ನೆಲ್ಯಾಡಿ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2021-22ನೇ ಸಾಲಿನಲ್ಲಿ ಮಾಡಿರುವ ವಿಶೇಷ ಸಾಧನೆಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಿಂದ ಸತತ 4ನೇ ಬಾರಿಗೆ ಪ್ರಶಸ್ತಿಗೆ ಆಯ್ಕೆಯಾಗಿದ್ದು ಆ.5ರಂದು ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸಂಘದಲ್ಲಿ 5868 ಎ ತರಗತಿ ಸದಸ್ಯರಿದ್ದು 6,86,32,644 ರೂ.ಪಾಲು ಬಂಡವಾಳವಿದೆ. ಅಲ್ಲದೆ ಸಿ ತರಗತಿ ಪಾಲು ಬಂಡವಾಳ ರೂ.12,990 ಇದ್ದು ಒಟ್ಟು 6,86,32,644 ರೂ.ಪಾಲು ಬಂಡವಾಳವಿದೆ. ರೂ.25,87,68,666 ಠೇವಣಾತಿ ಇದ್ದು ವರದಿ ವರ್ಷದ ಕೊನೆಗೆ 64,89,66,363 ರೂ., ಸದಸ್ಯರ ಹೊರ ಬಾಕಿ ಸಾಲ ಇರುತ್ತದೆ. 2021-22ನೇ ಸಾಲಿನಲ್ಲಿ 4,21,40,54,706 ರೂ.,ವ್ಯವಹಾರ ನಡೆಸಿದ್ದು 1,24,62,694 ರೂ., ನಿವ್ವಳ ಲಾಭಗಳಿಸಿದೆ. ಸಂಘವು ನೆಲ್ಯಾಡಿ, ಕೌಕ್ರಾಡಿ, ಇಚ್ಲಂಪಾಡಿ,ಶಿರಾಡಿ, ಕೊಣಾಲು, ಗೋಳಿತ್ತೊಟ್ಟು, ಆಲಂತಾಯ ಎಂಬ 7 ಕಂದಾಯ ಗ್ರಾಮಗಳನ್ನು ಹೊಂದಿದೆ. ಗೋಳಿತ್ತೊಟ್ಟು, ಶಿರಾಡಿ, ಇಚ್ಲಂಪಾಡಿಯಲ್ಲಿ ಶಾಖೆಗಳನ್ನು ಹೊಂದಿದೆ. ಗೋಳಿತ್ತೊಟ್ಟು ಮತ್ತು ಶಿರಾಡಿ ಶಾಖೆಯಲ್ಲಿ ಎಲ್ಲಾ ರೀತಿಯ ವ್ಯವಹಾರವಿದ್ದು ಇಚ್ಲಂಪಾಡಿ ಶಾಖೆಯಲ್ಲಿ ಪಡಿತರ ವ್ಯವಹಾರ ಮಾತ್ರ ಇರುತ್ತದೆ. ಕೇಂದ್ರ ಕಚೇರಿ ಮತ್ತು ಗೋಳಿತ್ತೊಟ್ಟು ಶಾಖೆಯು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಶಿರಾಡಿ ಶಾಖೆಯು ಬಾಡಿಗೆ ಕಟ್ಟಡದಲ್ಲಿ ವ್ಯವಹಾರ ನಡೆಸುತ್ತಿದೆ. ಇಚ್ಲಂಪಾಡಿ ಶಾಖೆಯ ಪಡಿತರ ವಿತರಣೆಯನ್ನು ಕೌಕ್ರಾಡಿ ಗ್ರಾಮ ಪಂಚಾಯತ್ನವರು ನೀಡಿರುವ ಗೋದಾಮುನಲ್ಲಿ ಬಾಡಿಗೆ ರಹಿತವಾಗಿ ಕಾರ್ಯನಿರ್ವಹಿಸುತ್ತಿದೆ.
ಸಂಘದ ಆಡಳಿತ ಮಂಡಳಿಯಲ್ಲಿ 12 ಮಂದಿ ಚುನಾಯಿತ ನಿರ್ದೇಶಕರಿದ್ದು ಅಧ್ಯಕ್ಷರಾಗಿ ನಿರಂತರ 27 ವರ್ಷಗಳಿಂದ ಉಮೇಶ್ ಶೆಟ್ಟಿ ಪಟ್ಟೆಯವರು ಕಾರ್ಯನಿರ್ವಹಿಸುತ್ತಿದ್ದಾರೆ. ಉಪಾಧ್ಯಕ್ಷರಾಗಿ ಕಮಲಾಕ್ಷ ಗೌಡ, ನಿರ್ದೇಶಕರುಗಳಾಗಿ ಜಯಾನಂದ ಬಂಟ್ರಿಯಾಲ್, ಬಾಲಕೃಷ್ಣ ಬಾಣಜಾಲು, ಸರ್ವೋತ್ತಮ ಗೌಡ, ಪ್ರಶಾಂತ್ ರೈ, ಸುದರ್ಶನ್, ಉಷಾ ಅಂಚನ್, ಸುಲೋಚನಾ ಡಿ., ಅಣ್ಣು ಬಿ., ಸುಮಿತ್ರ, ಗುರುರಾಜ್ ಭಟ್, ವಲಯ ಮೇಲ್ವಿಚಾರಕರಾಗಿ ವಸಂತ ಎಸ್., ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ದಯಾಕರ ರೈ ಕೆ.ಯಂ.,ರವರು ಕಾರ್ಯನಿರ್ವಹಿಸುತ್ತಿದ್ದಾರೆ.
ಆ.5-ಪ್ರಶಸ್ತಿ ಪ್ರದಾನ:
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಕಚೇರಿಯಲ್ಲಿ ಆ.5ರಂದು ನಡೆಯುವ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಮತ್ತು ಬ್ಯಾಂಕ್ನ ನಿರ್ದೇಶಕರುಗಳು ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.