ಪುತ್ತೂರು: ಮೌಲ್ಯಾಂಕನ ಪದ್ಧತಿ ಮಕ್ಕಳ ಕಲಿಕಾ ಸಾಮರ್ಥ್ಯ ತಿಳಿಯುವ ದಾರಿಯಾಗಿದೆ. ಪ್ರಸಕ್ತ ವರ್ಷ 5 ಮತ್ತು 8ನೇ ತರಗತಿ ಮಕ್ಕಳಿಗೆ ರಾಜ್ಯಾದ್ಯಂತ ಏಕರೂಪವಾಗಿ ಮೌಲ್ಯಾಂಕನ ಪರೀಕ್ಷೆ ನಡೆಯಲಿದೆ. ಈ ದಿಶೆಯಿಂದ ಮಗುವಿನ ಸಾಮರ್ಥ್ಯ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರದಷ್ಟೇ ಮಹತ್ವದ ಪಾತ್ರ ಪೋಷಕರದ್ದಾಗಿರುತ್ತದೆ ಎಂದು ಉಪ್ಪಿನಂಗಡಿ ಸ.ಹಿ.ಪ್ರಾ ಶಾಲಾ ಶಿಕ್ಷಕಿ ದೇವಕಿ ದೇವಕಿ ಹೇಳಿದರು.
ಅವರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಪೋಷಕರ ಸಭೆಗೆ ಅಭ್ಯಾಗತರಾಗಿ ಆಗಮಿಸಿ 5 ಮತ್ತು 8ನೇ ತರಗತಿಯ ಪೋಷಕರಿಗೆ ಮೌಲ್ಯಾಂಕನ ಪದ್ಧತಿಯ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು. ಶಾಲಾ ಆಡಳಿತ ಸಮಿತಿ ಸದಸ್ಯರು, ನಿವೃತ್ತ ಮುಖ್ಯೋಪಾಧ್ಯಾಯರಾದ ಸುಬ್ರಹ್ಮಣ್ಯ ಭಟ್ ಕೆದಿಲ ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಪ್ರಗತಿಯಲ್ಲಿ ಪೋಷಕರು ಹಾಗೂ ಶಿಕ್ಷಕರು ಶಿಲ್ಪಿಗಳ ಪಾತ್ರವಹಿಸುತ್ತಿದ್ದು, ಇನ್ನಷ್ಟು ಸಕ್ರಿಯ ಪಾಲ್ಗೊಳ್ಳುವಿಕೆಯ ಅಗತ್ಯತೆಯನ್ನು ತಿಳಿಸಿದರು.
ಸಭೆಯ ಅನಂತರ ರಥಸಪ್ತಮಿಯ ಅಂಗವಾಗಿ ನಡೆಯಲಿರುವ ಸಾಮೂಹಿಕ ಸೂರ್ಯನಮಸ್ಕಾರದ ಪೂರ್ವ ತಯಾರಿಯಾಗಿ ಪೋಷಕರಿಗೆ ಸೂರ್ಯನಮಸ್ಕಾರದ ಮಹತ್ವ ತಿಳಿಸಿ ಪ್ರಾತ್ಯಕ್ಷಿಕೆ ನೀಡಲಾಯಿತು. ಪೋಷಕರೂ ಸೂರ್ಯನಮಸ್ಕಾರದಲ್ಲಿ ತೊಡಗಿಕೊಂಡರು. ಒಂದರಿಂದ 9ನೇ ತರಗತಿಯವರೆಗೆ 3 ಹಂತಗಳಲ್ಲಿ ಜರುಗಿದ ಪೋಷಕರ ಸಭೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ರಸಾಯನಶಾಸ್ತ್ರ ಪ್ರಾಧ್ಯಾಪಕಿ ದಯಾಮಣಿಯವರು ’ಮಗು-ಮನೆ-ಕಲಿಕೆ’ ಎಂಬ ವಿಷಯದ ಬಗ್ಗೆ ಮಾತನಾಡಿದರು. ಶಾಲಾ ಸಹಶಿಕ್ಷಕರು ಶಾಲಾ ಯೋಜನಾ ಪರಿಚಯ ನೀಡಿದರು. ರಕ್ಷಕ – ಶಿಕ್ಷಕ ಸಂಘದ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು. ಆಡಳಿತ ಸಮಿತಿ ಅಧ್ಯಕ್ಷ ರಮೇಶ್ಚಂದ್ರ, ಕೋಶಾಧಿಕಾರಿ ಅಶೋಕ್ ಕುಂಬ್ಳೆ, ಪ್ರೌಢ ವಿಭಾಗದ ಮುಖ್ಯಗುರು ಆಶಾ ಬೆಳ್ಳಾರೆ, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ನಳಿನಿ ವಾಗ್ಲೆಯವರು ಪೋಷಕರ ಸಂವಾದದಲ್ಲಿ ಭಾಗವಹಿಸಿದರು.