ಉಪ್ಪಿನಂಗಡಿ: ಇಲ್ಲಿನ 34 ನೆಕ್ಕಿಲಾಡಿ ಗ್ರಾ.ಪಂ. ವತಿಯಿಂದ ವಿವಿಧ ಸಂಘಟನೆಗಳು ಹಾಗೂ ಶಾಲೆಗಳ ಸಹಭಾಗಿತ್ವದಲ್ಲಿ ನೆಕ್ಕಿಲಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಗ್ರಾ.ಪಂ. ಕಚೇರಿಯವರೆಗೆ ತಿರಂಗಾ ಯಾತ್ರೆ ನಡೆಯಿತು.
ಯಾತ್ರೆಗೆ ನಿವೃತ ಯೋಧ ರಾಜೇಶ್ ಕಾಮತ್ ಚಾಲನೆ ನೀಡಿದರು. ಸುಮಾರು ನಾಲ್ಕು ಕಿ.ಮೀ.ನಷ್ಟು ನಡೆದ ಕಾಲ್ನಡಿಗಾ ಜಾಥಾದಲ್ಲಿ ಭಾರತ ಮಾತೆ, ಸ್ವಾತಂತ್ರ್ಯ ಹೋರಾಟಗಾರರ ಸ್ತಬ್ಧಚಿತ್ರಗಳು ಹಾಗೂ ರಾಷ್ಟ್ರ ಧ್ಜಜವನ್ನು ಕೈಯಲ್ಲಿ ಹಿಡಿದುಕೊಂಡು ಜಾಥಾದಲ್ಲಿದ್ದವರ ಶಿಸ್ತು ಬದ್ಧ ನಡಿಗೆ ಗಮನ ಸೆಳೆದವು. ನೆಕ್ಕಿಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶಾಂತಿನಗರ ಸರಕಾರಿ ಶಾಲೆಯ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳಾದ `ನಮ್ಮೂರು- ನೆಕ್ಕಿಲಾಡಿ’, `ರಾಜಶ್ರೀ ಫ್ರೆಂಡ್ಸ್’ ಅಂಬೆಲ, ಸಂಜೀವಿನಿ, ಸ್ತ್ರೀಶಕ್ತಿ ಗುಂಪುಗಳು, ಆಶಾ ಕಾರ್ಯಕರ್ತೆಯರ ತಂಡ, ಗ್ರಾ.ಪಂ. ಸದಸ್ಯರು ಹಾಗೂ ಸಿಬ್ಬಂದಿ, ಗ್ರಾಮಸ್ಥರು ಭಾಗವಹಿಸಿದರು. ಬಳಿಕ ಗ್ರಾ.ಪಂ. ಪಂಚಾಯತ್ ವಠಾರದಲ್ಲಿ ಸಮಾರೋಪ ಸಮಾರಂಭ ನಡೆಯಿತು. ಈ ಸಂದರ್ಭ ಛದ್ಮವೇಷ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.