ಬೆಳ್ಳಿಪ್ಪಾಡಿ: ಜಾಗದ ವಿವಾದ ಇತ್ತಂಡದಿಂದ ಹಲ್ಲೆ ಆರೋಪ – ಆಸ್ಪತ್ರೆಗೆ ದಾಖಲು

0

ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಕಲ್ಲಡ್ಕ ಎಂಬಲ್ಲಿ ಜಾಗದ ವಿವಾದಕ್ಕೆ ಸಂಬಂಧಿಸಿ ಇತ್ತಂಡದವರು ಹಲ್ಲೆ ಆರೋಪ ಹೊರಿಸಿ ಮೂವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಕೆಮ್ಮಿಂಜೆ ಗ್ರಾಮದ ಕೊಂಬಾರೆಟ್ಟು ನಿವಾಸಿ ಶಕುಂತಲಾ ರೈ(67ವ), ಬೆಳ್ಳಿಪ್ಪಾಡಿ ಗ್ರಾಮದ ಕಲ್ಲಡ್ಕ ನಿವಾಸಿಗಳಾದ ಶಿವಮ್ಮ(62ವ), ಚೆನ್ನಮ್ಮ(65ವ)ರವರು ಪುತ್ತೂರಿನ ಪ್ರತ್ಯೇಕ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.


