರೈವ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

17 ಕೇಸ್ ದಾಖಲು

ಪ್ರವೀಣ್ ನೆಟ್ಟಾರ್ ಮತ್ತು ಫಾಝಿಲ್ ಸುರತ್ಕಲ್ ಅವರ ಕೊಲೆ ನಡೆದ ಬಳಿಕ ಫೇಸ್ಬುಕ್, ವಾಟ್ಸಪ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಮತ್ತು ಕೋಮು ಪ್ರಚೋದನೆಯ ಸಂದೇಶಗಳನ್ನು ರವಾನಿಸಿದ ವಿಚಾರಕ್ಕೆ ಸಂಬಂಽಸಿ ಮಂಗಳೂರು ಪೊಲೀಸರು ಇದುವರೆಗೆ ಒಟ್ಟು 17 ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂಚು ಹೇಗೆ?

ಫಾಜಿಲ್‌ರವರನ್ನು ಹತ್ಯೆ ಮಾಡಲು ಟಾರ್ಗೆಟ್ ಮಾಡಿದ್ದ ಆರೋಪಿಗಳು ಮಂಗಳೂರು ನ್ಯಾಯಾಲಯದಲ್ಲಿ ಬೇರೆ ಪ್ರಕರಣದ ಕೇಸ್ ವಿಚಾರಣೆ ಮುಗಿಸಿಕೊಂಡು ಬಂದಿದ್ದರು. ಹಂತಕರು ಮುಖವನ್ನು ಮರೆ ಮಾಚಲು ಮಂಕಿ ಕ್ಯಾಪ್‌ಗಳನ್ನು ತಯಾರು ಮಾಡಿಟ್ಟುಕೊಂಡು ಸುರತ್ಕಲ್ ಹೊರವಲಯದ ಕ್ಯಾಂಟೀನ್‌ನಲ್ಲಿ ಸೇರಿದ್ದರು. ಬಳಿಕ ಕಿನ್ನಿಗೋಳಿಯ ಬಾರ್‌ನಲ್ಲಿ ಊಟ ಮಾಡಿ ಹತ್ಯೆಗೆ ಸಿದ್ಧತೆ ಮಾಡಿಕೊಂಡಿದ್ದರು. ಫಾಝಿಲ್ ಹತ್ಯೆಗೂ ಮುನ್ನ ಸುರತ್ಕಲ್‌ನ ಈ ಪರಿಸರದಲ್ಲಿ ಮೂರು ಬಾರಿ ಓಡಾಟ ನಡೆಸಿದ್ದಾರೆ. ಬಳಿಕ ಮಾರಕಾಸ ಹಿಡಿದು ಕಾರಿನಿಂದ ಇಳಿದು ಫಾಜಿಲ್ ಮೇಲೆ ದಾಳಿ ನಡೆಸಿದ್ದಾರೆ. ಗಿರಿಧರ್ ಕಾರು ಚಾಲಕನಾಗಿದ್ದು, ದೀಕ್ಷಿತ್ ಕಾರಿನಲ್ಲೇ ಇದ್ದ ಹಾಗೂ ಅಭಿಷೇಕ್ ಕಾರಿನಿಂದ ಇಳಿದು ಹತ್ಯೆಗೆ ಸಹಕರಿಸಿದ್ದಾರೆ. ಫಾಝಿಲ್‌ನ ಹತ್ಯೆ ಮಾಡಿ ಆರೂ ಜನರು ಕಾರ್ಕಳದ ಇನ್ನಾ ಭಾಗಕ್ಕೆ ತೆರಳಿ ಕಾರು ನಿಲ್ಲಿಸಿ ಪರಾರಿಯಾಗಿದ್ದಾರೆ. ಬಳಿಕ ಮತ್ತೊಬ್ಬನ ಮೂಲಕ ಮತ್ತೊಂದು ಕಾರು ತರಿಸಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಬಳಿಕ ಕಾರು ಮಾಲಕ ಸುಳ್ಯ ಉಬರಡ್ಕ ಮೂಲದವನಾಗಿದ್ದು ಮಂಗಳೂರಿನಲ್ಲಿ ವಾಸವಿರುವ ಅಜಿತ್ ಕ್ರಾಸ್ತಾನನ್ನು ಬಂಧಿಸಲಾಗಿದೆ. ಉಳಿದ ಹಂತಕರನ್ನು ಉಡುಪಿಯ ಉದ್ಯಾವರ ಬಳಿ ಬಂಧಿಸಲಾಗಿದೆ. ಬಂಧಿತರನ್ನು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರ್ ಕೊಲೆಗೆ ಪ್ರತೀಕಾರವಾಗಿ -ಝಿಲ್ ಕೊಲೆ ನಡೆಯಿತೇ ಅಥವಾ ಬೇರೆ ಕಾರಣಕ್ಕಾಗಿ ಹತ್ಯೆ ಮಾಡಲಾಯಿತೇ ಎಂದು ಮಾಹಿತಿ ಲಭ್ಯವಾಗಬೇಕಿದೆ.

ಹಲವರಿಗೆ ಸ್ಕೆಚ್ ಹಾಕಿದ್ದರು

ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಕೊಲೆ ಪ್ರಕರಣದ ಆರೋಪಿಗಳು ಹಲವರಿಗೆ ಸ್ಕೆಚ್ ಹಾಕಿದ್ದರು. ಧರ್ಮಗುರುಗಳು, ಉದ್ಯಮಿಗಳು, ಮುಸ್ಲಿಂ ಸಂಘಟನೆಯ ಮುಖಂಡರುಗಳು ಸೇರಿದಂತೆ ಏಳೆಂಟು ಮಂದಿ ಇವರ ಹಿಟ್ ಲಿಸ್ಟಲಿದ್ದರು. ಕೊನೆಗೆ ಸುಹಾಸ್ ಶೆಟ್ಟಿ ಮತ್ತಿತರರು ಫಾಝಿಲ್ ಅವರನ್ನು ಕೊಲೆ ಮಾಡಲು ಅಂತಿಮ ನಿರ್ಧಾರ ಮಾಡಿದರು ಎಂದು ಮಾಹಿತಿ ಲಭ್ಯವಾಗಿದೆ. ಸುರತ್ಕಲ್ ನಿವಾಸಿ, ವೃತ್ತಿಯಲ್ಲಿ ಚಾಲಕರಾಗಿರುವ ಉಮ್ಮರ್ ಫಾರೂಕ್ ಅವರ ಮೂವರು ಮಕ್ಕಳ ಪೈಕಿ ಮಧ್ಯದವರಾದ ಫಾಝಿಲ್ ಯಾವುದೇ ಸಂಘಟನೆಯಲ್ಲಿ ತೊಡಗಿಸಿಕೊಂಡವರಲ್ಲ. ಕ್ರಿಮಿನಲ್ ಹಿನ್ನೆಲೆಯೂ ಇಲ್ಲ. ಸಜ್ಜನ, ಅಮಾಯಕ ಆಗಿದ್ದ ಎಂದು ಎಲ್ಲರಿಂದಲೂ ಹೇಳಲ್ಪಡುತ್ತಿರುವ ಫಾಝಿಲ್ ಅವರನ್ನೇ ಯಾಕೆ ಟಾರ್ಗೆಟ್ ಮಾಡಿ ಕೊಲೆ ಮಾಡಲಾಯಿತು ಎಂಬುದು ಯಕ್ಷ ಪ್ರಶ್ನೆ ಆಗಿದೆ.

LEAVE A REPLY

Please enter your comment!
Please enter your name here