





ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಸಾಹಿತ್ಯ ಸಂಘದ ವತಿಯಿಂದ ’ಸಾಹಿತ್ಯ ಚಿಂತನ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿ ಪುತ್ತೂರು ಯಶಸ್ ಅಧ್ಯಯನ ಕೇಂದ್ರದ ಉಪನ್ಯಾಸಕ ದರ್ಶನ್ ಗರ್ತಿಕೆರೆ ಮಾತನಾಡಿ, ಸಾಹಿತ್ಯವು ಜ್ಞಾನವನ್ನು ದಾಖಲಿಸುವ, ಸಂರಕ್ಷಿಸುವ ಮತ್ತು ಹರಡುವ ಒಂದು ಸಾಧನವಾಗಿದೆ. ಇದು ಸಾಮಾಜಿಕ, ಆಧ್ಯಾತ್ಮಿಕ ಅಥವಾ ರಾಜಕೀಯ ವಿಷಯಗಳನ್ನು ಒಳಗೊಂಡಿರುತ್ತದೆ. ಸಾಹಿತ್ಯವು ಮನರಂಜನೆಯನ್ನು ನೀಡುವ ಜೊತೆಗೆ, ಓದುಗರಿಗೆ ಜ್ಞಾನವನ್ನು ಒದಗಿಸುವ ಒಂದು ಪ್ರಮುಖ ಮಾಧ್ಯಮವಾಗಿದೆ. ಇದು ಮನುಷ್ಯನಿಗೆ ತಾಳ್ಮೆಯನ್ನು ಕಲಿಸಿಕೊಡುತ್ತದೆ. ಪಠ್ಯ ಪುಸ್ತಕಗಳ ಓದಿನೊಂದಿಗೆ ವಿದ್ಯಾರ್ಥಿಗಳು ಕಥೆ, ಕವನ, ಕಾದಂಬರಿಗಳನ್ನು ಓದುವಂತಹ ಹವ್ಯಾಸವನ್ನು ಬೆಳೆಸಿಕೊಂಡರೆ ಜ್ಞಾನರ್ಜನೆ ಹೆಚ್ಚುವ ಜೊತೆಗೆ ಬದುಕಿನಲ್ಲಿ ಬದಲಾವಣೆಗಳು ಕಾಣಬಹುದು ಎಂದು ಹೇಳಿದರು. ಬಳಿಕ ವಿದ್ಯಾರ್ಥಿಗಳು ಕಿರು ನಾಟಕವನ್ನು ಪ್ರದರ್ಶಿಸಿದರು.



ಕಾರ್ಯಕ್ರಮದ ವೇದಿಕೆಯಲ್ಲಿ ಶೈಕ್ಷಣಿಕ ಸಂಯೋಜಕರಾದ ಶ್ರೀವತ್ಸ ಎನ್ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಹಿತ್ಯ ಸಂಘದ ಸಂಯೋಜಕರಾದ ರತ್ನಾವತಿ ಬಿ., ಕಾಲೇಜಿನ ಉಪನ್ಯಾಸಕ , ಉಪನ್ಯಾಸಕೇತರ ವೃಂದದವರು, ಪ್ರಥಮ ಹಾಗೂ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿ, ದ್ವಿತೀಯ ವಿಜ್ಞಾನ ವಿಭಾಗದ ಅಕ್ಷಿತಾ ಸ್ವಾಗತಿಸಿ, ಮೋಕ್ಷಿತ ಕಾರ್ಯಕ್ರಮವನ್ನು ನಿರೂಪಿಸಿದರು. ದ್ವಿತೀಯ ಕಲಾವಿಭಾಗದ ಚಿನ್ಮಯ್ ವಂದಿಸಿದರು.















