- ಪೇಟೆಯುದ್ದಕ್ಕೂ ಅಟ್ಟಿ ಮಡಿಕೆ ಒಡೆದ 13 ತಂಡಗಳ ಸಾಹಸಮಯ ಸ್ಪರ್ಧೆ
- ಡಾ.ಸುರೇಶ್ ಪುತ್ತೂರಾಯ ಅವರಿಂದ ಶೋಭಾಯಾತ್ರೆ ಉದ್ಘಾಟನೆ
ಪುತ್ತೂರು:ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಯಾದ ವಿಶ್ವ ಹಿಂದೂ ಪರಿಷದ್ನ ಸ್ಥಾಪನಾ ದಿನದ ಪ್ರಯುಕ್ತ ಪುತ್ತೂರಿನಲ್ಲಿ ಆ.೨೦ರಂದು ೧೨ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಅತ್ಯಂತ ಶ್ರದ್ಧೆ, ಭಕ್ತಿ, ಸಂಭ್ರಮ, ಸಡಗರದಿಂದ ನಡೆಯಿತು.ಪುತ್ತೂರು ಪೇಟೆಯಾದ್ಯಂತ ೧೫ ಕಡೆಗಳಲ್ಲಿ ಮೊಸರು, ನೀರು, ಹಾಲು, ನಾನಾ ತಿನಸು ವಸ್ತುಗಳನ್ನು ಮಣ್ಣಿನ ಮಡಕೆಯಲ್ಲಿ ಹಾಕಿ ಎತ್ತರದ ಕಮಾನುಗಳಲ್ಲಿ ಕಟ್ಟಲಾಗಿತ್ತು.ಬೃಹತ್ ಶೋಭಾಯಾತ್ರೆಯಲ್ಲಿದ್ದ ಸಾಹಸಿ ಯುವಕರ ತಂಡ ಮೇಲೇರಿ ಅಟ್ಟಿ ಮಡಿಕೆಗಳನ್ನು ಒಡೆದುರುಳಿಸುತ್ತಿದ್ದ ದೃಶ್ಯ ಮನಮೋಹಕವಾಗಿತ್ತು.
ಶೋಭಾಯಾತ್ರೆಗೆ ಬೊಳುವಾರಿನಲ್ಲಿ ಚಾಲನೆ: ಪುತ್ತೂರು ಮೊಸರು ಕುಡಿಕೆ ಉತ್ಸವದಂಗವಾಗಿ ಆಕರ್ಷಕ ಶೋಭಾಯಾತ್ರೆಯು ವೈಭವಯುತವಾಗಿ ನಡೆಯಿತು.ಶೋಭಾಯಾತ್ರೆ ಉದ್ಘಾಟನೆಗೆ ಮೊದಲು ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ಪ್ರಾರ್ಥನೆ ಮಾಡಿ ಬಳಿಕ ಮಹಾವೀರ ಆಸ್ಪತ್ರೆಯ ಡಾ.ಸುರೇಶ್ ಪುತ್ತೂರಾಯ ಅವರು ತೆಂಗಿನ ಕಾಯಿ ಒಡೆದು ಶೋಭಾಯಾತ್ರೆ ಉದ್ಘಾಟಿಸಿದರು.ಬಜರಂಗದಳ ಪುತ್ತೂರು ಜಿಲ್ಲೆ ಸಂಯೋಜಕ ಭರತ್ ಕುಮ್ಡೇಲು ಅವರು ಧ್ವಜ ಹಸ್ತಾಂತರದ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.ಬಳಿಕ ಬ್ರಹ್ಮನಗರದ ನರೇಶ್ ಮತ್ತು ಬಳಗದವರು ಅಟ್ಟಿ ಮಡಿಕೆಯನ್ನು ಒಡೆಯುವ ಮೂಲಕ ಶೋಭಾಯಾತ್ರೆಯನ್ನು ಆರಂಭಿಸಲಾಯಿತು.ಶೋಭಾಯಾತ್ರೆಯಲ್ಲಿ ವೀರ ಸಾವರ್ಕರ್ ಭಾವಚಿತ್ರವಿದ್ಧ ವಾಹನ, ಸಂಗೀತ ನೃತ್ಯ, ಅದರ ಹಿಂದೆ ಆಕರ್ಷಕ ಕೃಷ್ಣಾರ್ಜುನ ರಥವಿತ್ತು.