ರೋಟರಿ ಎಲೈಟ್‌ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

0

ರೋಟರಿ ಧತ್ತಿನಿಧಿಗೆ ನೀಡುವ ದೇಣಿಗೆ ಮನುಷ್ಯತ್ವಕ್ಕೆ ಕೊಡುವ ಗೌರವ-ಪ್ರಕಾಶ್ ಕಾರಂತ್

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ರೊಟೇರಿಯನ್ಸ್‌ಗಳು ರೋಟರಿ ಧತ್ತಿನಿಧಿಗೆ ನೀಡುವ ದೇಣಿಗೆಯು ಸಮಾಜದಲ್ಲಿನ ಕಟ್ಟ ಕಡೆಯ ವ್ಯಕ್ತಿಯ ಬಾಳಿನಲ್ಲಿ ಬೆಳಕನ್ನು ಚೆಲ್ಲುವಂತೆ ಮಾಡುತ್ತದೆ. ಆದ್ದರಿಂದ ರೋಟರಿ ಧತ್ತಿನಿಧಿಗೆ ನೀಡುವ ದೇಣಿಗೆಯು ಮನುಷ್ಯತ್ವಕ್ಕೆ ಕೊಡುವ ಗೌರವವಾಗಿದೆ ಎಂದು ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರ ಜಿಲ್ಲಾ ಗವರ್ನರ್ ಮೇಜರ್ ಡೋನರ್ ಪ್ರಕಾಶ್ ಕಾರಂತ್‌ರವರು ಹೇಳಿದರು.

ನೆಹರುನಗರದ ಸುದಾನ ವಸತಿಯುತ ಶಾಲೆಯ ಕ್ಯಾಂಪಸ್‌ನಲ್ಲಿ ಜ.18 ರಂದು ಸಂಜೆ ಜರಗಿದ ರೋಟರಿ ಕ್ಲಬ್ ಪುತ್ತೂರು ಎಲೈಟ್‌ಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಮಾರಂಭದಲ್ಲಿ ಅವರು ಕ್ಲಬ್‌ನ ಸಮಾಜಮುಖಿ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದರು. ರೋಟರಿಯಲ್ಲಿ ಸದಸ್ಯತನ ಎಂಬುದು ಚಾಲನಾ ಶಕ್ತಿ ಇದ್ದ ಹಾಗೆ. ಸದಸ್ಯತನ ವೃದ್ಧಿಸುತ್ತಾ ಹೋದರೆ ರೋಟರಿಯು ಕೂಡ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವಾಗುತ್ತದೆ. ರೋಟರಿ ಸಂಸ್ಥೆಯು ವಿವಿಧತೆಯಲ್ಲಿ ಏಕತೆ, ವೈವಿಧ್ಯತೆಯುಳ್ಳ ಸಂಸ್ಥೆಯಾಗಿದೆ. ಅದರಲ್ಲೂ ರೋಟರಿಯಲ್ಲಿ ಮಹಿಳೆಯರ ಸಂಖ್ಯೆ ಜಾಸ್ತಿ ಇದ್ದರೆ ಅದೂ ಕೂಡ ಅಭಿವೃದ್ಧಿಯ ಸಂಕೇತ ಎನಿಸುತ್ತದೆ. ಸಮಾಜಕ್ಕೆ ಯಾವುದೇ ರೋಟರಿಯು ಸಹಾಯಹಸ್ತ ನೀಡಿದರೆ ಸಮಾಜ ಗುರುತಿಸುವುದು ಮಾತ್ರ ‘ರೋಟರಿ’ ಎಂದೇ ಆಗಿದೆ. ಆದ್ದರಿಂದ ಸಮಾಜಮುಖಿ ಕಾರ್ಯಗಳಿಗೆ ನಾವು ಏನು ಕೊಡುತ್ತೇವೆಯೋ ಅದರ ದುಪ್ಪಟ್ಟು ದೇವರು ನಮಗೆ ಕರುಣಿಸುತ್ತಾನೆ ಎಂಬುದು ಮಾತ್ರ ಸತ್ಯ ವಿಚಾರವಾಗಿದೆ ಎಂದರು.

