ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸಬೇಕು: ಉಸ್ಮಾನ್ ಮುಸ್ಲಿಯಾರ್
ಪುತ್ತೂರು: ಸಾಹಿತ್ಯ ಎಂಬುದು ಒಂದು ಅದ್ಭುತ ಲೋಕವಾಗಿದೆ, ಸಾಹಿತ್ಯದ ಬಗ್ಗೆ ತಿಳಿದವ ಎಂದಿಗೂ ಅದನ್ನು ಬಿಟ್ಟು ಇರಲಾರ, ಮಾನವ ಮತ್ತು ಸಾಹಿತ್ಯಕ್ಕೆ ಅಷ್ಟೊಂದು ಬಂಧ ಇದೆ, ಮಕ್ಕಳಿಗೆ ವಿದ್ಯಾರ್ಥಿ ದಿಸೆಯಲ್ಲೇ ಸಾಹಿತ್ಯಾಭಿರುಚಿ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದು ಕುಂಬ್ರ ಬದ್ರಿಯಾ ನಗರ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಉಸ್ಮಾನ್ ಮುಸ್ಲಿಯಾರ್ ಹೇಳಿದರು.
ಕುಂಬ್ರ ಬದ್ರಿಯಾ ನಗರ ಮದ್ರಸದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಅಲ್ ಬದ್ರಿಯಾ ಸಾಹಿತ್ಯ ಸಮಾಜ ಸಂಘವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಒಂದು ಮಗು ಮಾತು ಕಲಿಯುವುದೇ ಸಾಹಿತ್ಯದಿಂದ, ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಸಾಹಿತ್ಯಕ್ಕಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯೂ ಸಾಹಿತ್ಯ ವೇದಿಕೆಯಲ್ಲಿ ತೊಡಗಿಸಿಕೊಂಡು ತನ್ನಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುವಂತಾಗಬೇಕು ಎಂದು ಹೇಳಿದರು.
ಬದ್ರಿಯಾ ನಗರ ಬದ್ರಿಯಾ ಜುಮಾ ಮಸ್ಜಿದ್ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಝಲಿ ದುವಾ ನೆರವೇರಿಸಿ ಸಾಹಿತ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಬದ್ರಿಯಾ ಜಮಾತ್ ಕಮಿಟಿ ಕೋಶಾಧಿಕಾರಿ ಇಸ್ಮಾಯಿಲ್, ಜಮಾತ್ ಕಮಿಟಿ ಸದಸ್ಯರಾದ ಇಬ್ರಾಹಿಂ ಝುಹುರಿ ಮುಖ್ಯ ಅತಿಥಿಯಾಗಿದ್ದರು.
ಈ ಸಂದರ್ಭದಲ್ಲಿ ಸಾಹಿತ್ಯ ಸಂಘಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಬದ್ರಿಯಾ ನಗರ ಅಲ್ ಬದ್ರಿಯಾ ಮದ್ರಸದ ಮುಅಲ್ಲಿಂ ಅಬೂಬಕ್ಕರ್ ಸಿದ್ದೀಕ್ ಸಅದಿ ವಂದಿಸಿದರು.