ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಂಭ್ರಮದ ಚಾಲನೆ:ಭವ್ಯ ಮೆರವಣಿಗೆಯಲ್ಲಿ ವೈಭವದ ಹಸಿರು ಹೊರೆ ಕಾಣಿಕೆ ಸಮರ್ಪಣೆ

0

ಕಾಣಿಯೂರು: ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ರೀ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಿಗೆ ಜ 11ರಂದು ಸಂಭ್ರಮದ ಚಾಲನೆ ನೀಡಲಾಯಿತು.

ಜ 16 ರವರೆಗೆ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಜ 11 ರಂದು ಬೆಳಿಗ್ಗೆ ತೋರಣ ಮುಹೂರ್ತ, ಸಾಮೂಹಿಕ ಪ್ರಾರ್ಥನೆ, ಊರ ಹಾಗೂ ಪರವೂರ ಭಕ್ತಾದಿಗಳಿಂದ ಹಸಿರು ಕಾಣಿಕೆ ಸಮರ್ಪಣೆ, ಉಗ್ರಾಣ ಮುಹೂರ್ತ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ಅಗಳಿ ಶ್ರೀ ಸದಾಶಿವ ಭಜನಾ ಮಂಡಳಿ ಸದಸ್ಯರಿಂದ ಮತ್ತು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಸೇವೆ ನಡೆಯಿತು. ಸಂಜೆ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ರಾತ್ರಿ ದೇವತಾ ಪ್ರಾರ್ಥನೆ, ಪ್ರಾಸಾದ ಶುದ್ಧಿ, ಅಂಕುರಾರ್ಪಣೆ ವಾಸ್ತು ರಕ್ಷೆಘ್ನ ಹೋಮ, ವಾಸ್ತು ಬಲಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಕಟೀಲು ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇವರಿಂದ ಯಕ್ಷಗಾನ ಬಯಲಾಟ `ಸಂಪೂರ್ಣ ಶ್ರೀದೇವಿ ಮಹಾತ್ಮೆ’ ನಡೆಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯ ರೈ ಮಾದೋಡಿ, ಅನುವಂಶೀಯ ಮೊಕ್ತೇಸರರಾದ ಶಿವರಾಮ ಗೌಡ ಅಗಳಿ, ಉದಯ ಕುಮಾರ್ ಅಗಳಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮೋಹನ ಗೌಡ ಇಡ್ಯಡ್ಕ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಮರಕ್ಕಡ, ಪ್ರಧಾನ ಅರ್ಚಕ ಗಣೇಶ್ ಭಟ್ ಮಾಡಾವು, ಅರ್ಚಕ ರಾಮಕೃಷ್ಣ ಭಟ್, ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಲಿಂಗಪ್ಪ ಗೌಡ ಅಗಳಿ ಹೊಸಮನೆ, ಸದಸ್ಯರಾದ ಕುಶಾಲಪ್ಪ ಗೌಡ ಅಗಳಿ ಮಾದೇರಿ, ಭವಾನಿಶಂಕರ ಗೌಡ ಅಗಳಿ, ಹರೀಶ್ ಮುಂಡಾಳ, ರಾಧಾಕೃಷ್ಣ ಗೌಡ ಬೈತಡ್ಕ, ಮಾಧವಿ ಬೊಮ್ಮೊಡಿ, ತಾರಾ ಶಿವಣ್ಣ ಗೌಡ ಬೆಳಂದೂರು, ಲಲಿತಾ ಅಜಿರಂಗಳ, ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ವಿವಿಧ ಸಮಿತಿ ಸಂಚಾಲಕರು, ಸಂಘ ಸಂಸ್ಥೆಯವರು ಉಪಸ್ಥಿತರಿದ್ದರು.