ರೋಟರಿ ಅಸಿಸ್ಟೆಂಟ್ ಗವರ್ನರ್ ಎ.ಜಗಜ್ಜೀವನ್‌ದಾಸ್ ರೈರವರು ಕ್ಲಬ್ ಬುಲೆಟಿನ್ ಎಲೈಟ್ ನ್ಯೂಸ್ ಅನಾವರಣಗೊಳಿಸಿ ಮಾತನಾಡಿ, ಅಂತರ್ರಾಷ್ಟ್ರೀಯ ರೋಟರಿ ಅಧ್ಯಕ್ಷೆ ಜೆನಿಫರ್ ಜೋನ್ಸ್‌ರವರ ರೋಟರಿ ಪರಿಕಲ್ಪನೆ ಧ್ಯೇಯವಾಕ್ಯದಡಿಯಲ್ಲಿ ವಲಯದಲ್ಲಿ ಹೆಚ್ಚು ಪ್ರಾಜೆಕ್ಟ್ ಅಪ್ಲೋಡ್ ಮಾಡಿದ ಕೀರ್ತಿ ಕೇವಲ ಮೂರು ವರ್ಷದ ಕೂಸು ಆಗಿರುವ ರೋಟರಿ ಎಲೈಟ್‌ಗೆ ಸಲ್ಲುತ್ತದೆ. ಇದೀಗ ಬಿಗ್ ಪ್ರಾಜೆಕ್ಟ್ ಎನಿಸಿರುವ ಡಯಾಲಿಸಿಸ್ ಯಂತ್ರಗಳ ಸ್ಥಾಪಿಸಲು ಕೈಗೆತ್ತಿಕೊಂಡಿರುವುದು ಅಭಿನಂದನೀಯ. ಕ್ಲಬ್ ವಲಯ, ಜಿಲ್ಲಾ ಕ್ರೀಡಾಕೂಟದಲ್ಲಿ, ಸಾಂಸ್ಕೃತಿಕ ಸ್ಪರ್ಧೆಗಳಲ್ಲೂ ಗಮನಾರ್ಹ ಸಾಧನೆ ಮಾಡಿದೆ. ರೋಟರಿಯ ಕುಟುಂಬ ಕಾರ್ಯಕ್ರಮ ಎನಿಸಿದ ರೋಟರಿ ಜಿಲ್ಲಾ ಕಾನ್ಫರೆನ್ಸ್‌ಗೆ ರೋಟರಿ ಸದಸ್ಯರು ಹೆಚ್ಚೆಚ್ಚು ಭಾಗವಹಿಸುವಂತಾಗಲಿ ಎಂದರು.

ರೋಟರಿ ವಲಯ ಸೇನಾನಿ ಸೆನೋರಿಟ ಆನಂದ್ ಮಾತನಾಡಿ, ಮೂರರ ಹರೆಯದಲ್ಲಿರುವ ಈ ಎಲೈಟ್ ಕ್ಲಬ್ ಅನೇಕ ಜನಪಯೋಗಿ ಪ್ರಾಜೆಕ್ಟ್‌ಗಳನ್ನು ಹಮ್ಮಿಕೊಂಡು ಸಾಧನೆ ಮೆರೆದಿದೆ. ಮುಂದಿನ ವರ್ಷಗಳಲ್ಲೂ ಇದೇ ರೀತಿಯ ಸಾಧನೆಗಳು ಹೊರ ಹೊಮ್ಮಲಿ. ಸದಸ್ಯರುಗಳ ಪೂರ್ಣ ಪ್ರಮಾಣದ ಸಹಕಾರವಿದ್ದಲ್ಲಿ ಕ್ಲಬ್ ಯಶಸ್ವಿ ಪಥದಲ್ಲಿ ಸಾಗಬಲ್ಲುದು ಎನ್ನುವುದಕ್ಕೆ ಎಲೈಟ್ ಕ್ಲಬ್ ಉದಾಹರಣೆಯಾಗಿದೆ ಎಂದರು.

