ಪುತ್ತೂರು, ಉಪ್ಪಿನಂಗಡಿ ಸಹಿತ 11 ರಾಜ್ಯಗಳ 93 ಕಡೆ ಪಿಎಫ್‌ ಐ ಮುಖಂಡರ ಮನೆ, ಕಚೇರಿ ಮೇಲೆ ಎನ್‌ಐಎ ದಾಳಿ

0

ಭಯೋತ್ಪಾದನಾ ಕೃತ್ಯಗಳಿಗೆ ಹಣಸಂದಾಯ ಸಹಿತ ಕಾನೂನು ಬಾಹಿರ ಚಟುವಟಿಕೆಗಳಿಗೆ ಬೆಂಬಲ ಆರೋಪ

  • ಎನ್‌ಐಎಯಲ್ಲಿ ದಾಖಲಾಗಿರುವ 5 ಪ್ರಕರಣಗಳಿಗೆ ಸಂಬಂಧಿಸಿ ಏಕಕಾಲದಲ್ಲಿ ಕಾರ್ಯಾಚರಣೆ
  • ಮಾರಕಾಸ್ತ್ರ, ಡಿಜಿಟಲ್ ಸಾಕ್ಷ್ಯ, ನಗದು, ದಾಖಲೆ ವಶ

ಪುತ್ತೂರು:ಭಯೋತ್ಪಾದನಾ ಕೃತ್ಯಗಳಿಗೆ ಹಣಸಂದಾಯ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿರುವ ಆರೋಪದಡಿ ದಾಖಲಾಗಿರುವ ವಿವಿಧ ಪ್ರಕರಣಗಳ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ಅಧಿಕಾರಿಗಳು ಉಪ್ಪಿನಂಗಡಿ, ಪುತ್ತೂರು, ಮಂಗಳೂರು ಸೇರಿದಂತೆ ದೇಶದಾದ್ಯಂತ 11 ರಾಜ್ಯಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಚೇರಿಗಳು ಮತ್ತು ಸಂಘಟನೆ ಪ್ರಮುಖರ ಮನೆಗೆ ಏಕಕಾಲದಲ್ಲಿ ದಾಳಿ ನಡೆಸಿ ಒಟ್ಟು 45 ಜನರನ್ನು ಬಂಧಿಸಿದ್ದಾರೆ.

ಅಯೂಬ್ ಅಗ್ನಾಡಿಯವರ ಮನೆಗೆ ಎನ್‌ಐಎ ತಂಡ ಹಾಗೂ ಪೊಲೀಸರು ದಾಳಿ ನಡೆಸಿರುವುದು.

ಉಪ್ಪಿನಂಗಡಿ ಲಕ್ಷ್ಮೀನಗರದಲ್ಲಿರುವ ಪಿಎಫ್ ಐ ಮುಖಂಡ ಅಯೂಬ್ ಅಗ್ನಾಡಿಯವರ ಮನೆ ಹಾಗೂ ಪುತ್ತೂರು ಸಾಮೆತ್ತಡ್ಕದಲ್ಲಿರುವ ಪಿಎಫ್‌ ಐ ಮುಖಂಡ ಅಬ್ದುಲ್ ಖಾದರ್ ಅವರ ಮನೆಗೆ ಎನ್‌ಐಎ ದಾಳಿ ನಡೆಸಿ ಕೆಲವೊಂದು ದಾಖಲೆಗಳನ್ನು ವಶಪಡಿಸಿಕೊಂಡಿದೆ. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಮತ್ತೊಂದೆಡೆ ಎನ್‌ಐಎ ದಾಳಿ ಖಂಡಿಸಿ ಪುತ್ತೂರು ದರ್ಬೆ ಮತ್ತು ಉಪ್ಪಿನಂಗಡಿಯಲ್ಲಿಯೂ ಪಿಎಫ್ ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಸಾಮೆತ್ತಡ್ಕದಲ್ಲಿರುವ ಪಿಎಫ್ಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ಖಾದರ್ ಅವರ ಮನೆಗೆ ಬೆಳಿಗ್ಗೆ ಎನ್‌ಐಎ ಹಾಗೂ ಪುತ್ತೂರು ಪೊಲೀಸರು ದಾಳಿ ನಡೆಸಿದ್ದಾರೆ.ಡಿವೈಎಸ್ಪಿ ವೀರಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಪುತ್ತೂರು ನಗರ ಠಾಣೆ ಪೊಲೀಸರು ಹಾಗೂ ಎನ್‌ಐಎ ಅಽಕಾರಿಗಳು ದಾಳಿ ನಡೆಸಿ ಮನೆಯಲ್ಲಿದ್ದ ಕೆಲ ದಾಖಲೆಗಳೊಂದಿಗೆ ಅಬ್ದುಲ್ ಖಾದರ್ ಅವರನ್ನು ವಶಕ್ಕೆ ಪಡೆದುಕೊಂಡಿದೆ.

