ಪುತ್ತೂರು: ಆ.5ರ ಸಂಜೆ ಬೊಳುವಾರು ವಸತಿ ಸಮುಚ್ಚಾಯವೊಂದರ ಬಿ ಬ್ಲಾಕ್ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಪ್ರೌಢಶಾಲೆಯ 9ನೇ ತರಗತಿಯ ಬಾಲಕ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ಪದ್ಮುಂಜ ಕೆನರಾ ಬ್ಯಾಂಕ್ ನಿವೃತ ಮ್ಯಾನೇಜರ್, ಬೊಳುವಾರು ಶ್ರೀ ದುರ್ಗಾಪರಮೇಶ್ವರಿ ಮಲರಾಯ ಸಪರಿವಾರ ಕ್ಷೇತ್ರದ ವಿಶ್ವಸ್ಥ ಮಂಡಳಿ ಅಧ್ಯಕ್ಷ ಮನೋಹರ ರೈ ಅವರ ಪುತ್ರ ಸುದಾನ ವಸತಿಯುತ ಶಾಲೆಯ ಸುಶಾನ್ ರೈ ಮೃತಪಟ್ಟವರು. ಸುಶಾನ್ ರೈ ಅವರು ಶಾಲೆಯಿಂದ ಮನೆಗೆ ಹೋಗದೆ ಬೊಳುವಾರು ವಸತಿ ಸಮುಚ್ಚಾಯಕ್ಕೆ ತೆರಳಿದ್ದರು. ಕೆಲ ಸಮಯದ ವೇಳೆ ಅವರು ಸಮುಚ್ಚಾಯದ ಕೆಳಗೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರು ತಂದೆ ಮನೋಹರ್ ರೈ, ತಾಯಿ ಸುಧಾ ಎಮ್ ರೈ ಮತ್ತು ಸಹೋದರ ಸೋಹನ್ ರೈಯವರನ್ನು ಅಗಲಿದ್ದಾರೆ.
ವಸತಿ ಸಮುಚ್ಚಾಯದ ಕಟ್ಟಡದಲ್ಲಿ ಶಾಲಾ ಬ್ಯಾಗ್ ಪತ್ತೆ:
ಸುಶಾನ್ ರೈ ಅವರು ಶಾಲೆಯಿಂದ ನೇರ ಮನೆಗೆ ಹೋಗದೆ ವಸತಿ ಸಮುಚ್ಚಾಯಕ್ಕೆ ಸಂಜೆ ಗಂಟೆ 4.20 ಕ್ಕೆ ಒಳಗೆ ಬಂದಿರುವುದು ಸಿ.ಸಿ. ಕ್ಯಾಮರದಲ್ಲಿ ಸೆರೆಯಾಗಿದೆ. ಕೆಲವೇ ನಿಮಿಷದಲ್ಲಿ ಆತ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ಆತ ಯಾವ ಮಹಡಿಯಿಂದ ಬಿದ್ದಿರುವುದೆಂದು ತಿಳಿದಿಲ್ಲ. ಆದರೆ ಆತನ ಶಾಲಾ ಬ್ಯಾಗ್ ಮಾತ್ರ 5ನೇ ಮಹಡಿಯಲ್ಲಿ ಪತ್ತೆಯಾಗಿದೆ.