‘ಪೇಟಿಎಂ’ ಮಾದರಿಯಲ್ಲಿ ‘ಪೇಸಿಎಂ’ ಪೋಸ್ಟರ್ ವೈರಲ್ :  ಬಿಜೆಪಿ ಭ್ರಷ್ಟಾಚಾರ ವಿರುದ್ಧ ಕ್ಯೂ ಆರ್ ಕೋಡ್ ಸಹಿತ ಕಾಂಗ್ರೆಸ್ ಅಭಿಯಾನ

0

ಬೆಂಗಳೂರು:40% ಕಮಿಷನ್ ಆರೋಪ ಮುಂದಿಟ್ಟುಕೊಂಡು ‘ಪೇಸಿಎಂ’ಎಂದು ‘ಪೇಟಿಎಂ’ ಮಾದರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಭಾವಚಿತ್ರವನ್ನೊಳಗೊಂಡು ರಚಿಸಲಾಗಿರುವ ಪೋಸ್ಟರ್‌ಗಳನ್ನು ಬೆಂಗಳೂರು ನಗರದ ಹಲವು ಕಡೆಗಳಲ್ಲಿ ಹಾಕಲಾಗಿತ್ತು.

ನಗರದ ವಿವಿಧೆಡೆ ಮುಖ್ಯಮಂತ್ರಿ ಚಿತ್ರ ಸಹಿತ ಈ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ.ಕ್ಯೂಆರ್‌ಕೋಡ್ ಸ್ಕ್ಯಾನ್ ಮಾಡಿದರೆ ರಾಜ್ಯ ಸರ್ಕಾರದ ವಿರುದ್ಧದ ದೂರುಗಳಿಗೆ ಸಂಬಂಽಸಿದಂತೆ ಕಾಂಗ್ರೆಸ್ ಘಟಕ ಇತ್ತೀಚೆಗೆ ಬಿಡುಗಡೆ ಮಾಡಿದ ‘ಶೇ.೪೦ ಕಮಿಷನ್ ಸರ್ಕಾರ’ ವೆಬ್‌ಸೈಟ್ ತೆರೆದುಕೊಳ್ಳಲಿದೆ.ನಗರದ ಜಯಮಹಲ್ ರಸ್ತೆ, ಇಂಡಿಯನ್ ಎಕ್ಸ್‌ಪ್ರೆಸ್ ಬಳಿ ಗೋಡೆಗೆ ಪೇ ಸಿಎಂ ಎಂದು ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವಿರುವ ಪೋಸ್ಟರ್ ಅಂಟಿಸುವ ಮೂಲಕ ಭ್ರಷ್ಟ ಸರ್ಕಾರ ಎಂದು ಅಣಕಿಸಲಾಗಿದೆ.‘40% ಆಕ್ಸೆಪ್ಟೆಡ್ ಹೀಯರ್’ ಎಂದು ಪೋಸ್ಟರ್‌ನಲ್ಲಿ ಒಕ್ಕಣೆ ಬರೆಯಲಾಗಿದೆ.

ಪೇಟಿಎಂ ಮಾದರಿಯಲ್ಲಿ ಪೇಸಿಎಂ ಎಂದು ಕ್ಯೂಆರ್ ಕೋಡ್ ಮೇಲೆ ಸಿಎಂ ಬಸವರಾಜ ಬೊಮ್ಮಾಯಿ ಫೋಟೋ ಹಾಕಲಾಗಿದೆ.ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪದ ದೂರು ನೀಡಲು ಸಹಾಯವಾಣಿ ನಂಬರ್ ಹಾಕಿರುವ ಪೋಸ್ಟರ್‌ನ್ನು ಬೆಂಗಳೂರಿನ ಹಲವೆಡೆ ಅಂಟಿಸಲಾಗಿದೆ.ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದ ಬಳಿಯೂ ಪೋಸ್ಟರ್ ಹಾಕಲಾಗಿದೆ.

