ಪುತ್ತೂರು: ಚೆಕ್ ಅಮಾನ್ಯ ಪ್ರಕರಣದ ಆರೋಪಿಗೆ ಪುತ್ತೂರು ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶಿಸಿದೆ. ತೆಂಕಿಲ ನಿವಾಸಿ ಪರಶುರಾಮ ಡಿ.ಆರ್.ಅವರ ಪುತ್ರ ಕಿಶಾನ್ ಡಿ.ಪಿ. ಶಿಕ್ಷೆಗೊಳಗಾದವರು.
ಕಲ್ಲಿಮಾರ್ ನಿವಾಸಿ ಸಂಜೀವ ಶೆಟ್ಟಿಯವರ ಪುತ್ರ ಎಸ್.ಪ್ರದೀಪ್ ಶೆಟ್ಟಿಯವರಿಂದ 1 ಲಕ್ಷದ 30 ಸಾವಿರ ರೂ ಹಣ ಪಡೆದಿದ್ದ ಕಿಶಾನ್ ಅವರು ಪ್ರದೀಪ್ ಅವರಿಗೆ ಚೆಕ್ ನೀಡಿದ್ದರು.
ಈ ಚೆಕ್ ಅಮಾನ್ಯಗೊಂಡಿರುವ ಹಿನ್ನೆಲೆಯಲ್ಲಿ ಪುತ್ತೂರಿನ ಪ್ರಧಾನ ವ್ಯವಹಾರಿಕ ನ್ಯಾಯಾಧೀಶೆ ಅರ್ಚನಾ ಉನ್ನಿತಾನ್ ಅವರು ಆರೋಪಿ ಕಿಶಾನ್ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿ 1 ಲಕ್ಷದ 70 ಸಾವಿರ ರೂಪಾಯಿಯನ್ನು ಪಿರ್ಯಾದಿಗೆ ನೀಡಬೇಕು ಎಂದು ಆದೇಶಿಸಿದ್ದಾರೆ.
ಅಲ್ಲದೆ, 10 ಸಾವಿರ ರೂ ದಂಡ ವಿಧಿಸಿದ್ದಾರೆ. ತಪ್ಪಿದಲ್ಲಿ 6 ತಿಂಗಳ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ. ದೂರುದಾರ ಪ್ರದೀಪ್ ಶೆಟ್ಟಿ ಪರವಾಗಿ ನ್ಯಾಯವಾದಿಗಳಾದ ದೇವಾನಂದ ಕೆ, ಮಿಥುನ್ ಕುಮಾರ್ ರೈ ಎಸ್. ಮತ್ತು ಕು. ಹರಿಣಿ ವಾದಿಸಿದ್ದರು.