ಪುಟಾಣಿ ಆನ್ಯಲಕ್ಷ್ಮೀ ಕೃಷ್ಣನಾಗಿ, ಲಕ್ಷ್ಮೀ ಅರ್ಚನ್ ಅರ್ಜುನನಾಗಿ ರಥದಲ್ಲಿ ಗಮನ ಸೆಳೆದರು.ರಥದ ಹಿಂದೆ ಶ್ರೀಕೃಷ್ಣನ ಸ್ಥಬ್ಧ ಚಿತ್ರ, ವಿಶೇಷ ಆಕರ್ಷಣೆಯಾಗಿ ವಿಟ್ಲ ವೀರಾಂಜನೇಯ ವ್ಯಾಯಾಮ ಶಾಲೆ ಚಂದಳಿಕೆ ಇವರಿಂದ ತಾಲೀಮು ಪ್ರದರ್ಶನ, ಕಲ್ಲಡ್ಕ ಶಿಲ್ಪಾ ಬಳಗದಿಂದ ಕೀಲುಕುದುರೆ, ಗೊಂಬೆ, ಶ್ರೀದೇವಿ ಬೀಟ್ಸ್ ಪುತ್ತೂರು ಇವರಿಂದ ನಾಸಿಕ್ ಬ್ಯಾಂಡ್ನ ಸದ್ದು, ಗುಂಪು ಗುಂಪಾಗಿದ್ದ ಯುವಕರ ನೃತ್ಯ ಶೋಭಾಯಾತ್ರೆಯ ಮೆರುಗನ್ನು ಹೆಚ್ಚಿಸಿತ್ತು. ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ಮೊಸರು ಕುಡಿಕೆ ಉತ್ಸವ ಸಮಿತಿ ಸಂಚಾಲಕ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಅಧ್ಯಕ್ಷ ಪಿ.ವಾಮನ ಪೈ, ಕಾರ್ಯದರ್ಶಿ ಶ್ರೀಧರ್ ತೆಂಕಿಲ, ರೂಪೇಶ್ ಬಲ್ನಾಡು, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಗೌರವಾಧ್ಯಕ್ಷ ಯು.ಪೂವಪ್ಪ ಕಲ್ಲಾರೆ, ಕಾರ್ಯದರ್ಶಿ ಸತೀಶ್ ಬಿ.ಎಸ್, ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ವಿಶ್ವಹಿಂದು ಪರಿಷತ್ ಪುತ್ತೂರು ಪ್ರಖಂಡದ ಅಧ್ಯಕ್ಷ ಜನಾರ್ದನ ಬೆಟ್ಟ, ಬಜರಂಗದಳ ಪ್ರಖಂಡದ ಅಧ್ಯಕ್ಷ ಹರೀಶ್ ದೋಳ್ಪಾಡಿ, ಬಜರಂಗಳ ಸಂಯೋಜಕ ವಿಶಾಕ್ ಸಸಿಹಿತ್ಲು, ನ್ಯಾಯವಾದಿ ಮಾಧವ ಪೂಜಾರಿ, ಸ್ನೇಹ ಟೆಕ್ಸ್ಟೈಲ್ಸ್ನ ಮಾಲಕ ಸತೀಶ್, ವಿಶ್ವಹಿಂದೂ ಪರಿಷದ್ ಬಜರಂಗದಳ ಗ್ರಾಮಾಂತರ ಪ್ರಖಂಡ ಕಾರ್ಯದರ್ಶಿ ರವಿ ಕುಮಾರ್ ಕೈತ್ತಡ್ಕ ಸೇರಿದಂತೆ ಹಲವಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಬೆಳಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ೧೧ ವರ್ಷದಿಂದ ೧೬ ವರ್ಷದ ಒಳಗಿನ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು, ಪುರುಷರಿಗೆ, ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು, ಹಗ್ಗ ಜಗ್ಗಾಟ, ಉದ್ದಕಂಬ ಏರುವ ಸ್ಪರ್ಧೆಗಳು ನಡೆಯಿತು. ಈ ಸಂದರ್ಭದಲ್ಲಿ ಮಾತೃಶಕ್ತಿ ಪ್ರಮುಖ್ ಮೋಹಿನಿ ದಿವಾಕರ್, ದುರ್ಗಾವಾಹಿನಿ ಸಂಯೋಜಕಿ ವಾಣಿ ಭಟ್, ಪ್ರೇಮಲತಾ ರಾವ್ ಸೇರಿದಂತೆ ಹಲವಾರು ಮಂದಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಶೋಭಾಯಾತ್ರೆ ಪಥ: ಬೊಳುವಾರಿನಲ್ಲಿ ಶ್ರೀಕೃಷ್ಣನ ರಥದೊಂದಿಗೆ ಆರಂಭಗೊಂಡ ಶೋಭಾಯಾತ್ರೆಯಲ್ಲಿ ವೀರ ಯುವಕರ ತಂಡದಿಂದ ಸಾಹಸಮಯ ಅಟ್ಟಿಮಡಿಕೆ ಒಡೆಯುವ ಪ್ರದರ್ಶನ ನಡೆಯಿತು.ಬೊಳುವಾರು ಆಂಜನೇಯ ಮಂತ್ರಾಲಯದಿಂದ ಮುಖ್ಯರಸ್ತೆಯಾಗಿ ಅಂಚೆ ಕಚೇರಿ ಬಳಿಯಿಂದ ದೇವಸ್ಥಾನದ ಗದ್ದೆಗೆ ಸಾಗಿ ಅಲ್ಲಿ ಸಭಾ ಕಾರ್ಯಕ್ರಮದ ಬಳಿಕ ಬಸ್ ನಿಲ್ದಾಣದ ಮೂಲಕ ಕಲ್ಲಾರೆ, ಅರುಣಾ ಚಿತ್ರಮಂದಿರದ ಬಳಿಯಿಂದ ಎಪಿಎಂಸಿ ರಸ್ತೆಯಾಗಿ ಶ್ರೀ ಮಹಾಲಿಂಗೇಶ್ವರ ಗದ್ದೆಯಲ್ಲಿ ಶೋಭಾಯಾತ್ರೆ ಸಂಪನ್ನಗೊಂಡಿತ್ತು.ಸುಮಾರು 13 ತಂಡ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿತ್ತು.
ಅಶ್ವ ಫ್ರೆಂಡ್ಸ್ ಬೀರ್ನಹಿತ್ಲು, ಸ್ಮಾರ್ಟ್ ಫ್ರೆಂಡ್ಸ್ ದರ್ಬೆ, ವಿಷ್ಣುಮೂರ್ತಿ ಕುರಿಯ, ಓಂ ಶ್ರೀ ಬೆರಿಪದವು, ಫ್ರೆಂಡ್ಸ್ ಅನಂತಾಡಿ, ಯುವ ಫ್ರೆಂಡ್ಸ್ ಕಬಕ, ಶಿವಾಜಿ ಶಾಖೆಪುರುಷರಕಟ್ಟೆ, ಹಿಂದು ಐಕ್ಯ ವೇದಿ ದೇಲಂಪಾಡಿ, ವಾಸುಕಿ ಓಜಾಲ, ಹಿಂದು ಜಾಗರಣ ವೇದಿಕೆ ಅಲಂಕಾರು, ಪಾರ್ಥ ಸಾರಥಿ ಮುಳ್ಯ, ಬ್ರಹ್ಮನಗರ ಬಜರಂಗದಳ, ಲಕ್ಷ್ಮೀ ಜನಾರ್ದನ ಯುವಕ ಮಂಡಲ ಕಡಬದ ತಂಡ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ರವಿ ಪುಣಚ ಮತ್ತು ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಸ್ಪರ್ಧೆಯನ್ನು ನಿರ್ವಹಿಸಿದರು.