ಸೇರ್ಪಡೆ:

ಕ್ಲಬ್ ಸರ್ವಿಸ್‌ನಡಿಯಲ್ಲಿ ಬೊಳ್ವಾರು ಮಹಾವೀರ ಮೆಡಿಕಲ್ ಸೆಂಟರ್ ಎದುರುಗಡೆಯ ಮಹಾವೀರ ಮಾಲ್‌ನಲ್ಲಿ ಪುತ್ತೂರು ಪಾಲಿಕ್ಲಿನಿಕ್ ಹೊಂದಿರುವ ಡಾ.ಸಚಿನ್ ಶಂಕರ್ ಹಾರಕರೆರವರನ್ನು ಈಗಾಗಲೇ ರೋಟರಿ ಎಲೈಟ್ ಕ್ಲಬ್‌ಗೆ ಸೇರ್ಪಡೆಗೊಳಿಸಲಾಗಿದ್ದು, ಕ್ಲಬ್ ಸರ್ವೀಸ್ ನಿರ್ದೇಶಕ ಆಸ್ಕರ್ ಆನಂದ್‌ರವರು ನೂತನ ಸದಸ್ಯ ಡಾ.ಸಚಿನ್ ಶಂಕರ್‌ರವರ ಬಗ್ಗೆ ಮಾಹಿತಿ ನೀಡಿದರು.

ಸನ್ಮಾನ:

ವೊಕೇಶನಲ್ ಸರ್ವಿಸ್‌ನಡಿಯಲ್ಲಿ ರಾಷ್ಟ್ರ ಮಟ್ಟದ ಮೋಟಾರ್ ರ‍್ಯಾಲಿ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಎನಿಸಿಕೊಂಡ ಏಸ್ ಮೋಟಾರ್ಸ್‌ನ ಮಾಲಕ ಆಕಾಶ್ ಐತ್ತಾಳ್‌ರವರನ್ನು ಹಾಗೂ ರೋಟರಿ ಜಿಲ್ಲಾ ಗವರ್ನರ್ ಆಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರನ್ನು ಈ ಸಂದರ್ಭದಲ್ಲಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಕ್ಲಬ್ ಕೋಶಾಧಿಕಾರಿ ಹಾಗೂ ಪತ್ರಕರ್ತರಾದ ಮೌನೇಶ್ ವಿಶ್ವಕರ್ಮರವರು ಪೆನ್ಸಿಲ್ ಆರ್ಟ್‌ನಿಂದ ರಚಿಸಿದ ಡಿಜಿ ಪ್ರಕಾಶ್ ಕಾರಂತ್‌ರವರ ಭಾವಚಿತ್ರವನ್ನು ಪ್ರಕಾಶ್ ಕಾರಂತರವರಿಗೆ ಹಸ್ತಾಂತರಿಸಿದರು. ವೊಕೇಶನಲ್ ಸರ್ವಿಸ್ ನಿರ್ದೇಶಕ ತುಷಾರ್ ಕರ್ಕೇರಾ ಕಾರ್ಯಕ್ರಮ ನಿರ್ವಹಿಸಿದರು. ಕ್ಲಬ್ ಉಪಾಧ್ಯಕ್ಷ ಅಶ್ವಿನ್ ಎಲ್.ಶೆಟ್ಟಿ ಸನ್ಮಾನಿತ ಆಕಾಶ್ ಐತ್ತಾಳ್‌ರವರ ಪರಿಚಯ ಮಾಡಿದರು.

ದೇಣಿಗೆ:

ರೋಟರಿ ಭೀಷ್ಮ ಕೆ.ಆರ್ ಶೆಣೈರವರ ಪತ್ನಿ ಶ್ರೀಮತಿ ರತಿ ಆರ್.ಶೆಣೈರವರ ರೂ.11 ಸಾವಿರ ಪ್ರಾಯೋಜಕತ್ವದಲ್ಲಿ ಕನ್ಯಾನ ಆಶ್ರಮಕ್ಕೆ ನೆರವನ್ನು ನೀಡಿದ್ದು, ದೇಣಿಗೆಯ ಚೆಕ್ ಅನ್ನು ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ಕನ್ಯಾನ ಆಶ್ರಮಕ್ಕೆ ಹಸ್ತಾಂತರಿಸಿದರು. ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಸುಧೀರ್ ಬಿ.ರವರು ಕಾರ್ಯಕ್ರಮ ನಿರ್ವಹಿಸಿದರು.

