‘ಅಡಿಕೆ ಬೆಳೆಗಾರರ ಮತದ ಬಗ್ಗೆ ಮಾತ್ರ ಆಸಕ್ತಿ ಹೊಂದಿರುವ ಕಾಂಗ್ರೆಸ್‌ನಿಂದ ಅಡಿಕೆ ಬೆಳೆಗಾರರ ಕುರಿತು ಮೊಸಳೆ ಕಣ್ಣೀರು’ – ಶಾಸಕ ಸಂಜೀವ ಮಠಂದೂರು ಪತ್ರಿಕಾಗೋಷ್ಠಿ

0

ಪುತ್ತೂರು:ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್‌ನವರು ಅಡಿಕೆ ಬೆಳೆಗಾರರನ್ನು ಮತ ಬ್ಯಾಂಕ್‌ಗಳನ್ನಾಗಿ ಬೆಳೆಸುತ್ತಿದ್ದಾರೆ. ಅವರಿಗೆ ಅಡಿಕೆ ಬೆಳೆಗಾರರ ಬಗ್ಗೆ ಆಸಕ್ತಿ ಇಲ್ಲ. ಆದರೆ ಆಡಿಕೆ ಬೆಳೆಗಾರರ ಮತದ ಬಗ್ಗೆ ಆಸಕ್ತಿ ಇದೆ ಎಂದು ಅಡಿಕೆ ಬೆಳೆಗಾರರ ಸಹಕಾರ ಸಂಘದ ನಿರ್ದೇಶಕರೂ ಆಗಿರುವ ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.


ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರು ಅಡಿಕೆ ಬೆಳೆಯ ಕುರಿತು ರೈತ ವಿರೋಧಿಯಾಗಿರುವ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ವತಿಯಿಂದ ಪುತ್ತೂರಿನಲ್ಲಿ ಪ್ರತಿಭಟನೆ ನಡೆದ ಬೆನ್ನಲ್ಲೇ ಶಾಸಕ ಸಂಜೀವ ಮಠಂದೂರು ಅವರು ಪುತ್ತೂರು ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಇಷ್ಟರ ತನಕ ತೆಪ್ಪಗೆ ಇದ್ದ ಕಾಂಗ್ರೆಸ್‌ನವರು ಈಗ ಹೊಸ ಜುಬ್ಬ ಹೊಲಿಸಿ ನಾವು ಅಡಿಕೆ ಬೆಳೆಗಾರರ ರಕ್ಷಣೆ ಮಾಡುತ್ತೆವೆ ಎಂದು ರಸ್ತೆಯಲ್ಲಿ ನಿಂತು ಪ್ರತಿಭಟನೆ ಮಾಡುತ್ತಿರುವುದರ ಹಿಂದೆ ಒಂದಷ್ಟು ರಾಜಕಾರಣವಿದೆ ಎಂದು ಹೇಳಿದ ಶಾಸಕರು, ಅಡಿಕೆಗೆ ಇಷ್ಟೊಂದು ಒಳ್ಳೆಯ ಬೆಲೆ ತರಲು ಯಾರು ಕಾರಣ? ಅಡಿಕೆಗೆ ಬೆಂಬಲ ಬೆಲೆಗಾಗಿ ನಾಲ್ಕು ದಿವಸ ಸಂಪಾಜೆಯಿಂದ ಮಂಗಳೂರು ತನಕ ಪಾದಯಾತ್ರೆ ಮಾಡಿದವರು ಯಾರು? ಅಡಿಕೆ ಬೆಳೆಗಾರರ ಹಿತವನ್ನು ಕಾಪಾಡಲು ಸಹಕಾರ ಭಾರತಿ ನೇತೃತ್ವದ ಕ್ಯಾಂಪ್ಕೋ ಏನೇನು ಮಾಡಿದೆ?, ರೈತರಿಗೆ ಸಬ್ಸಿಡಿ ದರದಲ್ಲಿ ಕಾಪರ್ ಸಲ್ಪೇಟ್ ಕೊಡುವ ಸಂಸ್ಥೆ ಯಾವುದು ? ಇವೆಲ್ಲ ಅಡಿಕೆ ಬೆಳೆಗಾರರಿಗೆ ಗೊತ್ತಿರುವುದರಿಂದ ಅವರು ಆತಂಕದಲ್ಲಿ ಇಲ್ಲ. ಆದರೆ ನಾವು ಎಲ್ಲಿ ಸೋಲುತ್ತೇವೆಯೋ ಎಂಬ ಆತಂಕದಲ್ಲಿರುವ ಕಾಂಗ್ರೆಸ್‌ನವರು ಅದಕ್ಕಾಗಿ ಏನಾದರೂ ಮಾಡಿ ಅಡಿಕೆ ಬೆಳೆಗಾರರನ್ನು ಅಡ್ಡದಾರಿಗೆ ಕೊಂಡುಹೋಗಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅದರ ಜೊತೆಗೆ ಮಾರುಕಟ್ಟೆಗೂ ಆತಂಕ ತರುತ್ತಿದ್ದಾರೆ ಎಂದು ಆರೋಪಿಸಿದರು. ಅಡಿಕೆ ಬಹಳ ಸೂಕ್ಷ್ಮ ವಿಚಾರ. ಸ್ವಲ್ವ ವ್ಯತ್ಯಾಸ ಆದರೂ ಧಾರಣೆಯಲ್ಲಿ ಏರು-ಪೇರಾಗುತ್ತದೆ. ಕಾಂಗ್ರೆಸ್‌ಗೆ ಅಡಿಕೆ ಬೆಳೆಗಾರರ ಬಗ್ಗೆ ಅಷ್ಟೊಂದು ಕಾಳಜಿ ಇರುತ್ತಿದ್ದರೆ ಅವರ ಸರಕಾರ ಇರುವಾಗ, ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಆದೇಶ ಹೊರಡಿಸಿದ್ದು ಯಾಕೆ ಎಂದು ಪ್ರಶ್ನಿಸಿದರಲ್ಲದೆ, ಇವತ್ತು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಮಠಂದೂರು ಹೇಳಿದರು.