ಹಸಿರು ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ: ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ರೀ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಕೂಡುಕಟ್ಟಿನವರು, ಊರ, ಪರವೂರ ಭಕ್ತರಿಂದ ಹಸಿರು ಹೊರೆ ಕಾಣಿಕೆಯನ್ನು ಸಮರ್ಪಿಸಲಾಯಿತು. ಬೆಳಿಗ್ಗೆ ಪ್ರಾರಂಭದಲ್ಲಿ ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಹಸಿರು ಹೊರೆ ಕಾಣಿಕೆ ಸಮಿತಿ ಸಂಚಾಲಕರಾದ ಸತೀಶ್ ಮಾರ್ಕಾಜೆ ಅವರು ತೆಂಗಿನಕಾಯಿ ಒಡೆಯುವ ಮೂಲಕ ಹಸಿರು ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಕಾಣಿಯೂರು ಮುಖ್ಯ ರಸ್ತೆ ಮೂಲಕ ಬೆಳಂದೂರು ಮಾರ್ಗವಾಗಿ ದೇವಸ್ಥಾನಕ್ಕೆ ಭವ್ಯ ಮೆರವಣಿಗೆಯು ಸಾಗಿ ಬಂತು. ವೈಭವದ ಮೆರವಣಿಗೆಯಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಕುಣಿತ ಭಜನೆ, ಸಿಂಗಾರಿ ಮೇಳ ತಂಡದವರಿಂದ ಚೆಂಡೆ ವಾದನ ಮೆರವಣಿಗೆಗೆ ಮೆರುಗು ನೀಡಿದವು.

ಉಗ್ರಾಣ ಮುಹೂರ್ತಕ್ಕೆ ಚಾಲನೆ:
ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಿಗೆ ಭಕ್ತರಿಂದ ಸಮರ್ಪಿಸಲ್ಪಡುವ ಹಸಿರು ಹೊರೆ ಕಾಣಿಕೆಗೆ ಕ್ಷೇತ್ರದ ಅರ್ಚಕರಾದ ರಾಮಕೃಷ್ಣ ಭಟ್ ವಿವಿಧ ಪೂಜೆ ನೆರವೇರಿಸಿ ಉಗ್ರಾಣ ಮುಹೂರ್ತ ನೆರವೇರಿಸಿದರು.

ಊರಿನ ಜನರ ಪುಣ್ಯದ ಫಲ

800 ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಅಗಳಿ ಶ್ರೀ ಸದಾಶಿವ ದೇವಸ್ಥಾನವು 2006ರಲ್ಲಿ ಬ್ರಹ್ಮಕಲಶಗೊಂಡಿತ್ತು. ಇದೀಗ 17 ವರ್ಷಗಳ ಬಳಿಕ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಜೀರ್ಣೋದ್ಧಾರವನ್ನು ನೆರವೇರಿಸಿ ಬ್ರಹ್ಮಕಲಶ ನೆರವೇರಿಸಲಾಗುತ್ತಿದೆ. ಇದು ಈ ಊರಿನ ಜನರ ಪುಣ್ಯದ ಫಲ. ಸುವರ್ಣಾಕ್ಷರಗಳಲ್ಲಿ ಬರೆದಿಡುವ ಕ್ಷಣಗಳು. ಈ ಸಂದರ್ಭದಲ್ಲಿ ದೇವರ ಸೇವೆ ಮಾಡಲು ಅವಕಾಶ ಒದಗಿರುವುದು ನಮ್ಮ ಪುಣ್ಯ. ಒಳಾಂಗಣಕ್ಕೆ ಗ್ರಾನೈಟ್ ಹಾಸುವುದು, ಅಂಗಣಕ್ಕೆ ಗ್ರಾನೈಟ್, ಗರ್ಭಗುಡಿಗೆ ತಾಮ್ರದ ಹೊದಿಕೆ ಇತ್ಯಾದಿ ಜೀರ್ಣೋದ್ಧಾರ ಕಾರ್ಯಗಳಿಗೆ ಅಂದಾಜು 60 ಲಕ್ಷ ರೂ. ವೆಚ್ಚ, ಬ್ರಹ್ಮಕಲಶ ಸೇರಿ 1 ಕೋಟಿ. ರೂ. ವೆಚ್ಚ ನಿರೀಕ್ಷಿಸಲಾಗಿದೆ. ಗ್ರಾಮದ ಭಕ್ತರೆಲ್ಲರೂ ಸೇರಿಕೊಂಡು ಸಂಭ್ರಮ ಸಡಗರದಿಂದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.


