ಪುತ್ತೂರು:ಕಳೆದ ಕೆಲ ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಒಳಮೊಗ್ರು ಗ್ರಾಮದ ಅಜಲಡ್ಕ ಎಂಬಲ್ಲಿ ಮನೆಯೊಂದು ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದೆ.
ಒಳಮೊಗ್ರು ಅಜಲಡ್ಕ ಕಾಲನಿ ದಿ. ಗುರುವ ಮುಗೇರರವರ ಪತ್ನಿ ಜಾನಕಿಯವರ ಮನೆ ಕುಸಿದು ಬಿದ್ದಿದ್ದು ಮನೆಯ ಗೋಡೆ, ಛಾವಣಿ ಸಹಿತ ಮನೆ ನೆಲಸಮಗೊಂಡಿದೆ. ಘಟನೆಯ ದಿನ ಜಾನಕಿಯವರ ಪುತ್ರ ಹರೀಶ ಮನೆಯಲ್ಲಿ ಒಬ್ಬರೇ ಇದಿದ್ದು ಗೋಡೆ ಜರಿದು ಬೀಳುವ ಶಬ್ದಕೇಳಿ ಹೊರ ಬಂದು ಅಪಾಯದಿಂದ ಪಾರಾಗಿದ್ದಾರೆ. ಮನೆಯು ಮನೆ ಛಾವಣಿ ಸಹಿತ ಕುಸಿದು ಬಿದ್ದಿರುವುದಾಗಿ ತಿಳಿದುಬಂದಿದೆ.
ಒಳಮೊಗ್ರು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಳ್ಳತ್ತಾರು, ಸದಸ್ಯ ಪ್ರದೀಪ್, ಪಿಡಿಓ ಅವಿನಾಶ್, ಗ್ರಾಮಕರಣಿಕ ರಾಧಾಕೃಷ್ಣ, ರಾಜೇಶ್ ಪರ್ಪುಂಜ, ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ನಾವು ಆರ್ಥಿಕವಾಗಿ ತೀರಾ ಹಿಂದುಳಿದವರಾಗಿದ್ದು, ಮನೆ ನಿರ್ಮಾಣಕ್ಕೆ ದಾನಿಗಳು ಸಹಾಯಹಸ್ತ ನೀಡುವಂತೆ ಮನೆಯವರ ಪರವಾಗಿ ಕೃಷ್ಣಪ್ರಸಾದ್ ಆಳ್ವ, ಪ್ರದೀಪ್ ಮನವಿ ಮಾಡಿದ್ದಾರೆ.