ಪುತ್ತೂರು:ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆಗೈದ ಆರೋಪಿಗಳಾದ ಸುಳ್ಯದ ಶಿಹಾಬುದ್ದೀನ್, ರಿಯಾಝ್ ಅಂಕತ್ತಡ್ಕ ಹಾಗೂ ಬಶೀರ್ ಎಲಿಮಲೆಯನ್ನು ಪೊಲೀಸರ ಕಸ್ಟಡಿಗೆ ನೀಡಿ ಸುಳ್ಯ ನ್ಯಾಯಾಲಯ ಆದೇಶಿಸಿದೆ.
ಕೃತ್ಯವೆಸಗಿ ಪರಾರಿಯಾಗಿದ್ದ ಆರೋಪಿಗಳನ್ನು ತಲಪ್ಪಾಡಿ ಚೆಕ್ಪೋಸ್ಟ್ ಬಳಿ ಬಂಧಿಸಿ ಕರೆತಂದ ಪೊಲೀಸರು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿ ಬಳಿಕ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದರು.ಹತ್ಯೆಗೆ ಕಾರಣ ಸೇರಿದಂತೆ ಈ ಪ್ರಕರಣದ ಕುರಿತು ಇನ್ನಷ್ಟು ತನಿಖೆಯ ಅಗತ್ಯವಿರುವುದರಿಂದ ಆರೋಪಿಗಳನ್ನು ತಮ್ಮ ಕಸ್ಟಡಿಗೆ ನೀಡುವಂತೆ ಸಹಾಯಕ ಸರಕಾರಿ ಅಭಿಯೋಜಕರ ಮೂಲಕ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಆರೋಪಿಗಳನ್ನು ಆ.16ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.