ಸವಣೂರು : ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಟಿಟೊಂಜಿ ದಿನ ಹಾಗೂ ವಿದ್ಯಾರಶ್ಮಿ ಕಲಾ ರಂಗದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಅವರು ಆಟಿ ತಿಂಗಳಲ್ಲಿ ನಡೆಯುವ ಆಚರಣೆಗಳ ವೈಜ್ಞಾನಿಕ ಮಹತ್ವವನ್ನು ವಿವರಿಸಿ,ನೂತನವಾಗಿ ಆರಂಭಗೊಂಡ ವಿದ್ಯಾರಶ್ಮಿ ಕಲಾರಂಗಕ್ಕೆ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಯಾದ ಇಡಿ. ಅಶ್ವಿನ್ ಎಲ್ ಶೆಟ್ಟಿ ಯವರು ಸಾಂಪ್ರದಾಯಿಕ ಆಚರಣೆಗಳ ಬೀಡಾಗಿರುವ ನಮ್ಮ ದೇಶದಲ್ಲಿ ಪ್ರತಿಯೊಂದು ಆಚರಣೆಗೂ ಐತಿಹಾಸಿಕ ಹಿನ್ನಲೆಯಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಹಿರಿಯ ರಂಗಕರ್ಮಿ ಶ್ರೀಸಾಯಿ ನಾರಾಯಣ ಕಲ್ಮಡ್ಕ ಮಾತನಾಡಿ,ಆಟಿ ತಿಂಗಳ ಮಹತ್ವವನ್ನು ತಿಳಿಸಿ ರಂಗಕಲೆಯು ಹೇಗೆ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂಬುದನ್ನು ವಿವರಿಸಿದರು. ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ನಾರಾಯಣ ಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಉಪಪ್ರಾಂಶುಪಾಲ ಶೇಷಗಿರಿ ಎಂ ಸ್ವಾಗತಿಸಿ, ವಾಣಿಜ್ಯಶಾಸ್ತ್ರದ ಉಪನ್ಯಾಸಕ ನಿರಂಜನ್ ವಂದಿಸಿದರು.ವಿದ್ಯಾರ್ಥಿನಿ ಭೂಮಿತಾ ಕಾರ್ಯಕ್ರಮ ನಿರೂಪಿಸಿದರು.