ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ರಾಜೇಶ್ ಕೆ.ವಿ. ಎಂಬವರು ಆಗಮಿಸಿ ಅಧಿಕಾರ ಸ್ವೀಕರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ರಾಜೇಶ್ ಕೆ.ವಿ. ಪುತ್ತೂರು ನಗರ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದವರು ಇಲ್ಲಿಗೆ ವರ್ಗಾವಣೆ ಹೊಂದಿ ಆಗಮಿಸಿರುತ್ತಾರೆ. ಉಪ್ಪಿನಂಗಡಿಯಲ್ಲಿ ಎಸ್.ಐ. ಆಗಿದ್ದ ಕುಮಾರ್ ಕಾಂಬ್ಳೆಯವರನ್ನು ಕರ್ತವ್ಯ ಲೋಪದ ಆಪಾದನೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.
ಕಾಂಬ್ಳೆಯವರು ಕಳೆದ 1 ವರ್ಷದಿಂದ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲವು ಪ್ರಕರಣಗಳ ಪತ್ತೆ ಕಾರ್ಯದಲ್ಲಿ ಪ್ರಗತಿ ಸಾಧಿಸದೆ, ಆರೋಪಿಗಳನ್ನು ರಕ್ಷಣೆ ಮಾಡಿರುವ ಆಪಾದನೆ ಮತ್ತು ತಾರತಮ್ಯ ತೋರಿರುವುದು ಅದಾಗ್ಯೂ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಗಳ ರಕ್ಷಣೆ ಮತ್ತು ಪತ್ರಕರ್ತರ ಮೇಲೆ ಸುಳ್ಳು ದೂರು ದಾಖಲಿಸಿರುವುದು, ಕರಾಯ ಗ್ರಾಮದ ಪ್ರಕರಣವೊಂದರಲ್ಲಿ ವಕೀಲ, ತಹಸೀಲ್ದಾರ್ ವಿರುದ್ಧ ಪ್ರಕರಣ ದಾಖಲು ಸೇರಿದಂತೆ ಹಲವಾರು ಗುರುತರ ಪ್ರಕರಣಗಳಲ್ಲಿ ಇಲಾಖೆಗೆ ಕೆಟ್ಟ ಹೆಸರು ಬರುವಂತೆ ತೋರಿದ ಆಪಾದನೆಯನ್ನು ಹೊಂದಿದ್ದರು ಮತ್ತು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದ್ದರು ಮತ್ತು ಅವರ ವರ್ಗಾವಣೆಗೆ ಸಾರ್ವಜನಿಕರಿಂದ ಒತ್ತಡಗಳು ವ್ಯಕ್ತವಾಗಿದ್ದವು.
ಈ ಎಲ್ಲಾ ಆಪಾದನೆಯ ಹೊರತಾಗಿಯೂ ಕೆಲವೊಂದು ಉದ್ಯಮಿಗಳ ಕೃಪಾಕಾಟಾಕ್ಷದಿಂದಾಗಿ ರಾಜಕೀಯ ನೇತಾರರ ಪ್ರಭಾವ ಬಳಸಿ ಉಪ್ಪಿನಂಗಡಿಯಲ್ಲಿಯೇ ಮುಂದುವರೆದಿದ್ದರು. ಆದರೆ ಬೆಳ್ಳಾರೆಯ ಪ್ರವೀಣ್ ಹತ್ಯೆಯ ಬಳಿಕದ ಬೆಳವಣಿಗೆಯಲ್ಲಿ ಅವರಿಗೆ ಯಾವುದೇ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡದೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ವರ್ಗಾವಣೆ ಯಾ ಎತ್ತಂಗಡಿ ಮಾಡಲಾಗಿದೆ ಎಂದು ಹೇಳಲಾಗಿದೆ.