ಪುತ್ತೂರು:ಪುತ್ತೂರು ನಗರ ಪೊಲೀಸ್ ಠಾಣೆ ಮತ್ತು ಕಡಬ ಠಾಣೆಯ ಈರ್ವರು ಎಸ್ಐಗಳನ್ನು ವರ್ಗಾವಣೆಗೊಳಿಸಿ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ದೇವಜ್ಯೋತಿ ರೇ ಆದೇಶ ಹೊರಡಿಸಿದ್ದಾರೆ.
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜೇಶ್ ಕೆ.ವಿ.ಅವರನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.ಕಡಬ ಠಾಣೆಯ ಶ್ರೀಕಾಂತ್ ರಾಥೋಡ್ ಅವರನ್ನು ಪುತ್ತೂರು ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.
ಸಂಬಂಧಪಟ್ಟ ಪೊಲೀಸ್ ಅಧೀಕ್ಷಕರು, ವರ್ಗಾವಣೆಗೊಂಡಿರುವ ಎಸ್.ಐ.ಗಳನ್ನು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಿಂದ ಕೂಡಲೇ ಬಿಡುಗಡೆಗೊಳಿಸಿ, ಯಾವುದೇ ಸೇರುವಿಕೆ ಕಾಲವನ್ನು ಉಪಯೋಗಿಸಿಕೊಳ್ಳದೆ ವರ್ಗಾವಣೆ ಮಾಡಲಾದ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಿ ಕಳುಹಿಸಬೇಕು ಮತ್ತು ಅವರನ್ನು ಬಿಡುಗಡೆ ಮಾಡಿದ ಹಾಗೂ ಕರ್ತವ್ಯಕ್ಕೆ ವರದಿ ಮಾಡಿಕೊಂಡ ದಿನಾಂಕದ ಬಗ್ಗೆ ಕಚೇರಿಗೆ ಮಾಹಿತಿ ನೀಡಬೇಕು.ಈ ಪಿಎಸ್ಐಗಳ ವರ್ಗಾವಣೆ ಆದೇಶದಿಂದಾಗಿ ಸ್ಥಳ ನಿಯುಕ್ತಿಗೆ ಬಾಕಿಯಾಗುವ ಪಿಎಸ್ಐ ಅವರನ್ನು ಮುಂದಿನ ಸ್ಥಳ ನಿಯುಕ್ತಿಗಾಗಿ ಪಶ್ಚಿಮ ವಲಯ ಕಚೇರಿಯಲ್ಲಿ ವರದಿ ಮಾಡುವಂತೆ ಸೂಚಿಸಿ ಕಳುಹಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಶ್ರೀಕಾಂತ್ ರಾಥೋಡ್ ಅವರ ವರ್ಗಾವಣೆಯಿಂದ ತೆರವಾಗಲಿರುವ ಕಡಬ ಠಾಣೆಯ ಎಸ್.ಐ.ಹುದ್ದೆಗೆ ಯಾರನ್ನೂ ವರ್ಗಾವಣೆಗೊಳಿಸಲಾಗಿಲ್ಲ.
ಕುಮಾರ್ ಕಾಂಬ್ಳೆ, ಉಮೇಶ್ ಉಪ್ಪಳಿಕೆಯವರಿಗೂ ವರ್ಗಾವಣೆ?
ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಪುತ್ತೂರು ನಗರ ಪೊಲೀಸ್ ಠಾಣೆಯ ರಾಜೇಶ್ ಕೆ.ವಿ.ಅವರನ್ನು ವರ್ಗಾವಣೆ ಮಾಡಲಾಗಿದೆ.ಉಪ್ಪಿನಂಗಡಿಯ ಕುಮಾರ್ ಕಾಂಬ್ಳೆ ಅವರನ್ನೂ ವರ್ಗಾವಣೆಗೊಳಿಸಲಾಗಿದೆ.ಆದರೆ ಅವರಿಗಿನ್ನೂ ಸ್ಥಳ ಕಾಣಿಸದೆ ಪಶ್ಚಿಮ ವಲಯ ಐಜಿಪಿ ಕಚೇರಿಗೆ ನಿಯುಕ್ತಿಗೊಳಿಸಲಾಗಿದೆ.ಜೊತೆಗೆ ಪುತ್ತೂರು ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕರಾಗಿರುವ ಉಮೇಶ್ ಉಪ್ಪಳಿಕೆ ಅವರನ್ನೂ ವರ್ಗಾವಣೆಗೊಳಿಸಿ,ಈ ಹಿಂದೆ ಉಪ್ಪಿನಂಗಡಿಯಲ್ಲಿ ಎಸ್.ಐ.ಆಗಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ವೃತ್ತ ನಿರೀಕ್ಷಕರಾಗಿರುವ ರವಿ ಎಂಬವರನ್ನು ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾಗಿ ನೇಮಕಗೊಳಿಸಿ ವರ್ಗಾವಣೆಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.ಆದರೆ ಈ ಕುರಿತು ಅಧಿಕೃತ ಮಾಹಿತಿ ಲಭಿಸಿಲ್ಲ.