ಕುಂಬ್ರ ವರ್ತಕರ ಸಂಘದಿಂದ ಚಿಕಿತ್ಸೆಗೆ ಸಹಾಯಧನ ಹಸ್ತಾಂತರ

0

ಪುತ್ತೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡ ಕುಂಬ್ರದ ಮೈದಾನಿಮೂಲೆ ನಿವಾಸಿ ತೌಫಿಕ್‌ರವರಿಗೆ ಚಿಕಿತ್ಸಾ ವೆಚ್ಚವಾಗಿ ಕುಂಬ್ರ ವರ್ತಕರ ಸಂಘದಿಂದ ಸಹಾಯಧನವನ್ನು ನ.12 ರಂದು ಹಸ್ತಾಂತರಿಸಲಾಯಿತು.

ತೌಫಿಕ್‌ರವರು ಕುಂಬ್ರ ವರ್ತಕರ ಸಂಘದ ಸದಸ್ಯರಾಗಿದ್ದು ಪರ್ಪುಂಜದಲ್ಲಿ ಕೋಳಿ ಅಂಗಡಿ ವ್ಯಾಪಾರ ನಡೆಸುತ್ತಿದ್ದರು. ತೌಫಿಕ್‌ರವರ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಆಲಂಗಾರು ಸಮೀಪ ಅಪಘಾತ ಸಂಭವಿಸಿ ಇವರ ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು ಈಗಾಗಲೇ ಸುಮಾರು 3 ಲಕ್ಷ ರೂ.ಗಳಷ್ಟು ಚಿಕಿತ್ಸೆ ವೆಚ್ಚ ಆಗಿದ್ದು ತೀರಾ ಬಡತನದಲ್ಲಿರುವ ಇವರ ಕುಟುಂಬಕ್ಕೆ ಆರ್ಥಿಕ ನೆರವು ಬೇಕಾಗಿದೆ. ಈ ಬಗ್ಗೆ ಕುಂಬ್ರ ವರ್ತಕರ ಸಂಘವು ತನ್ನ ವಾಟ್ಸಫ್ ಗ್ರೂಪ್‌ನಲ್ಲಿ ಸಹಾಯಕ್ಕೆ ಮನವಿ ಮಾಡಿಕೊಂಡಿತ್ತು. ಇದಕ್ಕೆ ಸ್ಪಂದಿಸಿದ ಹಲವು ಮಂದಿ ವರ್ತಕರು ತಮ್ಮ ಕೈಲಾದ ಸಹಾಯವನ್ನು ಮಾಡಿದ್ದರು. ಹೀಗೆ ಸಂಗ್ರಹವಾದ ಹಣವನ್ನು ತೌಫಿಕ್‌ರವರಿಗೆ ನೀಡಲಾಯಿತು. ವರ್ತಕರ ಸಂಘದ ಮಾಜಿ ಕಾರ್ಯದರ್ಶಿ, ಕಾರ್ಯಕಾರಿ ಸಮಿತಿ ಸದಸ್ಯ ಅಝರ್ ಷಾ ಕುಂಬ್ರರವರು ವಾಟ್ಸಫ್ ಗ್ರೂಪ್‌ನ ಜವಬ್ದಾರಿ ವಹಿಸಿಕೊಂಡಿದ್ದರು.

ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ, ನಿಕಟಪೂರ್ವ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ, ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ, ಕೋಶಾಧಿಕಾರಿ ಸಂಶುದ್ದೀನ್ ಎ.ಆರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಅಝರ್ ಷಾ ಕುಂಬ್ರ, ಪದ್ಮನಾಭ ಆಚಾರ್ಯ, ಖಾಯಂ ಸದಸ್ಯರಾದ ದಿವಾಕರ ಶೆಟ್ಟಿ, ರಮೇಶ್ ಆಳ್ವ ಕಲ್ಲಡ್ಕ ಉಪಸ್ಥಿತರಿದ್ದರು.

ಮತ್ತೆ ವಾಟ್ಸಫ್ ಗ್ರೂಪ್‌ನ ಬಳಕೆ
ತನ್ನ ಜನಪರ ಕೆಲಸಗಳಿಂದ ಕುಂಬ್ರ ವರ್ತಕರ ಸಂಘವು ತಾಲೂಕಿನಲ್ಲೇ ಗುರುತಿಸಿಕೊಂಡಿದ್ದು ವರ್ತಕರಿಗೆ ಮಾಹಿತಿ ನೀಡುವುದು ಅವರ ಉತ್ಪನ್ನಗಳ ಪ್ರಚಾರಕ್ಕೆ ಮಾಡಿರುವ ಸಂಘದ ವಾಟ್ಸಫ್ ಗ್ರೂಪ್‌ನ ಮೂಲಕ ವರ್ತಕರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದೆ. ತೊಂದರೆಯಲ್ಲಿರುವ ವರ್ತಕರಿಗೆ ಸಹಾಯ ಮಾಡಿ ಎಂದು ತನ್ನ ವಾಟ್ಸಫ್ ಗ್ರೂಪ್‌ನಲ್ಲಿ ಮನವಿ ಮಾಡಿಕೊಳ್ಳುವುದು ಮತ್ತು ಆ ಮೂಲಕ ಧನ ಸಂಗ್ರಹ ಮಾಡಿ ತೊಂದರೆಯಲ್ಲಿರುವ ವರ್ತಕರಿಗೆ ನೀಡುವ ಕೆಲಸವನ್ನು ಕಳೆದ ಹಲವು ವರ್ಷಗಳಿಂದ ಸಂಘ ಮಾಡುತ್ತಿದೆ.
ಕುಂಬ್ರ ಆಶಾದೀಪ ಸಹಾಯಹಸ್ತದಿಂದ ಕಿಟ್ ವಿತರಣೆ
ಕುಂಬ್ರದಲ್ಲಿ ಸಮಾನ ಮನಸ್ಕರಿಂದ ಆರಂಭಗೊಂಡಿರುವ ಆಶಾದೀಪ ಸಹಾಯಹಸ್ತದಿಂದ ತೌಫಿಕ್ ಕುಟುಂಬಕ್ಕೆ ಸುಮಾರು ರೂ.2500 ಮೌಲ್ಯದ ಆಹಾರ ಕಿಟ್ ಅನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ಆಶಾದೀಪ ಸಹಾಯಹಸ್ತ ತಂಡವು ತೀರಾ ಬಡತನದಲ್ಲಿರುವ ಹಲವು ಕುಟುಂಬಗಳಿಗೆ ಈಗಾಗಲೇ ಆಹಾರ ಕಿಟ್‌ಗಳನ್ನು ವಿತರಣೆ ಮಾಡಿದೆ. ಆಶಾದೀಪ ಸಹಾಯಹಸ್ತ ತಂಡದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here