ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ವಾರ ಕಳೆದರೂ ಪತ್ತೆಯಾಗದ ಪ್ರಮುಖ ಆರೋಪಿಗಳು

0

  •  ಆರೋಪಿ ಶಫೀಕ್ ಬೆಳ್ಳಾರೆ ಮತ್ತೆ ಪೊಲೀಸ್ ಕಸ್ಟಡಿಗೆ
  •  ಝಾಕಿರ್, ಸದ್ದಾಂ, ಹ್ಯಾರೀಸ್ ನ್ಯಾಯಾಂಗ ಬಂಧನಕ್ಕೆ

ಪುತ್ತೂರು:ಬೆಳ್ಳಾರೆಯಲ್ಲಿ ಜು.26ರಂದು ರಾತ್ರಿ ನಡೆದಿದ್ದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬAಧಿಸಿ ಬಂಧಿತರಾಗಿರುವ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಓರ್ವ ಆರೋಪಿಯ ಪೊಲೀಸ್ ಕಸ್ಟಡಿ ಅವಧಿಯನ್ನು 5 ದಿನ ವಿಸ್ತರಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಆರಂಭದಲ್ಲಿ ಬಂಧಿತರಾಗಿ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗಳಾದ ಸವಣೂರಿನ ಝಾಕಿರ್ ಮತ್ತು ಬೆಳ್ಳಾರೆ ಪೇಟೆ ನಿವಾಸಿ ಶಫೀಕ್‌ನನ್ನು ಆ.2ರಂದು ಸಂಜೆ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಬೆಳ್ಳಾರೆ ಪೊಲೀಸರು ಆರೋಪಿ ಶಫೀಕ್‌ರನ್ನು ಮತ್ತೆ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.ಝಾಕಿರ್ ಮತ್ತು ಆ.2ರಂದು ಬಂಧಿತರಾಗಿರುವ ಬೆಳ್ಳಾರೆ ಪಲ್ಲಿಮಜಲು ನಿವಾಸಿಗಳಾದ ಸದ್ದಾಂ(32ವ) ಮತ್ತು ಹಾರಿಸ್(42ವ)ಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಆರಂಭದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಾದ ಶಫೀಕ್ ಮತ್ತು ಜಾಕೀರ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದರು.ಈ ಅವಧಿಯಲ್ಲಿ ಆರೋಪಿಗಳು ವಿಚಾರಣೆ ವೇಳೆ ನೀಡಿದ್ದ ಮಾಹಿತಿಯಾಧರಿಸಿ ತನಿಖೆ ಮುಂದುವರಿಸಿದ್ದ ಪೊಲೀಸರು ಬೆಳ್ಳಾರೆ ಪಳ್ಳಿಮಜಲು ನಿವಾಸಿಗಳಾದ ಸದ್ದಾಂ ಮತ್ತು ಹ್ಯಾರೀಸ್‌ರನ್ನು ಬಂಧಿಸಿದ್ದರು.ಪೊಲೀಸ್ ಕಸ್ಟಡಿಯ ಅವಧಿ ಮುಕ್ತಾಯಗೊಂಡಿದ್ದ ಹಿನ್ನೆಲೆಯಲ್ಲಿ ಶಫೀಕ್ ಮತ್ತು ಝಾಕಿರ್‌ರನ್ನು ಆ.2ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಶಫೀಕ್ ಮತ್ತೆ ಪೊಲೀಸ್ ಕಸ್ಟಡಿಗೆ: ಕೃತ್ಯ ನಡೆದು ವಾರ ಕಳೆದರೂ ಇನ್ನೂ ಪ್ರಮುಖ ಆರೋಪಿಗಳ ಬಂಧನವಾಗದೇ ಇರುವ ಹಿನ್ನೆಲೆಯಲ್ಲಿ ಬಂಧಿತ ಆರೋಪಿ ಶಫೀಕ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಮತ್ತೆ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.