ಉದಯ ರೈ ಮಾದೋಡಿ, ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ

 

ಊರಿನ ಜನ ಶ್ರದ್ದೆ, ಭಕ್ತಿಯಿಂದ ತೊಡಗಿಕೊಂಡಿದ್ದಾರೆ

800 ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನ ಹಿರಿಯರ ಮೂಲಕ ಬೆಳಗಿಕೊಂಡು ಬಂದಿದೆ. ಮತ್ತೊಮ್ಮೆ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ ಮನೆಮಾಡಿದೆ. ಊರಿನ ಸಜ್ಜನ ಬಂಧುಗಳಿಗೆ ಇದು ಉತ್ತಮ ಸಂದರ್ಭ. ಕ್ಷೇತ್ರದ ಬಗ್ಗೆ ಹತ್ತಾರು ಊರುಗಳಿಗೆ ತಿಳಿಸಲು ಉತ್ತಮ ಸಂದರ್ಭ ಎಂದು ಪರಿಗಣಿಸಿ ಬ್ರಹ್ಮಕಲಶೋತ್ಸವವನ್ನು ಆಯೋಜನೆ ಮಾಡಲಾಗಿದೆ. ಊರಿನ ಜನರು ಶ್ರದ್ಧೆ, ಭಕ್ತಿಯಿಂದ ತೊಡಗಿಸಿಕೊಂಡಿದ್ದಾರೆ. ಜೀರ್ಣೋದ್ಧಾರ, ಆಡಳಿತ ಸಮಿತಿ ಪೂರಕ ಕೆಲಸ ಮಾಡಿಕೊಂಡು ಬಂದಿದೆ. ಪಕ್ಕದ ಊರಿನವನಾಗಿ ನನಗೂ ಈ ಸೇವೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ.


ಮೋಹನ ಗೌಡ ಇಡ್ಯಡ್ಕ, ಅಧ್ಯಕ್ಷರು, ಬ್ರಹ್ಮಕಲಶೋತ್ಸವ ಸಮಿತಿ

ಕೆಲಸ ಕಾರ್ಯಗಳು ಉತ್ತಮವಾಗಿ ನಡೆದಿದೆ

16 ವರ್ಷಗಳು ಕಳೆದು 17ನೇ ವರ್ಷದಲ್ಲಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯ ರೈ ಮಾದೋಡಿ ನೇತೃತ್ವದಲ್ಲಿ ಉದ್ಯಮಿ ಮೋಹನ ಗೌಡ ಇಡ್ಯಡ್ಕರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ರಚನೆಗೊಂಡು ಕೆಲಸ ಕಾರ್ಯಗಳು ಉತ್ತಮವಾಗಿ ನಡೆದಿವೆ. ಅಭೂತಪೂರ್ವವಾಗಿ ಹೊರೆಕಾಣಿಕೆಯೂ ಸಮರ್ಪಣೆಗೊಂಡಿದೆ.


ಶಿವರಾಮ ಗೌಡ ಅಗಳಿ, ಅನುವಂಶಿಕ ಮೊಕ್ತೇಸರರು

ಊರಿನ ಜನರಿಂದ ಉತ್ತಮ ಸಹಕಾರ

2003ರಲ್ಲಿ ಬಾಲಾಲಯ ಪ್ರತಿಷ್ಠೆಗೊಂಡು ಗೋಪಾಲಕೃಷ್ಣ ಭಟ್ ಮುಂಡಾಲ ನೇತೃತ್ವದಲ್ಲಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಿಕೊಂಡು 2006ರಲ್ಲಿ ಜಗನ್ನಾಥ ರೈ ನುಳಿಯಾಲು ಮಾದೋಡಿ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ನಡೆಸಲಾಯಿತು. ಇದೀಗ 17 ವರ್ಷಗಳ ಬಳಿಕ ದೇವರಿಗೆ ಅಷ್ಟಬಂಧ ಬ್ರಹ್ಮಕಲಶ ನೆರವೇರಿಸಬೇಕು ಎನ್ನುವ ನೆಲೆಯಲ್ಲಿ ಈಗ ಕಾರ್ಯಕ್ರಮ ಆಯೋಜನೆಗೊಂಡಿದೆ. ಊರಿನ ಜನತೆ ಉತ್ತಮ ಸಹಕಾರ ನೀಡುತ್ತಿದ್ದಾರೆ. ಕಳೆದ 2-3 ತಿಂಗಳಿನಿಂದ ಶ್ರಮದಾನ ನೆರವೇರಿದೆ.