ಪಿ.ಎಚ್.ಎಫ್ ಗೌರವ:

ಅಂತರ್ರಾಷ್ಟ್ರೀಯ ಸರ್ವಿಸ್ ವತಿಯಿಂದ ಅಂತರ್ರಾಷ್ಟ್ರೀಯ ರೋಟರಿ ದತ್ತಿನಿಧಿಗೆ ದೇಣಿಗೆ ನೀಡಿ ಪಿ.ಎಚ್.ಎಫ್ ಗೌರವ ಪಡೆದ ಸದಸ್ಯರಾದ ಸಿಲ್ವೆಸ್ತರ್ ಡಿ’ಸೋಜ ಹಾಗೂ ಕಾರ್ಯಪ್ಪ ವಿ.ಪಿರವರಿಗೆ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ರವರು ಪ್ರಮಾಣಪತ್ರ ನೀಡಿ ಗೌರವಿಸಿದರು.

ಯೂತ್ ಸರ್ವಿಸ್:

ಯೂತ್ ಸರ್ವಿಸ್‌ನಡಿಯಲ್ಲಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋಟರ‍್ಯಾಕ್ಟ್ ಕ್ಲಬ್‌ ಉದ್ಘಾಟನೆಗೊಂಡಿದ್ದು, ಈ ರೋಟರ‍್ಯಾಕ್ಟ್ ಕ್ಲಬ್‌ನ ರಚನೆಯಲ್ಲಿ ಪಾತ್ರ ನಿರ್ವಹಿಸಿದ ಯೂತ್ ಸರ್ವಿಸ್ ನಿರ್ದೇಶಕ ಕೆ.ಎಂ ಸಿಯಾಕ್‌ರವರಿಗೆ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ಹೂ ನೀಡಿ ಗೌರವಿಸಿದರು.

ಡಿಜಿ ಕಾರ್ಯಕ್ರಮಗಳು:

ಬೆಳಿಗ್ಗೆ ಸುದಾನ ಶಾಲಾ ಮುಂಭಾಗದಲ್ಲಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರನ್ನು ರೋಟರಿ ಎಲೈಟ್ ಪದಾಧಿಕಾರಿಗಳು ಹಾಗೂ ಸದಸ್ಯರಿಂದ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ಸುದಾನ ಶಾಲಾ ಸಂಚಾಲಕ ಹಾಗೂ ರೋಟರಿ ಎಲೈಟ್ ಸ್ಥಾಪಕಾಧ್ಯಕ್ಷ ರೆ|ವಿಜಯ ಹಾರ್ವಿನ್‌ರವರ ನಿವಾಸ ‘ಪ್ರಾಂಜಲಿ’ ಯಲ್ಲಿ ಉಪಹಾರ ಬಳಿಕ ವನಸಿರಿ ಪ್ರಾಜೆಕ್ಟ್ ಎನಿಸಿದ ‘ರೋಟರಿ ಎಲೈಟ್-ಸುದಾನ’ದ ಉದ್ಘಾಟನೆ, ಸುದಾನ ಕ್ಯಾಂಪಸ್‌ನಲ್ಲಿನ ಸಾಂಪ್ರದಾಯಿಕ ಔಷಧ ಉದ್ಯಾನವನ ‘ಸಂಜೀವಿನಿ’ ವೀಕ್ಷಣೆ ಹಾಗೂ ಕ್ಯಾಂಪಸ್‌ನಲ್ಲಿ ಗಿಡ ನೆಡುವ ಕಾರ್ಯಕ್ರಮ, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿನ ಪ್ರಸ್ತಾವಿತ ಡಯಾಲಿಸಿಸ್ ಕೇಂದ್ರದ ಸ್ಥಳಕ್ಕೆ ಭೇಟಿ, ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋಟರ‍್ಯಾಕ್ಟ್ ಕ್ಲಬ್‌ನ ಉದ್ಘಾಟನೆ, ಸುದಾನ ಎಡ್ವರ್ಡ್ ಸಭಾಂಗಣದಲ್ಲಿ ಎಲೈಟ್ ಕ್ಲಬ್ ಸದಸ್ಯರೊಂದಿಗೆ ಕ್ಲಬ್ ಅಸೆಂಬ್ಲಿಯಲ್ಲಿ ಡಿಜಿ ಪ್ರಕಾಶ್ ಕಾರಂತ್‌ರವರು ಭಾಗವಹಿಸಿದರು.