ಕ್ಯೂಆರ್‌ಕೋಡ್ ಸ್ಕ್ಯಾನ್ ಮಾಡಿದರೆ 40% ಸ್ಕ್ಯಾಮ್ ಸ್ಟಾರ್ಸ್ ಎನ್ನುವ ಪೇಜ್ ಓಪನ್ ಆಗುತ್ತದೆ.ರೋಡ್ ಸ್ಕ್ಯಾಮ್, ಬಿಟ್‌ಕಾಯಿನ್ ಸ್ಕ್ಯಾಮ್, ಪಿಎಸ್‌ಐ ಸ್ಕ್ಯಾಮ್ ಎನ್ನುವ ಪೇಜ್ ಬರುತ್ತದೆ.ಸ್ಕ್ಯಾನ್ ಮಾಡಿದವರ ಸಂಖ್ಯೆ ಇಲ್ಲಿಯವರೆಗೆ 95,428 ಆಗಿದೆ.ಸ್ಕ್ಯಾನ್ ಮಾಡಿದ ಕೂಡಲೇ ಅಭಿಯಾನಕ್ಕೆ ಆಡ್ ಆಗಿದ್ದೀರಿ ಎಂದು ಮೆಸೇಜ್ ಬರುತ್ತದೆ.ಭಿತ್ತಿಪತ್ರದಲ್ಲಿ ಬರಹದೊಂದಿಗೆ ದೂರವಾಣಿ ಸಂಖ್ಯೆಯೊಂದನ್ನೂ ನೀಡಲಾಗಿದ್ದು ಕರೆ ಮಾಡಿದರೆ ಸ್ವಯಂ ಚಾಲಿತ ಸಂದೇಶ ಬರುತ್ತದೆ.

ಎಫ್‌ ಐಆರ್ ದಾಖಲು: ಪೇಸಿಎಂ ಭಿತ್ತಿ ಪತ್ರ ಅಂಟಿಸಿರುವುದಕ್ಕೆ ಸಂಬಂಧಿಸಿ ಕರ್ನಾಟಕ ತೆರೆದ ಸ್ಥಳಗಳ(ವಿಕಾರ ತಡೆಗಟ್ಟುವಿಕೆ) ಕಾಯ್ದೆಯ ಅಡಿ ಕೇಂದ್ರ ವಿಭಾಗದಲ್ಲಿ ಒಂದು ಎ-ಐಆರ್ ದಾಖಲಾಗಿದ್ದು, ಸಂಬಂಧಪಟ್ಟ ಡಿಸಿಪಿಗಳಿಂದ ಮಾಹಿತಿ ಕೇಳಲಾಗಿದೆ.ಪೇಸಿಎಂ ಪೋಸ್ಟರ್‌ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ.ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ತಿಳಿಸಿದ್ದಾರೆ.ಪೋಸ್ಟರ್ ಅಂಟಿಸಿದವರ ಪತ್ತೆಗೆ ಮುಂದಾಗಿರುವ ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸುತ್ತಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರ ’ಶೇ 40 ಕಮಿಷನ್ ಸರ್ಕಾರ’ವೆಂದು ಆರೋಪಿಸಿ ’ಪೇ ಸಿಎಂ’ (PayCM) ಘೋಷಣೆಯ ಭಿತ್ತಿಪತ್ರ ಮತ್ತು ಕ್ಯೂ ಆರ್ ಕೋಡ್ ಸಹಿತ ಕಾಂಗ್ರೆಸ್ ಪಕ್ಷ ಅಭಿಯಾನ ಆರಂಭಿಸಿದೆ.

ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು

ಕಾಂಗ್ರೆಸ್‌ನಿಂದ ‘ಪೇಸಿಎಂ’ಅಭಿಯಾನಕ್ಕೆ ಪ್ರತಿಯಾಗಿ ಬಿಜೆಪಿಯೂ ಪೋಸ್ಟರ್ ರಿಲೀಸ್ ಮಾಡಿದೆ.ಸಿದ್ಧರಾಮಯ್ಯ ಹಾಗೂ ಡಿಕೆಶಿವಕುಮಾರ್ ಅವರ ಭಾವಚಿತ್ರದೊಂದಿಗೆ ‘ರಿಡೂ ಸಿದ್ಧರಾಮಯ್ಯ, ಇಡಿ ಡಿಕೆಶಿ’ ಎಂಬ ಬರಹದ ಪೋಸ್ಟರ್ ರಿಲೀಸ್ ಮಾಡಿ ಬಿಜೆಪಿ ತಿರುಗೇಟು ನೀಡಿದೆ.

ರಾಹುಲ್ ಗಾಂಧಿ ಫೋಟೋದೊಂದಿಗೆ ಕ್ಯೂಆರ್ ಕೋಡ್ ಹಾಕಿ ಭಿಕ್ಷೆ ಬೇಡಬಹುದಲ್ಲವೇ ಎಂದು ಟ್ವೀಟರ್‌ನಲ್ಲಿ ಬಿಜೆಪಿ ಪ್ರಶ್ನಿಸಿದೆ.

LEAVE A REPLY

Please enter your comment!
Please enter your name here