ಎರಡನೇ ಬಾರಿ ಆರೋಪಿಯನ್ನು ಪೊಲೀಸರ ಕಸ್ಟಡಿಗೆ ನೀಡುವುದಕ್ಕೆ ಆರೋಪಿ ಪರ ವಕೀಲರು ಪ್ರಬಲವಾಗಿ ಆಕ್ಷೇಪಿಸಿದರು.ಆದರೆ, ಪ್ರಮುಖ ಆರೋಪಿಗಳ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳುವುದು ಸೇರಿದಂತೆ ಇನ್ನಷ್ಟು ವಿಚಾರಣೆ ನಡೆಸಬೇಕಾದ ಅಗತ್ಯವಿರುವುದರಿಂದ ಆರೋಪಿ ಶಫೀಕ್‌ನ ಪೊಲೀಸ್ ಕಸ್ಟಡಿ ಅವಧಿಯನ್ನು ವಿಸ್ತರಿಸುವಂತೆ ಪೊಲೀಸರ ಪರ ಸಹಾಯಕ ಸರಕಾರಿ ಅಭಿಯೋಜಕರು ಮಾಡಿದ್ದ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಆರೋಪಿ ಶಫೀಕ್‌ನನ್ನು ಆ.2ರಿಂದ ಮತ್ತೆ 5 ದಿನಗಳ ಅವಧಿಗೆ ಪೊಲೀಸರ ಕಸ್ಟಡಿಗೆ ನೀಡಿ ಆದೇಶಿಸಿದೆ.
ಪ್ರಮುಖ ಆರೋಪಿಗಳು ನಾಪತ್ತೆ: ಜು.26ರಂದು ರಾತ್ರಿ ಪ್ರವೀಣ್ ಅವರ ಹತ್ಯೆ ನಡೆದಿದೆ.ಘಟನೆ ನಡೆದು ವಾರ ಕಳೆದರೂ ಇನ್ನೂ ಪ್ರಮುಖ ಆರೋಪಿಗಳ ಬಂಧನವಾಗಿಲ್ಲ.ಪ್ರಮುಖ ಆರೋಪಿಗಳ ಕುರಿತು ಪೊಲೀಸರಿಗೆ ಮಹತ್ವದ ಮಾಹಿತಿ ಲಭಿಸಿರುವುದಾಗಿ ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿಕೊಂಡಿದ್ದರೂ ಇನ್ನೂ ಪ್ರಮುಖ ಆರೋಪಿಗಳ ಬಂಧನವಾಗಿಲ್ಲ.ಆ.5ರೊಳಗೆ ನೈಜ ಆರೋಪಿಗಳ ಬಂಧನವಾಗದೇ ಇದ್ದಲ್ಲಿ ತಾನೇ ಖುದ್ದು ಬಂದು ದ.ಕ.ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಈಗಾಗಲೇ ಹೇಳಿದ್ದಾರೆ.ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಎನ್‌ಐಎಯಿಂದ ಪ್ರಾಥಮಿಕ ತನಿಖೆ: ಪ್ರಕರಣದ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಕೂಡಾ ಪ್ರಾಥಮಿಕ ತನಿಖೆ ಆರಂಭಿಸಿದೆ.ಕೇರಳ ಹಾಗೂ ಮಂಗಳೂರಿನಲ್ಲಿ ಎನ್‌ಐಎ ಅಧಿಕಾರಿಗಳ ತಂಡ ಮಾಹಿತಿ ಸಂಗ್ರಹಿಸಿದೆ.ಆರೋಪಿಗಳಿಗೆ ಪಿಎಫ್‌ಐ ಸೇರಿದಂತೆ ಯಾವುದಾದರೂ ಪ್ರಮುಖ ಸಂಘಟನೆಗಳ ಜೊತೆ ನಂಟು ಇದೆಯೇ ಎಂಬ ಕುರಿತು ಎನ್‌ಐಎ ಮಾಹಿತಿ ಕಲೆ ಹಾಕಿದೆ.

LEAVE A REPLY

Please enter your comment!
Please enter your name here