ಕ್ಲಬ್ ನಿಯೋಜಿತ ಅಧ್ಯಕ್ಷ ಅಬ್ದುಲ್ ರಝಾಕ್ ಕಬಕಕಾರ‍್ಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ ಅಧ್ಯಕ್ಷ ಡಾ|ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿದರು. ಕಾರ್ಯದರ್ಶಿ ಸಿಲ್ವಿಯಾ ಡಿ’ಸೋಜ ವರದಿ ವಾಚಿಸಿ ವಂದಿಸಿದರು. ಕ್ಲಬ್ ಸದಸ್ಯರಾದ ಹರಿಣಿ ಪುತ್ತೂರಾಯ ಹಾಗೂ ಲವೀನಾ ಹನ್ಸ್ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಜೋಯಲ್ ಕುಟಿನ್ಹಾ, ಸಾರ್ಜಂಟ್ ಎಟ್ ಆರ್ಮ್ಸ್ ಬಾಲು ಬಿ.ನಾಯ್ಕ್, ಬುಲೆಟಿನ್ ಎಡಿಟರ್ ಪದ್ಮಾವತಿರವರು ವಿವಿಧ ರೀತಿಯಲ್ಲಿ ಸಹಕರಿಸಿದರು.

ಸರಕಾರಿ ಆಸ್ಪತ್ರೆಗೆ ರೂ.52.5 ಲಕ್ಷದ 6 ಡಯಾಲಿಸಿಸ್ ಯಂತ್ರಗಳು..

ಅಂತರ್ರಾಷ್ಟ್ರೀಯ ರೋಟರಿಯ ಗ್ಲೋಬಲ್ ಗ್ರ್ಯಾಂಟ್ ಪ್ರಾಜೆಕ್ಟ್‌ನಡಿಯಲ್ಲಿ ರೋಟರಿ ಎಲೈಟ್, ರೋಟರಿ ಯುವ, ಫ್ಲೋರಿಡಾ(ಯುಎಸ್‌ಎ) ನ್ಯೂ ಟೆಂಪನೂನ್ ರೋಟರಿ ಜೊತೆಗೂಡಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಸ್ತಾವಿಸಲಾಗಿರುವ ರೂ.52.5 ಲಕ್ಷ ವೆಚ್ಚದ 6 ಡಯಾಲಿಸಿಸ್ ಯಂತ್ರಗಳ ಸ್ಥಾಪನೆಗೆ ಯೋಜನೆಗೆ ಹೆಚ್ಚಿನ ಮೊತ್ತದ ಪ್ರಾಯೋಜಕತ್ವವನ್ನು ಪುತ್ತೂರಿನವರೇ ಆಗಿರುವ ಹಾಗೂ ಫ್ಲೋರಿಡಾದಲ್ಲಿರುವ ರೊ|ವಿನಾಯಕ ಕುಡ್ವ ಮತ್ತು ರೋಟರಿ ಜಿಲ್ಲೆ 3181 ವಹಿಸಿಕೊಂಡಿರುತ್ತಾರೆ. ಸರಕಾರಿ ಆಸ್ಪತ್ರೆಯಲ್ಲಿ ಈಗಾಗಲೇ 40 ಮಂದಿ ರೋಗಿಗಳು ಡಯಾಲಿಸಿಸ್‌ಗೆ ಒಳಗಾಗಿದ್ದು, ಇನ್ನೂ 61 ಮಂದಿ ವೈಟಿಂಗ್ ಲಿಸ್ಟ್‌ನಲ್ಲಿದ್ದಾರೆ. ಡಯಾಲಿಸಿಸ್ ರೋಗಿಗಳ ಅಸಹಾಯಕತೆಯನ್ನು ಗಮನಿಸಿ ರೋಟರಿ ಸಂಸ್ಥೆಯು ಸಕರಾತ್ಮಕ ಹೆಜ್ಜೆಯನ್ನಿಟ್ಟಿದ್ದಾರೆ ಎಂದು ಅಂತರ್ರಾಷ್ಟ್ರೀಯ ಸರ್ವಿಸ್ ನಿರ್ದೇಶಕ ವಿ.ಪಿ ಕಾರ್ಯಪ್ಪರವರು ಮಾಹಿತಿ ನೀಡಿದರು.