ಸರಕಾರ ಅಡಿಕೆ ಬೆಳೆಗಾರರ ಪರವಾಗಿದೆ: ಅಡಿಕೆಗೆ ರೋಗ ಬಂದಾಗ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ 2020-21ರ ಬಜೆಟ್‌ನಲ್ಲಿ ರೂ.25 ಕೋಟಿ ಇಟ್ಟಿದ್ದರು. ಹಳದಿ ರೋಗದ ಸಂಶೋಧನೆಗೆ ರೂ.1.5 ಕೋಟಿ ಅನುದಾನ ಒದಗಿಸಿದ್ದಾರೆ. ಅಡಿಕೆಗೆ ಇರುವ ಈಗಿನ ಹೊಸ ಕಾಯಿಲೆಗೂ ಸಂಶೋಧನೆ ಮಾಡುವ ಕೆಲಸ ಆರಂಭಗೊಂಡಿದೆ. ಎಪಿಎಂಸಿಗಳಲ್ಲಿ ಇದ್ದ ಶೇ.3 ತೆರಿಗೆಯನ್ನು ಶೇ.0.75ಕ್ಕೆ ಇಳಿಸಲಾಗಿದೆ. ಇದೆಲ್ಲವನ್ನೂ ಮಾಡಿರುವ ರಾಜ್ಯ ಸರಕಾರ ಅಡಿಕೆ ಬೆಳೆಗಾರರ ಹಿತವನ್ನು ಕಾಪಾಡುವ ಕೆಲಸ ಮಾಡಿದೆ. ಅಡಿಕೆ ಬೆಳೆ ವಿಸ್ತರಣೆಗೆ ಎಸ್ಸಿ ಎಸ್ಟಿ ಸಮುದಾಯಕ್ಕೆ ತುಂತುರು ನೀರಿನ ಸೌಲಭ್ಯ, ಇತರರಿಗೂ ಸೌಲಭ್ಯ ನೀಡಿದೆ. ಕೊಳೆರೋಗ ಬಂದಾಗ ಬೋರ್ಡೋ ದ್ರಾವಣ ಸಿಂಪಡಣೆಗಾಗಿ ಮೈಲುತುತ್ತು ಸಬ್ಸಿಡಿಯಲ್ಲಿ ನೀಡಿದೆ. ಈ ಎಲ್ಲಾ ಕೆಲಸವನ್ನು ರಾಜ್ಯ ಸರಕಾರ ಅಡಿಕೆ ಬೆಳೆಗಾರರ ಪರವಾಗಿ ಮಾಡುತ್ತಿದೆ ಎಂದು ಸಂಜೀವ ಮಠಂದೂರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಎಸ್ ಶೆಟ್ಟಿ, ಕೆಡಿಪಿ ನಾಮನಿರ್ದೇಶಿತ ಸದಸ್ಯ ಕಂಟ್ರಮಜಲು ಭಾಸ್ಕರ್ ರೈ ಉಪಸ್ಥಿತರಿದ್ದರು.