ಉಪ್ಪಿನಂಗಡಿಯಲ್ಲಿ ಎನ್‌ಐಎ ದಾಳಿ:

ಉಪ್ಪಿನಂಗಡಿ: ಕಾನೂನು ಬಾಹಿರ ಚಟುವಟಿಕೆಯ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಉಪ್ಪಿನಂಗಡಿಯ ಲಕ್ಷ್ಮೀನಗರದಲ್ಲಿರುವ ಪಿಎಫ್ಐ ಮುಖಂಡ ಅಯೂಬ್ ಅಗ್ನಾಡಿಯವರ ಮನೆಗೆ ಎನ್‌ಐಎ ತಂಡ ಹಾಗೂ ಪೊಲೀಸರ ತಂಡ ಜಂಟಿ ದಾಳಿ ನಡೆಸಿ, ಪರಿಶೀಲನೆ ನಡೆಸಿತು.‌

ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ಪಿಎಫ್ಐನ ಹಲವು ಮುಖಂಡರ ಮೇಲೆ ಎನ್‌ಐಎಯಲ್ಲಿ ಹಾಗೂ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿತ್ತು.ಈ ಹಿನ್ನೆಲೆಯಲ್ಲಿ ಅಯೂಬ್ ಅಗ್ನಾಡಿಯವರ ಮನೆಯ ಮೇಲೂ ಈ ದಾಳಿ ನಡೆದಿದೆ.ಈ ಸಂದರ್ಭ ಅಯೂಬ್ ಅಗ್ನಾಡಿಯವರು ಮನೆಯಲ್ಲಿರಲಿಲ್ಲ.ಮನೆಯನ್ನು ಪರಿಶೀಲನೆ ನಡೆಸಿದ ಎನ್‌ಐಎ ತಂಡ ಮನೆಯವರಲ್ಲಿ ಅಯೂಬ್ ಅವರ ಬಗ್ಗೆ ವಿಚಾರಣೆ ನಡೆಸಿ, ಅಲ್ಲಿಂದ ತೆರಳಿತ್ತು.ಎನ್‌ಐಎ ತಂಡ ಹಾಗೂ ಪೊಲೀಸರ ಈ ಜಂಟಿ ದಾಳಿಯಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ನೇತೃತ್ವದಲ್ಲಿ ಉಪ್ಪಿನಂಗಡಿ ಠಾಣಾ ಪೊಲೀಸರು ಪಾಲ್ಗೊಂಡಿದ್ದರು.‌

ಪುತ್ತೂರಿನಲ್ಲಿ ಪೊಲೀಸ್ ಬಂದೋಬಸ್ತ್

5 ಪ್ರಕರಣ-15 ರಾಜ್ಯಗಳ 93 ಕಡೆ ದಾಳಿ:

ಕರಾವಳಿ ಹಾಗು ಕೇರಳವನ್ನು ಕೇಂದ್ರೀಕರಿಸಿಕೊಂಡು, ದೇಶದ 15 ರಾಜ್ಯಗಳ 93 ಕಡೆಗಳಲ್ಲಿ ವಿವಿಧೆಡೆ ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಸಂಘಟನೆಯ ನಾಯಕರ ಮನೆ ಮತ್ತು ಕಚೇರಿಗಳು ಹಾಗೂ ಪ್ರಮುಖ ಕಾರ್ಯಕರ್ತರ ಮನೆಗಳ ಮೇಲೆ ಸೆ.22ರಂದು ಏಕಕಾಲಕ್ಕೆ ನಡೆಸಿದ ದಾಳಿಗಳ ಕುರಿತು ಎನ್‌ಐಎ ಅಧಿಕೃತ ಮಾಹಿತಿ ಬಹಿರಂಗಪಡಿಸಿದೆ.ಈಗಾಗಲೇ ಎನ್‌ಐಎಯಲ್ಲಿ ದಾಖಲಾಗಿರುವ 5 ಪ್ರಕರಣಗಳಿಗೆ ಸಂಬಂಧಿಸಿ ಈ ದಾಳಿ ನಡೆದಿದೆ.‌

ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆಗೆ ಹಣ ಸಂದಾಯ, ದ್ವೇಷ ಬಿತ್ತುವ ಕೆಲಸ, ಕೋಮು ಸೌಹಾರ್ದತೆ ಕೆಡಿಸುವ ಯತ್ನ ಸೇರಿದಂತೆ ಹಲವು ಆರೋಪಗಳ ಅಡಿಯಲ್ಲಿ ಈ ದಾಳಿ ನಡೆದಿದೆ.ಎನ್‌ಐಎ ಜೊತೆಗೆ ಕೆಲವೆಡೆ ಜಾರಿ ನಿರ್ದೇಶನಾಲಯ(ಇಡಿ) ಹಾಗೂ ಸ್ಥಳೀಯ ರಾಜ್ಯಗಳ ಪೊಲೀಸ್ ಜಂಟಿಯಾಗಿ ದಾಳಿ ನಡೆಸಿದೆ.

ಕೇರಳ, ಕರ್ನಾಟಕ ಸೇರಿ ಒಟ್ಟು 15 ರಾಜ್ಯಗಳ 93 ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ ಮಾಡಿದೆ.ಈ ದಾಳಿಯಲ್ಲಿ ಒಟ್ಟು 45 ಮಂದಿಯನ್ನು ಬಂಽಸಲಾಗಿದೆ.ಅಲ್ಲದೆ ಅಪಾರ ಪ್ರಮಾಣದ ದಾಖಲೆ, ನಗದು, ಮಾರಕಾಸಗಳು, ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಪ್ರಕಟಣೆ ತಿಳಿಸಿದೆ.

ಪಿಎಫ್ಐ ನಾಯಕರು ಹಾಗೂ ಕಾರ್ಯಕರ್ತರು ದೇಶದಲ್ಲಿನ ಭಯೋತ್ಪಾದನೆ ಚಟುವಟಿಕೆಗಳಿಗೆ ಧನಸಹಾಯ ಮಾಡಿರುವ ಗಂಭೀರ ಆರೋಪ ಈ ಸಂಘಟನೆ ಮೇಲಿದೆ.ಕಾರ್ಯಕರ್ತರಿಗೆ ಸಶಸ ತರಬೇತಿ ಆಯೋಜನೆ, ನಿಷೇಽತ ಉಗ್ರಗಾಮಿ ಸಂಘಟನೆಗೆ ಜನರನ್ನು ಸೇರಿಸುವ ಯತ್ನ, ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳು ಹಾಗೂ ಇತರ ಧರ್ಮಗಳ ನಡುವೆ ದ್ವೇಷ ಬಿತ್ತುವ, ಕೋಮು ಸೌಹಾರ್ದತೆ ಹಾಳುಮಾಡುವ ಕುರಿತು ಪಿಎಫ್ಐ ಸಂಘಟನೆ, ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿತ್ತು.ಒಟ್ಟು 5 ಪ್ರಕರಣ ಹಾಗೂ ಆರೋಪಗಳ ಆಧಾರದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ ನಡಿಸಿದೆ.ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಅಸ್ಸಾಂ, ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ, ಬಿಹಾರ ಹಾಗೂ ಮಣಿಪುರದಲ್ಲಿ ದಾಳಿ ನಡೆಸಲಾಗಿದೆ.ಕರ್ನಾಟಕದಿಂದ ಅನೀಸ್ ಅಹ್ಮದ್,ಅಫ್ಸರ್ ಪಾಷಾ, ಅಬ್ದುಲ್ ವಹೀದ್ ಸೇಠ್, ಯಾಸಿರ್ ಅರಾಫತ್ ಹಸನ್, ಮೊಹಮ್ ಶಾಕೀಬ್ ಯಾನೆ ಶಾಕಿಫ್, ಮೊಹಮ್ಮದ್ ಫಾರೂಕ್ ಊರ್ ರೆಹಮಾನ್ ಹಾಗೂ ಶಾಹಿದ್ ನಾಸೀರ್ ಸೇರಿ 7 ಮಂದಿ ಶಂಕಿತರನ್ನು ಬಂಽಸಲಾಗಿದೆ.ಕೇರಳದಲ್ಲಿ 19, ತಮಿಳುನಾಡಿನಲ್ಲಿ 11, ಆಂಧ್ರಪ್ರದೇಶದಲ್ಲಿ 4, ರಾಜಸ್ಥಾನದಲ್ಲಿ 2, ಉತ್ತರ ಪ್ರದೇಶ ಹಾಗೂ ತೆಲಂಗಾಣದಲ್ಲಿ ತಲಾ ಓರ್ವನನ್ನು ಬಂಽಸಲಾಗಿದೆ.ಎನ್‌ಐಎ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಪುತ್ತೂರಿನ ಅಬ್ದುಲ್ ಖಾದರ್ ಅವರ ಹೆಸರು ಇಲ್ಲ.

