ಪ್ರಕೃತಿ ದುರಂತ ಮತ್ತು ಜಲ ಸ್ಫೋಟದಿಂದ ತೀವ್ರ ಸಂಕಷ್ಟಕ್ಕೀಡಾದ ಬಡ ಕುಟುಂಬವೊಂದರ ಕಥೆಯನ್ನು ಸುದ್ದಿ ಚಾನೆಲ್ ನಲ್ಲಿ ನೋಡಿದ ಪುತ್ತೂರು ಬಿಜೆಪಿ ನಗರ ಮಂಡಲ ಅಧ್ಯಕ್ಷ ಹಾಗೂ ಪುತ್ತೂರು ನಗರ ಸಭೆ ಸದಸ್ಯ ಜಗನ್ನಿವಾಸ ರಾವ್ ಅವರು ಕುಟುಂಬಕ್ಕೆ ಸಹಾಯ ನೀಡುವ ಮೂಲಕ ಸ್ಪಂದಿಸಿದ್ದಾರೆ.
ಸುಳ್ಯ ತಾಲೂಕಿನ ಕಲ್ಮಕಾರಿನ ಎಂ.ಚಿದಾನಂದ ಎಂಬವರ ಬಡ ಕುಟುಂಬದ ಮನೆಯೊಳಗೆ ನೀರು ನುಗ್ಗಿ ಹಾನಿ ಸಂಭವಿಸಿತ್ತು. ಅಸೌಖ್ಯಕ್ಕೀಡಾದ ಚಿದಾನಂದ ಅವರ ಪತ್ನಿ ಹಾಗೂ ಕಾಲೇಜು ಓದುತ್ತಿರುವ ಪುತ್ರಿ ಘಟನೆಯಿಂದ ತೀವ್ರ ವಿಚಲಿತರಾಗಿದ್ದರು. ಇವರ ಕರುಣಾಜನಕ ಕಥೆ ಸುಳ್ಯ ಸುದ್ದಿ ಚಾನೆಲ್ ನಲ್ಲಿ ಬಿತ್ತರವಾಗಿತ್ತು.
ಇದನ್ನು ನೋಡಿದ ಜಗನ್ನಿವಾಸ ರಾವ್ ಸುದ್ದಿ ಪ್ರತಿನಿಧಿಯನ್ನು ಸಂಪರ್ಕಿಸಿ ಕುಟುಂಬದ ಕುರಿತು ಹೆಚ್ಚಿನ ಮಾಹಿತಿ ಪಡೆದು ಬ್ಯಾಂಕ್ ಅಕೌಂಟ್ ಮೂಲಕ ಸಣ್ಣ ಆರ್ಥಿಕ ನೆರವು ಮಾಡಿದ್ದಾರಲ್ಲದೆ ತಮ್ಮ ಮಿತ್ರರಲ್ಲೂ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅವರ ಅನೇಕ ಮಿತ್ರರೂ ಕೂಡಾ ಈ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿದ್ದಾರೆ.