30 ವರ್ಷದ ಹಿಂದೆ ರಾಮ್ ಭಟ್ ಆತಂಕ ವ್ಯಕ್ತಪಡಿಸಿದ್ದರು
ಗೃಹ ಸಚಿವರು ವಾಸ್ತವ ತಿಳಿಸಿದ್ದಾರೆ

ನಾನೊಬ್ಬ ಅಡಿಕೆ ಬೆಳೆಗಾರರ ಮಧ್ಯೆ ಜೀವನ ಮಾಡುತ್ತಿರುವ ಒಬ್ಬ ರೈತ. ಪಾರಂಪರಿಕ ಬೆಳೆಯಾಗಿ ಅಡಿಕೆಯನ್ನು ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗಿನಲ್ಲಿ ನೂರಾರು ವರ್ಷದಿಂದ ಬೆಳೆಸುತ್ತಿದ್ದಾರೆ. ಒಂದಷ್ಟು ಜನ ಅಡಿಕೆಗೆ ಕಮರ್ಷಿಯಲ್ ಆಗಿ ಬೆಲೆ ಏರಿದಾಗ ಈ ಬೆಳೆಯನ್ನು ವಿಸ್ತಾರ ಮಾಡುತ್ತಿರುವುದು ಮುಂದೆ ಅಪಾಯವಾಗಲಿದೆ ಎಂದು ಸುಮಾರು 30 ವರ್ಷಗಳ ಹಿಂದೆ ರಾಮ್ ಭಟ್ ಕ್ಯಾಂಪ್ಕೋ ಅಧ್ಯಕ್ಷರಾಗಿದ್ದ ವೇಳೆ ಹೇಳಿದ್ದರು. ಅಡಿಕೆ ಅನ್ನುವುದು ಯಾವುದೇ ಒಂದು ಆಹಾರದ ಬೆಳೆಯಲ್ಲ. ಅದು ಜಗಿದು ಉಗಿಯುವ ಪದಾರ್ಥ. ಇದರ ಉತ್ಪಾದನೆ ಜಾಸ್ತಿಯಾದಷ್ಟು ಅಪಾಯ ಇದೆ ಎಂದು ಆಗ ರಾಮ್ ಭಟ್ ಆತಂಕ ವ್ಯಕ್ತಪಡಿಸಿದ್ದರು. ಅದೇ ರೀತಿಯ ಆತಂಕವನ್ನು ಇದೀಗ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವ್ಯಕ್ತಪಡಿಸಿದ್ದಾರೆ. ಅಡಿಕೆ ಬೆಳೆ ಜಾಸ್ತಿ ವಿಸ್ತರಣೆಯಾದಷ್ಟು ಕಷ್ಟ ಇದೆ. ರೈತರಿಗೆ ಮತ್ತು ಪಾರಂಪರಿಕ ಬೆಳೆಗಾರರಿಗೆ ಸಮಸ್ಯೆ ಬರಬಹುದು ಎಂದು ಹೇಳಿದ್ದಾರೆ ಹೊರತು ಅಡಿಕೆ ಬ್ಯಾನ್ ಆಗುತ್ತದೆ ಎಂದು ಹೇಳಿಲ್ಲ. ವಾಸ್ತವ ವಿಚಾರವನ್ನು ಅವರು ಜನರ ಮುಂದೆ ಇಟ್ಟಿದ್ದಾರೆ. ಆದರೆ ಕಾಂಗ್ರೆಸ್‌ನವರು ಚುನಾವಣೆಗೆ ಇದೊಂದು ಅಸವಾಗಬಹುದು ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಅಡಿಕೆ ಧಾರಣೆ ಮೇಲೆ ವ್ಯತ್ಯಾಸ ಆದರೆ ಕೇಂದ್ರ ಮತ್ತು ರಾಜ್ಯ ಸರಕಾರ ಮತ್ತೆ ಕ್ರಮ ಕೈಗೊಳ್ಳುತ್ತದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

LEAVE A REPLY

Please enter your comment!
Please enter your name here