ಉಪ್ಪಿನಂಗಡಿ: ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಲಾರಿ

0

ಉಪ್ಪಿನಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಮಗುಚಿ ಬಿದ್ದು, ಲಾರಿಯಲ್ಲಿದ್ದ ಚಾಲಕ ಸೇರಿದಂತೆ ಲಾರಿಯಲ್ಲಿದ್ದ ನಾಲ್ವರು ಪವಾಡ ಸದೃಶವಾಗಿ ಅಪಾಯದಿಂದ ಪಾರಾದ ಘಟನೆ ಸೆ.22 ರಂದು ರಾತ್ರಿ ಉಪ್ಪಿನಂಗಡಿ ಬಳಿಯ ಕೂಟೇಲು ಎಂಬಲ್ಲಿ ನಡೆಯಿತು. ಅಪಘಾತದ ರಭಸಕ್ಕೆ ಲಾರಿಯ ಡೀಸೆಲ್ ಟ್ಯಾಂಕ್ ಒಡೆದು ಹೋಗಿದ್ದು ರಸ್ತೆಯಲ್ಲೆಲ್ಲಾ ಡೀಸೆಲ್ ಸೋರಿಕೆಯಾಗಿದೆ.
ರಾಷ್ಟ್ರೀಯ ಹೆದ್ದಾರಿ 75 ನಲ್ಲಿ ಚತುಷ್ಪತ ಕಾಮಗಾರಿ ನಡೆಸುವ ANR ಸಂಸ್ಥೆಗೆ ಸೇರಿದ ಲಾರಿ ಇದಾಗಿದ್ದು ಲಾರಿಯಲ್ಲಿ ಮಧ್ಯಪ್ರದೇಶ ಮೂಲದ ಚಾಲಕ ನಾರಾಯಣ್, ಕ್ಲೀನರ್ ಪುಷ್ಪೇಂದ್ರ ಹಾಗೂ ಇತರ ಇಬ್ಬರಿದ್ದರು. ಇದು ಕಾಂಕ್ರೀಟ್ ಹಾಕುವ ಮಿಶಿನ್ ನನ್ನು ಹೊಂದಿದ್ದ ಲಾರಿಯಾಗಿದ್ದು ಇದು 34-ನೆಕ್ಕಿಲಾಡಿ ಬಳಿಯ ಕುಮಾರಧಾರ ನದಿಗೆ ನಿರ್ಮಾಣವಾಗುತ್ತಿರುವ ನೂತನ ಸೇತುವೆಯ ಕಾಮಗಾರಿ ಮುಗಿಸಿ ನೆಲ್ಯಾಡಿ ಕಡೆ ಹೋಗುತ್ತಿತ್ತು. ಈ ಸಂದರ್ಭ ಅತೀ ವೇಗದಿಂದ ಬಂದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಕೂಟೇಲು ಬಳಿ ಮಗುಚಿಬಿದ್ದಿದೆ. ಚಾಲಕ ಅತಿಯಾಗಿ ಮದ್ಯ ಸೇವನೆ ಮಾಡಿದ್ದೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here