ಉದಯ ಕುಮಾರ್ ಅಗಳಿ, ಅನುವಂಶಿಕ ಮೊಕ್ತೇಸರರು

ಭಕ್ತರ ಸಹಕಾರದಿಂದ ಕೆಲಸ ಕಾರ್‍ಯ ನಿರಾತಂಕ

ಈ ದೇವಾಲಯವು ಆದಿದ್ರಾವಿಡ ಜನಾಂಗಕ್ಕೆ ಸೇರಿದ ಓರ್ವ ವ್ಯಕ್ತಿಗೆ ಮರದ ಬುಡದಲ್ಲಿ ಶಿವಲಿಂಗ ದೊರೆತು ನಂತರ ಶಿವಲಿಂಗವನ್ನು ಬಲ್ಲಾಳ ಮನೆತನದವರು ಹಲವು ವರ್ಷಗಳಿಂದ ಪೂಜಿಸಿಕೊಂಡು ಬಂದು, ನಡೆದುಕೊಂಡು ಬರುತ್ತಿತ್ತು. ಬಳಿಕ ಬ್ರಾಹ್ಮಣರ ಕೈಗೆ ಕ್ಷೇತ್ರವು ಬಂದು ಉತ್ತಮವಾಗಿ ಪೂಜೆ-ಕೈಂಕರ್ಯಗಳು ನಡೆದುಕೊಂಡು ಬರುತ್ತಿದ್ದವು. 50 ಎಕರೆಯಷ್ಟಿದ್ದ ದೇವಾಲಯದ ಭೂಮಿ ಭೂಮಸೂದೆಯ ಸಂದರ್ಭ ಹರಿದು ಹಂಚಿ ಹೋಗಿ, ಅಗಳಿಯ ಗೌಡ ಮನೆತನಕ್ಕೆ ಇದರ ಆಡಳಿತ ಸಿಕ್ಕಿತ್ತು. ಅವರ ಅವಧಿಯಲ್ಲಿಯೂ ಉತ್ತಮವಾಗಿ ಪೂಜಾ ಕೈಂಕರ್ಯ ನಡೆದುಕೊಂಡು ಬರುತ್ತಿದ್ದು, ನಂತರ ಜೀರ್ಣಾವಸ್ಥೆಗೆ ತಲುಪಿದ್ದ ಕ್ಷೇತ್ರದಲ್ಲಿ 2006ರಲ್ಲಿ ಬ್ರಹ್ಮಕಲಶೋತ್ಸವ ನಡೆದಿತ್ತು. ಅಂದಿನ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಜಗನ್ನಾಥ ರೈ ನುಳಿಯಾಲು ಮಾದೋಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಗೋಪಾಲಕೃಷ್ಣ ಭಟ್ ಮುಂಡಾಲ ಅವರು ಶ್ರಮಿಸಿ, ಸಾಕಷ್ಟು ಧನಸಂಚಯ ಮಾಡಿ, ಬೆಂಗಳೂರಿನಿಂದಲೇ ಸಾಕಷ್ಟು ಧನ ಸಂಗ್ರಹಿಸಿ ಬ್ರಹ್ಮಕಲಶೋತ್ಸವ ನಡೆದಿತ್ತು. ಈಗ 17 ವರ್ಷಗಳ ಬಳಿಕ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ಜ.10 ರಿಂದ 16 ರವರೆಗೆ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ಭಕ್ತರಿಂದ ಅಪೂರ್ವವಾಗಿ ಹೊರೆಕಾಣಿಕೆಯೂ ಸಂದಾಯವಾಗಿದೆ. ಭಕ್ತರ ಸಹಕಾರದಿಂದ ಕೆಲಸ ಕಾರ್ಯಗಳು ನಿರಾತಂಕವಾಗಿ ನಡೆದುಕೊಂಡು ಬರುತ್ತಿವೆ.


ಸಂತೋಷ್ ಕುಮಾರ್ ಮರಕ್ಕಡ,
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ

LEAVE A REPLY

Please enter your comment!
Please enter your name here