ಎ.ಸಿಕೋರ್ಟ್‌ನಲ್ಲಿ ನಮ್ಮ ಪರವಾದ ತೀರ್ಪು:
ಶಕುಂತಲಾ ರೈ ಅವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ನನ್ನ ತಾಯಿಯವರಿಂದ ಪಿತ್ರಾರ್ಜಿತವಾಗಿ ಬಂದ ಸುಮಾರು 5 ಎಕ್ರೆ ಜಾಗದಲ್ಲಿ 50 ವರ್ಷದಿಂದ ನಾನು, ಸಹೋದರಿಯರಾದ ಶ್ವೇತಾ ಪ್ರಕಾಶ್ ರೈ, ನವೀನಾ ರೈ, ಜಯಲತಾ ರೈ ಅವರು ಚಿಕ್ಕಂದಿನಿಂದಲೆ ಸಾಗುವಳಿ ಮಾಡುತ್ತಿದ್ದೆವು. ಆದರೆ ಸದ್ರಿ ಜಾಗದಲ್ಲಿ ಸಂಜೀವ ಗೌಡ ಯಾನೆ ರಾಮಣ್ಣ ಗೌಡ, ಸುಭಾಶ್, ಹರೀಶ್, ಪದ್ಮನಾಭ ಗೌಡ ಅವರೊಂದಿಗೆ ತಕಾರರು ಇತ್ತು. ಈ ಕುರಿತು ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ನ.9ರಂದು ನಮ್ಮ ಪರವಾಗಿ ತೀರ್ಪು ಆಗಿದೆ. ಈ ನಿಟ್ಟಿನಲ್ಲಿ ನ.29ರಂದು ಮಧ್ಯಾಹ್ನ ಜೆಸಿಬಿಯಲ್ಲಿ ಜಾಗವನ್ನು ಸಮತ್ತಟ್ಟು ಮಾಡುವ ಸಮಯ ಹರೀಶ್, ಪದ್ಮನಾಭ ಗೌಡ, ಸಂಜೀವ ಗೌಡ ಯಾನೆ ರಾಮಣ್ಣ ಗೌಡ, ಪೆರ್ನುಗೌಡ, ಸುಭಾಶ್ ಮತ್ತು ಇತರರು ನಮ್ಮ ಬಳಿ ಬಂದು ನಮಗೆ ಅವಾಚ್ಯ ಶಬ್ದಗಳಿಂದ ನಿಂಧಿಸಿ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ನಾವು ಜಾಗಕ್ಕೆ ಹೋಗುವಾಗ ನಮಗೆ ತೊಂದರೆ ಆಗದಂತೆ ಪೊಲಿಸ್ ಪ್ರೊಟೆಕ್ಷನ್ ಕೇಳಿದ್ದೇವು. ಅದರೆ ಪೊಲೀಸರು ನಮಗೆ ಸ್ಪಂಧಿಸಿಲ್ಲ. ನಮಗೆ ಹಲ್ಲೆ ನಡೆದಾಗ ದೂರು ನೀಡಿದರೂ ಪೊಲೀಸರು ಸ್ವೀಕರಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಡಿಕ್ಲರೇಶನ್‌ನಲ್ಲಿ ಸಿಕ್ಕಿದ ಜಾಗದಲ್ಲಿ ಕೆಲಸ ಮಾಡುತ್ತಿರುವ ವೇಳೆ ಹಲ್ಲೆ:
ಬೆಳ್ಳಿಪ್ಪಾಡಿ ಗ್ರಾಮದ ಕಲ್ಲಡ್ಕ ನಿವಾಸಿ ಶಿವಮ್ಮ(69ವ) ಮತ್ತು ಚೆನ್ನಮ್ಮ(65ವ)ರವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಹಲವು ವರ್ಷಗಳ ಹಿಂದೆಯೇ ಡಿಕ್ಲರೇಶನ್ ಮೂಲಕ ನಮ್ಮ ಹಿರಿಯರಿಗೆ ಸಿಕ್ಕಿದ ಜಾಗದಲ್ಲಿ ನಾವು ಗದ್ದೆ ಬೇಸಾಯ ಮಾಡುತ್ತಿದ್ದೆವು. ಬೆಳವಣಿಗೆಯಲ್ಲಿ ಅದರಲ್ಲಿ ಅಡಿಕೆ ಗಿಡ ಇಡಲಾಗಿದೆ. ಈ ಜಾಗದಲ್ಲಿ ಶಂಕರ ಗೌಡ, ಅಂಗಾರ ಗೌಡ, ಪಕೀರ ಗೌಡ, ಬಿರ್ಮಣ್ಣ ಗೌಡ, ಪದ್ಮನಾಭ ಗೌಡ, ಕೊರಗಪ್ಪ ಗೌಡರಿಗೆ ಪಾಲು ಇದೆ. ಇತ್ತೀಚೆಗೆ ನಾವು ಮನೆಗೆ ಬೀಗ ಹಾಕಿ ಕ್ಷೇತ್ರ ದರ್ಶನಕ್ಕೆ ಹೋಗಿದ್ದೆವು. ಮನೆಗೆ ಹಿಂದಿರುಗಿದಾಗ ನಮ್ಮ ಮನೆಯನ್ನು ನೆಲಸಮ ಮಾಡಲಾಗಿತ್ತು. ಹಾಗೆ ತೋಟಕ್ಕೆ ಹೋದಾಗ ಅಲ್ಲಿ ಶ್ವೇತಾ ಪ್ರಕಾಶ್ ರೈ, ಶಕುಂತಲಾ ರೈ, ನವೀನಾ, ಜಯಲತಾ ಸಹಿತ 20ಕ್ಕೂ ಅಧಿಕ ಮಂದಿ ನಮಗೆ ಅವಾಚ್ಯ ಶಬ್ದಗಳಿಂದ ನಿಂಧಿಸಿ ನಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ಕತ್ತಿ ಹಿಡಿದು ನಮ್ಮನ್ನು ಬೆನ್ನಟ್ಟಿಸಿದ್ದರು. ಈ ನಡುವೆ ನನಗೆ ಅವರೆಲ್ಲ ಸೇರಿ ಹಲ್ಲೆ ನಡೆಸಿದ್ದಾರೆ. ಇದರ ಜೊತೆಗೆ ಕೃಷಿಗೆ ಕಟಾವು ಯಂತ್ರವನ್ನು ಹರಿಸಿ ಹಾನಿ ಮಾಡಿದ್ದಾರೆ ಎಂದು ಶಿವಮ್ಮ ಅವರು ಆರೋಪಿಸಿದ್ದಾರೆ.

