ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನೂತನ ಅನ್ನಛತ್ರ ಉದ್ಘಾಟನೆ

0

ದೇವರ ದಯೆ ಪ್ರಾಪ್ತಿಯಾಗಲು ನಿಸ್ವಾರ್ಥ ಸೇವೆ ಮುಖ್ಯ: ಮಾಣಿಲ ಶ್ರೀ

ಋಣ ಸಂದಾಯದ ಕೆಲಸ ದೇವಾಲಯದ ಅಭಿವೃದ್ಧಿ ಕಾರ್ಯಗಳ ಮೂಲಕ ಮಾಡುತ್ತಿದ್ದೇನೆ: ಸಂಜೀವ ಮಠಂದೂರು

ದೇವಾಲಯದ ವಿಚಾರದಲ್ಲಿ ಶಾಸಕರ ಸ್ಪಂಧನೆ ನಮಗೆಲ್ಲರಿಗೂ ಸಂತಸ ತಂದಿದೆ: ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು

ಬೇಧ ಭಾವ ತೊರೆದು ನಾವೆಲ್ಲರೂ ಒಟ್ಟಾಗಬೇಕು: ಸುರೇಶ್ ಕೆ.ಎಸ್.ಮುಕ್ಕುಡ

ಇಡ್ಕಿದು ಗ್ರಾಮ ಹಲವಾರು ಪ್ರಥಮತೆಗೆ ಕಾರಣೀಭೂತವಾಗಿರುವ ಗ್ರಾಮ: ಪ್ರಫುಲ್ಲ ಚಂದ್ರ ಪಿ.ಜಿ.


ವಿಟ್ಲ: ದೇವರ ದಯೆ ಪ್ರಾಪ್ತಿಯಾಗಲು ನಿಸ್ವಾರ್ಥ ಸೇವೆ ಮುಖ್ಯ. ನಮ್ಮ ಹಿಂದಿನ ಜೀವನಗಳನ್ಮು ಅವಲೋಕನ ಮಾಡಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ. ನಾವು ಮಾಡಿದ ಸತ್ಕರ್ಮ ನಮ್ಮನ್ನು ಕಾಪಾಡುತ್ತದೆ. ನಮ್ಮಲ್ಲಿ ಸದ್ಗುಣ ತುಂಬುವ ಕಾರ್ಯ ದೇವಾಲಯಗಳಿಂದ ಆಗುತ್ತಿದೆ. ಶಿಕ್ಷಣದೊಂದಿಗೆ ನೈತಿಕ್ಕ ಭದ್ಧತೆ ಅಗತ್ಯ ಎಂದು ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಹೇಳಿದರು.

ಶಾಸಕರ ಅನುದಾನದಿಂದ ನಿರ್ಮಿಸಲಾಗಿರುವ ಕ್ಷೇತ್ರದ‌ ಅನ್ನಚತ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಆರು ತಿಂಗಳ ಸಮಯದಲ್ಲಿ ಕ್ಷೇತ್ರಕ್ಕಾಗಿ ಊರವರು ಶ್ರದ್ಧಾ ಭಕ್ತಿಯ ಸೇವೆ ನೀಡಿದ್ದಾರೆ‌. ಇದು ಬಹಳ ಸಂತೋಷದ ವಿಚಾರವಾಗಿದೆ. ಇದನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಮ್ಮ ಮಕ್ಕಳನ್ನು ದೇವಾಲಯಕ್ಕೆ ನಿರಂತರವಾಗಿ ಕಳಿಸುವ ಕೆಲಸವಾಗಬೇಕು. ನಮ್ಮ ಶಿಷ್ಠಾಚಾರವನ್ನು ನಾವು ಪಾಲನೆ ಮಾಡಬೇಕು. ನಾನು ಎಂಬುದನ್ನು ತೊರೆದು ನಾವು ಎಂಬ ಭಾವನೆ ನಮ್ಮಲ್ಲಿರಬೇಕು. ಎಲ್ಲರೂ ಸಕ್ರೀಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಹಿಂದೂ ಧಾರ್ಮಿಕ ಕೇಂದ್ರಗಳ ಮೂಲಕ ನಾವೆಲ್ಲ ಒಂದಾಗಬೇಕು. ಜಾತಿ ಬಿಟ್ಟು ನೀತಿಯ ಮೂಲಕ ಹಿಂದೂ ಸಮಾಜವನ್ನು ಗಟ್ಟಿಗೊಳಿಸೋಣ ಎಂದು ಹೇಳಿದರು.

ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರು ರವರು ಮಾತನಾಡಿ ಬ್ರಹ್ಮಕಲಶಕ್ಕಾಗಿ ಊರಿಗೆ ಊರೆ ಒಟ್ಟಾಗಿದೆ. ಬ್ರಹ್ಮಕಲಶೋತ್ಸವದ ಉದ್ದೇಶ ಊರನ್ನು ಒಟ್ಟು ಸೇರಿಸುವುದಾಗಿದೆ. ನಮ್ಮ ಆಚರಣೆ, ಧಾರ್ಮಿಕತೆಯ ಉದ್ದೀಪನ ನಮ್ಮ ಸಂಸ್ಕೃತಿಯ ಪುನರುತ್ತಾನವನ್ನು ದೇವಾಲಯದ ಮುಖಾಂತರ ಸಮಾಜಕ್ಕೆ ಕೊಡಬೇಕಾಗಿದೆ. ಹಸಿರುವಾಣಿ ಮೆರವಣಿಗೆಯಲ್ಲೆ ಬ್ರಹ್ಮಕಲಶೋತ್ಸವದ ಯಶಸ್ಸು ಕಂಡುಬರುತ್ತದೆ. ನಮ್ಮ ಆಚಾರ ವಿಚಾರಗಳಿಂದ ಮಕ್ಕಳು ವಿಮುಖವಾಗುವ ಈಗಿನ ಕಾಲಘಟ್ಟದಲ್ಲಿ ಅವರನ್ನು ಸರಿಪಡಿಸುವ ಇಂತಹ ದೇವಾಲಯಗಳ ಪಾತ್ರ ಬಹಳಷ್ಟಿದೆ. ನನ್ನ ಋಣ ಸಂದಾಯದ ಕೆಲಸ ದೇವಾಲಯದ ಅಭಿವೃದ್ಧಿ ಕಾರ್ಯಗಳ ಮೂಲಕ ಮಾಡುತ್ತಿದ್ದೇನೆ. ದೈವ ದೇವರ ಆರಾಧನೆಯಿಂದ ನಮ್ಮ ಹಿಂದೂ ಸಮಾಜ ಭದ್ರವಾಗಿದೆ. ಹಿಂದುತ್ವದ ವಿಚಾರದಲ್ಲಿ ಹಿಂದುಗಳ ಭಾವನೆಗೆ ಬೆಲೆ ಕೊಡುವ ಸರಕಾರವಿದ್ದಾಗ ಮಾತ್ರ ಹಿಂದೂ ಸಮಾಜ ಪುನರುತ್ಥಾನ ಆಗಬಹುದು. ಎಲ್ಲವೂ ಭಗವಂತನ ಇಚ್ಚೆ. ಷಣ್ಮುಖನ ಅನುಗ್ರಹದಿಂದ ಎಲ್ಲವೂ ಸಾಧ್ಯ. ಎಲ್ಲವೂ ಭಯವಂತನಿಗೆ ಸಮರ್ಪಿತವಾಗಬೇಕು ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತುರವರು ಮಾತನಾಡಿ ದೇವಾಲಯದ ವಿಚಾರದಲ್ಲಿ ಶಾಸಕರ ಸ್ಪಂಧನೆ ನಮಗೆಲ್ಲರಿಗೂ ಸಂತಸತಂದಿದೆ. ಹೊರೆಕಾಣಿಕೆ ಮರವಣಿಗೆ ಬಹಳ ಸಂಭ್ರಮದಲ್ಲಿ ನಡೆದಿದೆ. ಸುವಸ್ತುಗಳೆಲ್ಲವೂ ಹೊರೆಕಾಣಿಕೆಯ ಮೂಲಕ ಕ್ಷೇತ್ರ ತಲುಪಿದೆ. ಒಟ್ಟು ವ್ಯವಸ್ಥೆಯನ್ನು‌ ಸರಿಪಡಿಸಿಕೊಂಡು ಮುಂದುವರೆಯೋಣ. ನಾನು ಅಧ್ಯಕ್ಷನಾದರೂ ಇಡ್ಕಿದು ಗ್ರಾಮದ ಜನತೆ ಒಟ್ಟು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.

