ಕ್ಲಿನಿಕ್ನಿಂದ ಕಳವು: ಸಹಕಾರಿ ಸಂಘಕ್ಕೆ ನುಗ್ಗಲು ವಿಫಲ ಯತ್ನ
ಉಪ್ಪಿನಂಗಡಿ: ಸರಣಿ ಕಳ್ಳತನಕ್ಕೆ ಯತ್ನ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕಲ್ಲೇರಿ ಪೇಟೆಯಲ್ಲಿ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದ್ದು, ಒಂದು ಅಂಗಡಿಯಿಂದ ಕಳವು ನಡೆಸಿದ ಕಳ್ಳ ಮೂರ್ತೆದಾರರ ಸಹಕಾರಿ ಸಂಘದ ಷಟರ್ ಒಡೆಯಲು ವಿಫಲ ಯತ್ನ ನಡೆಸಿದ್ದಾನೆ.
ಇಲ್ಲಿನ ಸಿಂಧೂರ ಮೆಡಿಕಲ್ನ ಹಿಂಬದಿಯಿಂದ ಬಂದ ಕಳ್ಳ ಅದೇ ಮೆಡಿಕಲ್ನ ಮತ್ತೊಂದು ಕೊಠಡಿಯಲ್ಲಿರುವ ಕ್ಲಿನಿಕ್ನ ಕಿಟಕಿಯ ಸರಳುಗಳನ್ನು ಬಗ್ಗಿಸಿ ಒಳನುಗ್ಗಿದ್ದು, ಚಿಲ್ಲರೆ ಸಹಿತ ಅಲ್ಲಿದ್ದ ಸುಮಾರು ಏಳು ಸಾವಿರದಷ್ಟು ನಗದನ್ನು ಕಳವುಗೈದಿದ್ದಾನೆ. ಬಳಿಕ ಮೆಡಿಕಲ್ನ ಹಿಂಬಾಗಿಲ ಮೂಲಕ ಪರಾರಿಯಾಗಿದ್ದಾನೆ. ಇಲ್ಲಿನ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಷಟರ್ನ ಎರಡು ಬೀಗವನ್ನು ಮುರಿದ ಕಳ್ಳ ಅದರ ಮಧ್ಯದ ಲಾಕ್ ತೆಗೆಯಲು ವಿಫಲ ಯತ್ನ ನಡೆಸಿದ್ದಾನೆ. ಆದರೆ ಅದು ಸಾಧ್ಯವಾಗದಿದ್ದಾಗ ಅಲ್ಲಿಂದ ಪರಾರಿಯಾಗಿದ್ದಾನೆ. ಪ್ರಶಾಂತ್ ಭವನ ಹೊಟೇಲ್ನ ಹಿಂಬಾಗಿಲನ್ನು ಒಡೆದು ಒಳನುಗ್ಗಿರುವ ಕಳ್ಳ ಅಲ್ಲಿ ಹಣಕ್ಕಾಗಿ ತಡಕಾಡಿದ್ದಾನೆ. ಆದರೆ ಅಲ್ಲೇನು ಸಿಗದಿದ್ದಾಗ ಅಲ್ಲಿಂದ ವಾಪಸಾಗಿದ್ದಾನೆಯಲ್ಲದೆ, ಅದೇ ಪರಿಸರದಲ್ಲಿ ನಿಂತಿದ್ದ ಪಿಕಾಫ್ ವಾಹನವೊಂದರ ಗಾಜನ್ನು ಒಡೆದು ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕಾಗಮಿಸಿ, ಪರಿಶೀಲನೆ ನಡೆಸಿದ್ದಾರೆ.