ನ್ಯಾಯ ಸಿಗುವ ತನಕ ಹೋರಾಟ:
ಅನಾದಿ ಕಾಲದಿಂದ ಗೇಣಿ ಹಕ್ಕಿನ ಮೂಲಕ ನಮಗೆ ಸಿಕ್ಕಿದ ಜಾಗದ ಬಗ್ಗೆ ನಮ್ಮಲ್ಲಿ ಸೂಕ್ತ ದಾಖಲೆ ಇದೆ. ವಿಚಾರ ಎಸಿ ಕೋರ್ಟ್‌ನಲ್ಲಿ ಇರುವಾಗ ನಮ್ಮಲ್ಲಿ ಯಾವುದೇ ಸಹಿ ಕೂಡಾ ಪಡೆಯಲಿಲ್ಲ. ಒಂದು ವೇಳೆ ಮನೆ ನೆಲಸಮ ಅಥವಾ ತೆರವು ಮಾಡಬೇಕಾದರೂ ಇಲಾಖೆಯ ಅಧಿಕಾರಿಗಳ ಉಪಸ್ಥಿಯಲ್ಲಿ ತೆರವು ಮಾಡಬೇಕಾಗಿತ್ತು. ಆದರೆ ಅದೂ ಯವುದು ಮಾಡದೆ ಅಕ್ರಮ ಎಸಗಿದ್ದಾರೆ. ಈ ಕುರಿತು ನಾವು ಹೈಕೋರ್ಟ್‌ಗೆ ದಾವೆ ಹೂಡಲಿದ್ದೇವೆ. ನ್ಯಾಯ ಸಿಗುವ ತನಕ ಹೋರಾಟ ಮಾಡಲಿದ್ದೇವೆ ಎಂದು ಶಿವಮ್ಮ ಮತ್ತು ಚೆನ್ನಮ್ಮ ಅವರು ತಿಳಿಸಿದ್ದಾರೆ.

ಶಾಸಕರ ಒತ್ತಡ ಆರೋಪ :
ಎಸಿ ಕೋರ್ಟ್‌ನಲ್ಲಿ ನಮ್ಮ ಪರವಾಗಿ ತೀರ್ಪು ಆದರೂ ನಮ್ಮ ಪರವಾಗಿರುವ ತೀರ್ಪನ್ನು ತಪ್ಪಿಸಲು ನಮ್ಮ ಶಾಸಕರಾದ ಸಂಜೀವ ಮಠಂದೂರು ಹಲವಾರ ರೀತಿಯಲ್ಲಿ ಒತ್ತಡ ಹಾಕಿದ್ದಾರೆ. ಆದರೂ ಸಹಾಯಕ ಕಮಿಷನರ್ ಅವರು ನಮ್ಮ ದಾಖಲೆ ಪತ್ರ ನೋಡಿ ನಮಗೆ ನ್ಯಾಯ ಕೊಡಿಸಿದ್ದಾರೆ. ನ್ಯಾಯ ಕೊಟ್ಟ ಮರುದಿನವೇ ನ್ಯಾಯ ಮಂಡಳಿ ಸಮಿತಿಯ ಸದಸ್ಯರನ್ನು ತೆಗೆದು ಹಾಕಿ. ಬೇರೊಬ್ಬರನ್ನು ನೇಮಕ ಮಾಡಿದ್ದಾರೆ. ಈ ರೀತಿಯಾಗಿ ಜನಸಾಮಾನ್ಯರಿಗೆ ಶಾಸಕರು ಅನ್ಯಾಯ ಮಾಡುತ್ತಿದ್ದಾರೆ ಎಂದು ಶಕುಂತಲಾ ರೈ ಅವರು ಆರೋಪಿಸಿದ್ದಾರೆ. ಆದರೆ ಶಾಸಕರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಜಾಗದ ವಿಚಾರ ಯಾ ತಕಾರರು ನೋಡಲು ಅದಕ್ಕಾಗಿಯೇ ಒಂದು ವ್ಯವಸ್ಥೆ ಇದೆ. ನಾನಗೂ ಅದಕ್ಕೂ ಯಾವುದೇ ಸಂಬಂವಿಲ್ಲ. ನನ್ನ ಮೇಲೆ ಆರೋಪ ಸರಿಯಲ್ಲ ಎಂದು ಹೇಳಿದರು.

LEAVE A REPLY

Please enter your comment!
Please enter your name here