ಪುತ್ತೂರು: ಭಾರತೀಯ ಗಡಿ ಭದ್ರತಾ ಪಡೆಯ ಯೋಧರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪುಷ್ಪರಾಜ್ ಬಾರ್ತಿಕುಮೇರುರವರು ಸೇವಾ ನಿವೃತ್ತಿ ಹೊಂದಿದ್ದಾರೆ. ಕೋಡಿಂಬಾಡಿ ಗ್ರಾಮದ ಬಾರ್ತಿಕುಮೇರು ನಿವಾಸಿಗಳಾದ ರುಕ್ಮಯ ಗೌಡ ಮತ್ತು ಜಾನಕಿ ದಂಪತಿಯ ಪುತ್ರರಾದ ಪುಷ್ಪರಾಜ್ ಅವರು ಕೋಡಿಂಬಾಡಿ ಹಿರಿಯ ಪ್ರಾಥಮಿಕ ಶಾಲೆ, ಶಾಂತಿನಗರ ಸರಕಾರಿ ಪ್ರೌಢಶಾಲೆ ಮತ್ತು ಪುತ್ತೂರು ಸಂತಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆದ ಬಳಿಕ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದಿದ್ದರು. 2001ರಲ್ಲಿ ಭಾರತೀಯ ಗಡಿ ಭದ್ರತಾ ಪಡೆಗೆ ಸೇರಿದ ಪುಷ್ಪರಾಜ್ ಅವರು ಹಝಾರಿಯಾ ಬಾಗ್, ಅಸ್ಸಾಂ, ಗುಜರಾತ್, ರಾಜಸ್ಥಾನ, ಪಂಜಾಬ್, ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುವುದರ ಜತೆಗೆ ಬಾಂಗ್ಲಾದೇಶ ಮತ್ತು ಪಾಕಿಸ್ಥಾನ ಗಡಿಯಲ್ಲಿ ದೇಶ ಸೇವೆ ಸಲ್ಲಿಸಿದ್ದರು. ಜತೆಗೆ ಇವರು ಬಿ.ಎಸ್.ಎಫ್. ವೈಟಿಂಗ್ ಲಿಫ್ಟ್ ತಂಡದಲ್ಲಿ ರಾಷ್ಟ್ರೀಯ ಮಟ್ಟದ ಸಾಧನೆ ಮಾಡಿ ಗಮನ ಸೆಳೆದಿದ್ದರು.
ನಿವೃತ್ತರಾದ ಬಳಿಕ ಆಗಮಿಸುತ್ತಿರುವ ಪುಷ್ಪರಾಜ್ ಅವರನ್ನು ಆ.7ರಂದು ಕೋಡಿಂಬಾಡಿಯ ವಿನಾಯಕ ನಗರದಲ್ಲಿರುವ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ದ್ವಾರದ ಬಳಿ ಸ್ವಾಗತಿಸುವ ಕಾರ್ಯಕ್ರಮ ನಡೆಯಲಿದೆ. ಬಳಿಕ ಮಠಂತಬೆಟ್ಟು ಪಾಲೆತ್ತಿಮಾರ್ ಗದ್ದೆಯಲ್ಲಿ ನಡೆಯುವ ಆಟಿದ ಐಸಿರ ಕಾರ್ಯಕ್ರಮದಲ್ಲಿ ಗೌರವಾರ್ಪಣೆ ನಡೆಯಲಿದೆ.