ಸನ್ಮಾನ..‌

ಅಂತರ್ರಾಷ್ಟ್ರೀಯ ರೋಟರಿಯ ಗ್ಲೋಬಲ್ ಗ್ರ್ಯಾಂಟ್ ಪ್ರಾಜೆಕ್ಟ್‌ನಡಿಯಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ರೂ.52.5 ಲಕ್ಷ ವೆಚ್ಚದ 6 ಡಯಾಲಿಸಿಸ್ ಯಂತ್ರಗಳ ಸ್ಥಾಪನೆಗೆ 20 ಸಾವಿರ ಡಾಲರ್(ರೂ.16 ಲಕ್ಷ)ಮೊತ್ತದ ಪ್ರಾಯೋಜಕತ್ವ ವಹಿಸಲು ಕಾರಣಕರ್ತರಾದ ಪುತ್ತೂರಿನವರೇ ಆಗಿರುವ ಹಾಗೂ ಫ್ಲೋರಿಡಾದ ನ್ಯೂ ಟೆಂಪನೂನ್ ರೋಟರಿ ಸದಸ್ಯರಾಗಿರುವ ವಿನಾಯಕ ಕುಡ್ವರವರನ್ನು ಈ ಸಂದರ್ಭದಲ್ಲಿ ಕ್ಲಬ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

ನಮ್ಮ ಶ್ರಮ ನಿಮ್ಮ ಸಹಕಾರ ಎಂಬಂತೆ ಕಾರ್ಯ..

ಕ್ಲಬ್ ಈಗಾಗಲೇ 62 ಪ್ರಾಜೆಕ್ಟ್ ಅನ್ನು ಕಾರ್ಯಗತ ಮಾಡಿದ್ದು, ಇದರಲ್ಲಿ ರೋಟರಿಯ ಜಿಲ್ಲಾ ಪ್ರಾಜೆಕ್ಟ್ ಎನಿಸಿದ ವನಸಿರಿ, ಜಲ ಸಿರಿ, ಆರೋಗ್ಯ ಸಿರಿ, ವಿದ್ಯಾ ಸಿರಿ ಯೋಜನೆಯಡಿಯಲ್ಲಿ 58 ಕಾರ್ಯಕ್ರಮಗಳನ್ನು ಕ್ಲಬ್‌ನ ಸರ್ವ ಸದಸ್ಯರ ಸಹಕಾರದೊಂದಿಗೆ ಯಶಸ್ವಿಯಾಗಿ ಮಾಡಿದ್ದೇವೆ. ಕ್ಲಬ್‌ನ ಮಹತ್ವಾಕಾಂಕ್ಷಿ ಯೋಜನೆಯಾದ ರೂ.52 ಲಕ್ಷ ವೆಚ್ಚದಲ್ಲಿ ಡಯಾಲಿಸಿಸ್ ಯಂತ್ರವನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಸ್ಥಾಪಿಸಲಿದ್ದು ಇದಕ್ಕೆ ಫ್ಲೋರಿಡಾ ಯುಎಸ್‌ಎದ ರೊಟೇರಿಯನ್ ವಿನಾಯಕ್ ಕುಡ್ವರವರು ಹೆಚ್ಚಿನ ಮಟ್ಟದ ಪ್ರಾಯೋಜಕತ್ವ ವಹಿಸಿದ್ದಾರೆ. ರೋಟರಿ ಧ್ಯೇಯವಾಕ್ಯವೆನಿಸಿದ ಇಮ್ಯಾಜಿನ್ ರೋಟರಿಯಡಿಯಲ್ಲಿ ನಮ್ಮ ಶ್ರಮ ನಿಮ್ಮ ಸಹಕಾರ ಎಂಬಂತೆ ನಂಬಿಕೆ, ಪ್ರೀತಿ, ವಿಶ್ವಾಸ, ಸಹಯೋಗದಂತೆ ಕ್ಲಬ್ ಕಾರ್ಯ ನಿರ್ವಹಿಸುತ್ತಾ ಬರುತ್ತಿದೆ.

-ಡಾ|ಪೀಟರ್ ವಿಲ್ಸನ್ ಪ್ರಭಾಕರ್,

ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು ಎಲೈಟ್

LEAVE A REPLY

Please enter your comment!
Please enter your name here