ಕ್ಷೇತ್ರದ ಆಡಳಿತ ಮೊಕ್ತೇಸರರು ಸುರೇಶ್ ಕೆ. ಎಸ್. ಮುಕ್ಕುಡರವರು ಮಾತನಾಡಿ ಕೇವಲ ಆರು ತಿಂಗಳಲ್ಲಿ ದೇವಾಲಯದ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಂಡು ಇದೀಗ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದ್ದೇವೆ. ನಾವು ಶ್ರದ್ದಾಕೇಂದ್ರಗಳಲ್ಲಿ ರಾಜಕೀಯ ಮಾಡದೆ ಎಲ್ಲರೂ ಒಟ್ಟಾದಲ್ಲಿ ನಮಗೆ ಶ್ರೀರಕ್ಷೆ ಇದೆ. ಈವರೆಗೆ ಗ್ರಾಮಸ್ಥರೆಲ್ಲರು ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಇನ್ನು ಬ್ರಹ್ಮಕಲಶವನ್ನು ಯಶಸ್ವಿಯಾಗಿಸೋಣ. ಇಂದು ನಡೆದಂತಹ ಹಸಿರುವಾಣಿ ಮೆರವಣಿಗೆ ಬಹಳ ಯಶಸ್ವಿಯಾಗಿದೆ ಎಂದರು.

ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಪುಲ್ಲಚಂದ್ರ ಪಿ.ಜಿ., ಕೋಲ್ಪೆ ರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕ್ಷೇತ್ರದ ಈ ವೈಭವಕ್ಕೆ ನಾವೆಲ್ಲರೂ ಕಾರಣೀಭೂತರು. ಹಲವರ ನಿಸ್ವಾರ್ಥ ಸೇವೆ ಇಲ್ಲಿ ಇಷ್ಟೊಂದು ಕೆಲಸವಾಗಲು ಸಾಧ್ಯವಾಗಿದೆ. ಕ್ಷೇತ್ರಕ್ಕೆ ಅಳವಡಿಸಲಾಗೊರುವ ಇಂಟರ್ ಲಾಕ್, ಶೌಚಾಲಯ, ಅನ್ನಚತ್ರದ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಟ್ಟವರು ನಮ್ಮ ಶಾಸಕರು. ಇಡ್ಕಿದು ಗ್ರಾಮ ಪ್ರಥಮತೆಗೆ ಕಾರಣೀಭೂತವಾಗಿರುವ ಗ್ರಾಮವಾಗಿದೆ.
ನಮ್ಮಿಂದ ಆಯ್ಕೆಯಾಗಿರುವ ಶಾಸಕರು ಕ್ಷೇತ್ರಕ್ಕೆ ಹಲವಾರು ಕೆಲಸಗಳನ್ನು ಮಾಡಿಕೊಟ್ಟು ಆ ಸ್ಥಾನಕ್ಕೆ ಗೌರವ ತಂದುಕೊಟ್ಟಿದ್ದಾರೆ ಎಂದರು.

ತಿರುಮಲೇಶ್ವರ ಭಟ್ ಅನೂಚಾನ ನಿಲಯ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ದಿವಾಕರ ದಾಸ್ ನೇರ್ಲಾಜೆ,ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಎಂ. ಹೆಚ್.ರಮೇಶ್ ಭಟ್ ಮಿತ್ತೂರು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭಾಭವನದ ಗುತ್ತಿಗೆದಾರ ರಾಜೀವರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಎಂ.ಸುಧೀರ್ ಕುಮಾರ್ ಶೆಟ್ಟಿ ವಂದಿಸಿದರು. ನವೀನ್ ಮಂಡ್ರಬೈಲ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here