ಪುತ್ತೂರು: ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾಗಿದ್ದ ಉಮೇಶ್ ಉಪ್ಪಳಿಕೆರವರನ್ನು ವರ್ಗಾವಣೆ ಮಾಡಲಾಗಿದ್ದು ತೆರವಾದ ಸ್ಥಾನಕ್ಕೆ ರವಿ ಬಿ.ಯಸ್. ಆಗಮಿಸಲಿದ್ದಾರೆ.
ಸಂಪ್ಯದಲ್ಲಿರುವ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ, ಕಡಬ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾಗಿದ್ದ ಉಮೇಶ್ ಉಪ್ಪಳಿಕೆರವರನ್ನು ದ.ಕ.ಜಿಲ್ಲಾ ಡಿ.ಎಸ್.ಬಿ.ಗೆ ವರ್ಗಾವಣೆ ಮಾಡಲಾಗಿದೆ. ಪ್ರಸ್ತುತ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕರಾಗಿದ್ದ ರವಿ ಬಿ.ಎಸ್.ಅವರನ್ನು ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾಗಿ ವರ್ಗಾವಣೆ ಮಾಡಲಾಗಿದೆ. ರವಿ ಬಿ.ಎಸ್.ಅವರು ಈ ಹಿಂದೆ ಸಂಪ್ಯ ಪೊಲೀಸ್ ಠಾಣೆ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣಾ ಎಸ್. ಐ. ಆಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಭಡ್ತಿ ಪಡೆದಿದ್ದರು. ಇದೀಗ ಒಟ್ಟು 64 ವೃತ್ತ ನಿರೀಕ್ಷರನ್ನು ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ಇದರಲ್ಲಿ ಉಮೇಶ್ ಉಪ್ಪಳಿಕೆ ಮತ್ತು ರವಿ ಬಿ.ಯಸ್. ಒಳಗೊಂಡಿದ್ದಾರೆ. ಈಗಾಗಲೇ ಕಡಬ ಪೊಲೀಸ್ ಠಾಣೆಯ ಎಸ್.ಐ. ಶ್ರೀಕಾಂತ್ ರಾಥೋಡ್ ಅವರನ್ನು ಪುತ್ತೂರು ನಗರ ಠಾಣೆಗೆ ಮತ್ತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಎಸ್.ಐ. ಆಗಿದ್ದ ರಾಜೇಶ್ ಕೆ.ವಿ.ರವರನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಸ್.ಐ.ಯಾಗಿದ್ದ ಕುಮಾರ್ ಕಾಂಬ್ಳೆಯವರನ್ನು ವರ್ಗಾವಣೆಗೊಳಿಸಲಾಗಿದೆಯಾದರೂ ಸದ್ಯಕ್ಕೆ ಅವರಿಗೆ ಸ್ಥಳ ನಿಗದಿ ಪಡಿಸದೆ ಮಂಗಳೂರಿನಲ್ಲಿರುವ ಪಶ್ಚಿಮ ವಲಯ ಐಜಿಪಿ ಕಛೇರಿಗೆ ನಿಯುಕ್ತಿಗೊಳಿಸಲಾಗಿದೆ.