ಕಾಲೇಜು ಪ್ರಾಧ್ಯಾಪಕರ ಕೈ ಕತ್ತರಿಸಿದ ಪ್ರಕರಣ, ಧರ್ಮ ಪ್ರತಿಪಾದಕರ ಕೊಲೆ, ಪ್ರಮುಖ ಧಾರ್ಮಿಕ ಸ್ಥಳ, ಧಾರ್ಮಿಕ ವ್ಯಕ್ತಿಗಳ ಸ್ಥಳಗಳನ್ನು ಸೋಟಿಸುವ ಸ್ಕೆಚ್ ಹಾಗೂ ಸೋಟಕ ಸಂಗ್ರಹ ಪ್ರಕರಣ, ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಬೆಂಬಲ, ಕೋಮು ಸೌಹಾರ್ದತೆ ಹಾಳು ಮಾಡುವ ಪ್ರಕರಣ, ಗಲಭೆ ಸೃಷ್ಟಿ ಪ್ರಕರಣ, ಸಾರ್ವಜನಿಕ ಆಸ್ತಿ ನಾಶ ಸೇರಿದಂತೆ ಹಲವು ಕ್ರಿಮಿನಲ್ ಹಿಂಸಾತ್ಮಕ ಪ್ರಕರಣಗಳು ಪಿಎಫ್ಐ ಸಂಘಟನೆ ನಾಯಕರು ಮತ್ತು ಕಾರ್ಯಕರ್ತರ ವಿರುದ್ದ ದಾಖಲಾಗಿದೆ. ಹಲವು ರಾಜ್ಯಗಳಲ್ಲಿ ಇಂತಹ ಪ್ರಕರಣಗಳು ದಾಖಲಾಗಿದೆ.ದೇಶದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಕೈಜೋಡಿಸಿರುವ ಆರೋಪವೂ ಈ ಸಂಘಟನೆ ಮೇಲಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕೃತ ಪ್ರಕಟಣೆಯಲ್ಲಿ ಹೇಳಿದೆ.

ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ….:

ಬಿಜೆಪಿ ಯುವ ಮುಖಂಡರಾಗಿದ್ದ ಪ್ರವೀಣ್ ನೆಟ್ಟಾರು ಅವರನ್ನು ಜು.26ರಂದು ರಾತ್ರಿ ದುಷ್ಕರ್ಮಿಗಳು ಬೆಳ್ಳಾರೆಯಲ್ಲಿ ಅವರ ಅಂಗಡಿ ಮುಂದೆಯೇ ಭೀಕರವಾಗಿ ಕಡಿದು ಹತ್ಯೆ ಮಾಡಿದ್ದ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಎನ್‌ಐಎಗೆ ವಹಿಸಿಕೊಟ್ಟಿತ್ತು.ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಬೆನ್ನಲ್ಲೇ ಎನ್‌ಐಎ ಸುಮಾರು 30ಕ್ಕೂ ಅಧಿಕ ಕಡೆ ದಾಳಿ ನಡೆಸಿತ್ತು.ಬಂಽತ ಆರೋಪಿಗಳಿಗೆ ಪಿಎಫ್ಐ ನಂಟು ಇದೆಯೇ ಎನ್ನುವ ಕುರಿತು ಎನ್‌ಐಎ ತನಿಖೆ ಮುಂದುವರಿಸಿತ್ತು

