





ಪುತ್ತೂರು: ನ. 29 ಮತ್ತು 30 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರುಮಾರು ಗದ್ದೆಯಲ್ಲಿ ನಡೆಯಲಿರುವ ಶ್ರೀನಿವಾಸ ಕಲ್ಯಾಣ, ಸಾಮೂಹಿಕ ವಿವಾಹ ಮತ್ತು ಹಿಂದವೀ ಸಾಮ್ರಾಜ್ಯೋತ್ಸವದ ಪೂರ್ವಭಾವಿಯಾಗಿ ಸೀತಾ ಪರಿವಾರ ಮಹಿಳೆಯರ ವಿಶೇಷ ಸಭೆ ಸುಭದ್ರ ಕಲಾ ಮಂದಿರದಲ್ಲಿ ನಡೆಯಿತು.


ಬೂತ್ ಮಟ್ಟದಲ್ಲಿ ಆಮಂತ್ರಣ ಪತ್ರಿಕೆಗಳ ವಿತರಣೆ, ಹೊರೆಕಾಣಿಕೆಯ ಮತ್ತು ಕಾರ್ಯಕ್ರಮದ ಬೇರೆ ಬೇರೆ ವ್ಯವಸ್ಥೆಗಳ ಬಗ್ಗೆ ಜವಾಬ್ದಾರಿಯನ್ನು ಹಂಚಿಕೊಂಡು ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಚರ್ಚೆ ನಡೆಸಲಾಯಿತು. ತಾಲೂಕಿನ ಎಲ್ಲಾ ಗ್ರಾಮಗಳ ಸೀತಾ ಪರಿವಾರದ ಪ್ರಮುಖರು ಬೂತ್ ಮಟ್ಟದಲ್ಲಿ ವ್ಯವಸ್ಥೆಯನ್ನು ಗಮನಿಸಿ ಕಾರ್ಯಕ್ರಮದ ಯಶಸ್ಸಿನ ಹಿಂದೆ ಪೂರ್ಣ ಪ್ರಮಾಣದಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ನಿರ್ಧರಿಸಲಾಯಿತು.





ಸಭೆಯ ಅಧ್ಯಕ್ಷತೆಯನ್ನು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ನರಸಿಂಹ ಪ್ರಸಾದ್ ಅವರ ವಹಿಸಿದ್ದರು. ವೇದಿಕೆಯಲ್ಲಿ ಸೀತಾ ಪರಿವಾರದ ತಾಲೂಕು ಅಧ್ಯಕ್ಷರಾಗಿರುವ ಪ್ರೇಮ ಗೌಡ, ಟ್ರಸ್ಟಿನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.