ಬಿಗಿ ಬಂದೋಬಸ್ತ್

ಎನ್‌ಐಎ ದಾಳಿ ಬೆನ್ನಲ್ಲೇ, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಜಿಲ್ಲೆಯಾದ್ಯಂತ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.ಪುತ್ತೂರು, ಉಪ್ಪಿನಂಗಡಿಯಲ್ಲಿಯೂ ಬಂದೋಬಸ್ತ್‌ಗಾಗಿ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ.ಮತ್ತೊಂದೆಡೆ ಸಂಘಟನೆ ಪ್ರಮುಖರು ಜಾಗೃತರಾಗಿರುವಂತೆ ಗುಪ್ತಚರ ಇಲಾಖೆ ಸಲಹೆ ನೀಡಿದೆ. ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಎನ್‌ಐಎ ದಾಳಿ ಖಂಡಿಸಿ ಪುತ್ತೂರು, ಉಪ್ಪಿನಂಗಡಿಯಲ್ಲಿ ಪಿಎಫ್ಐ ಕಾರ್ಯಕರ್ತರ ಪ್ರತಿಭಟನೆ-ಗೋ ಬ್ಯಾಕ್ ಎನ್‌ಐಎ

ಪುತ್ತೂರು:ಪಿಎಫ್ಐ ಮುಖಂಡರ ಮನೆ, ಕಚೇರಿ ಮೇಲೆ ಎನ್‌ಐಎ ದಾಳಿ ನಡೆಸಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಘಟನೆಯನ್ನು ಖಂಡಿಸಿ ಪಿಎಫ್ಐ ಕಾರ್ಯಕರ್ತರು ‘ಗೋ ಬ್ಯಾಕ್ ಎನ್‌ಐಎ’ ಘೋಷಣೆಯೊಂದಿಗೆ ಉಪ್ಪಿನಂಗಡಿ ಮತ್ತು ಪುತ್ತೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಎನ್‌ಐಎ ದಾಳಿಯನ್ನು ಖಂಡಿಸಿ ಉಪ್ಪಿನಂಗಡಿಯಲ್ಲಿ ಪ್ರತಿಭಟನೆ ನಡೆಸಿದ ಪಿಎಫ್ಐ ಕಾರ್ಯಕರ್ತರು

ಪುತ್ತೂರು ದರ್ಬೆಯಲ್ಲಿ ಪಿಎಫ್ಐ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು.ಪೊಲೀಸ್ ಬಸ್ ಬಂದ ಕೆಲ ಹೊತ್ತಿನಲ್ಲೇ ಪ್ರತಿಭಟನೆ ಕೊನೆಗೊಳಿಸಿ ಕಾರ್ಯಕರ್ತರು ತೆರಳಿದರು.ರಿಯಾಝ್ ಪಳ್ಳತ್ತಾರು, ಉಮ್ಮರ್ ಸಹಿತ ಹಲವು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಉಪ್ಪಿನಂಗಡಿಯಲ್ಲಿ ಅಯೂಬ್ ಅಗ್ನಾಡಿ ಅವರ ಮನೆಗೆ ಎನ್‌ಐಎ ತಂಡ ಹಾಗೂ ಪೊಲೀಸರ ದಾಳಿಯ ಮಾಹಿತಿ ತಿಳಿದು, ಅಯೂಬ್ ಅಗ್ನಾಡಿ ಅವರ ಮನೆಯ ಮುಂದೆ ಜಮಾಯಿಸಿದ ಪಿಎಫ್ಐ ಕಾರ್ಯಕರ್ತರು ದಾಳಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.ಬಳಿಕ ಅವರಿಗೆ ವಿಷಯ ಮನವರಿಕೆ ಮಾಡಿದ ಪೊಲೀಸರು ತಮ್ಮ ಕಾರ್ಯ ಮುಗಿಸಿ, ಅಲ್ಲಿಂದ ತೆರಳಿದರು.ಪಿಎಫ್ಐ ನಾಯಕರ ವಿರುದ್ಧ ಎನ್‌ಐಎ ದಾಳಿಯನ್ನು ಖಂಡಿಸಿ ಉಪ್ಪಿನಂಗಡಿ ಬಸ್ ನಿಲ್ದಾಣ ಬಳಿಯ ವೃತ್ತದ ಬಳಿಯೂ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಮಂಗಳೂರಿನಲ್ಲಿಯೂ ಪಿಎಫ್ಐ ಕಾರ್ಯಕರ್ತರಿಂದ ಪ್ರತಿಭಟನೆ ನಡೆದಿದೆ.

ಎನ್‌ಐಎ ದಾಳಿಯನ್ನು ಖಂಡಿಸಿ ಪುತ್ತೂರಿನಲ್ಲಿ ಪ್ರತಿಭಟನೆ ನಡೆಸಿದ ಪಿಎಫ್ಐ ಕಾರ್ಯಕರ್ತರು

LEAVE A REPLY

Please enter your comment!
Please enter your name here