




ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವದಿಂದ ಪುತ್ತೂರು ಸರಕಾರಿ ಆಸ್ಪತ್ರೆಗೆ ಹಲವು ಮಹತ್ವದ ಯೋಜನೆಯನ್ನು ನೀಡಲಾಗಿದ್ದು, ಇದೀಗ ಸರಕಾರಿ ಆಸ್ಪತ್ರೆಯಲ್ಲಿನ ಬಡ ರೋಗಿಗಳಿಗೆ ಪ್ರಯೋಜನ ಆಗುವ ನಿಟ್ಟಿನಲ್ಲಿ ರೋಟರಿ ಕ್ಲೋತ್ ಬ್ಯಾಂಕ್ ಉದ್ಘಾಟೆನೆಯನ್ನು ಸಂಸ್ಥೆಯ ಜಿಲ್ಲಾ ಗವರ್ನರ್ ಪಿ.ಕೆ.ರಾಮಕೃಷ್ಣ ಅವರ ಡಿ.10ರಂದು ಅಧೀಕೃತ ಭೇಟಿ ನೀಡುವ ಸಂದರ್ಭ ಮಾಡಲಾಗುವುದು ಎಂದು ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷ ಕುಸುಮ್ರಾಜ್ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.




ಈಗಾಗಲೇ ಸರಕಾರಿ ಆಸ್ಪತ್ರೆಗೆ ಡಯಲಿಸೀಸ್, ಪಿಸಿಯೋಥೆರಾಪಿಯನ್ನು ಒದಗಿಸಿದ ರೋಟರಿ ಕ್ಲಬ್ ಪುತ್ತೂರು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಯಧುರಾಜ್ ಅವರ ಸಲಹೆ ಮತ್ತು ರೋಟರಿ ಯುವ ಸದಸ್ಯರ ಸಹಯೋಗದೊಂದಿಗೆ ರೋಟರಿ ಕ್ಲೋತ್ ಬ್ಯಾಂಕ್ ಅನ್ನು ಉದ್ಘಾಟಿಸಲಿದ್ದೇವೆ. ಅದೆ ದಿನ ಬಲ್ನಾಡು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ಸಂಸ್ಥೆಯಿಂದ ರೂ.1 ಲಕ್ಷ ದೇಣಿಗೆಯನ್ನು ಹಸ್ತಾಂತರ ಮಾಡಲಾಗುವುದು. ಸಂಜೆ ರೋಟರಿ ಮನೀಷಾ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ ಕೆ, ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್, ಝೋನಲ್ ಲೆಫ್ಟಿನೆಂಟ್ ಭರತ್ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಕುಸುಮ್ರಾಜ್ ತಿಳಿಸಿದರು.





ಸಾಧಕರಿಗೆ ಅಭಿನಂದನೆ:
ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಮೂವರು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಅರೆಭಾಷೆ ಅಕಾಡೆಮಿಯ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಯು.ಪಿ.ಶಿವಾನಂದ, ಮಿಷನ್ ಸ್ವಚ್ಚ ಪುತ್ತೂರಿನ ಪ್ರಮುಖರಾದ ಡಾ. ರಾಜೇಶ್ ಬೆಜ್ಜಂಗಳ, ಗಾಂಧಾರಿ ವಿದ್ಯೆಯ ಮೂಲಕ ಎಷ್ಯಯನ್ ಗೋಲ್ಡ್ ಆಫ್ ರೆಕಾರ್ಡ್ ಸಾಧಕಿ ಶಮಿಕ ಅವರನ್ನು ಅಭಿನಂದಿಸಲಾಗುವುದು ಎಂದು ಕುಸುಮ್ರಾಜ್ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ರೋಟರಿ ಕ್ಲಬ್ ಪುತ್ತೂರು ಯುವದ ಕಾರ್ಯದರ್ಶಿ ಅಭಿಶ್ ಕೊಳಕೆಮಾರ್, ನಿಯೋಜಿತ ಅಧ್ಯಕ್ಷೆ ವಚನ ಜಯರಾಮ್, ಸ್ಥಾಪಕ ಅಧ್ಯಕ್ಷ ರತ್ನಾಕರ ರೈ, ಪೂರ್ವಾಧ್ಯಕ್ಷ ಉಮೇಶ್ ನಾಯಕ್ ಉಪಸ್ಥಿತರಿದ್ದರು.
ರೋಟರಿ ಕ್ಲೋತ್ ಬ್ಯಾಂಕ್ ಉಪಯೋಗ:
ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅನೇಕ ಬಡ ರೋಗಿಗಳಿಗೆ ದೈನಂದಿನ ಬಳಕೆಯ ಬಟ್ಟೆಗಳ ಕೊರತೆ ಕಂಡು ಬರುತ್ತಿದೆ. ಇದನ್ನು ಗಮನಿಸಿ ಸಾರ್ವಜನಿಕರಿಂದ ಸಹಾಯ ಸ್ವೀಕರಿಸಲು ಈ ಕ್ಲೋತ್ ಬ್ಯಾಂಕ್ ರಚಿಸಲಾಗಿದೆ. ಸಾರ್ವಜನಿಕರಲ್ಲಿರುವ ಉಪಯೋಗ ಯೋಗ್ಯ ಬಟ್ಟೆ ಬರೆಗಳನ್ನು ಸ್ವಚ್ಛವಾಗಿ ತೊಳೆದು, ಇಸ್ತ್ರಿ ಮಾಡಿ ನೀಡಬಹದು. ದಿನನಿತ್ಯ ಉಪಯೋಕ್ಕೆ ಯೋಗ್ಯ ಬಟ್ಟೆಗಳಾದ ಶರ್ಟ್, ಪ್ಯಾಂಟ್, ಲುಂಗಿ, ಬನಿಯಾನ್ ಬರ್ಮುಡ ಚಡ್ಡಿ, ಸೀರೆ, ನೈಟಿ, ಚೂಡಿದಾರ, ಬೆಡ್ಶೀಟ್, ಬ್ಯಾಗ್ ಮತ್ತಿತರ ಬಟ್ಟೆಗಳನ್ನು ನೀಡಬಹುದು. ಈ ಬಟ್ಟೆಗಳನ್ನು ಅಗತ್ಯವಿರುವ ಯಾರೆ ಆದರೂ ಮುಕ್ತವಾಗಿ ಪಡೆದುಕೊಳ್ಳಬಹುದು. ಇದು ಸಂಪೂರ್ಣ ಉಚಿತ ಸೇವೆ. ಮುಂದಿನ ದಿನ ನವಜಾತ ಶಿಶುಗಳಿಗಾಗಿ ಪ್ರತ್ಯೇಕ ವಿಭಾಗದಲ್ಲಿ ಬಟ್ಟೆಗಳನ್ನು ಸ್ವೀಕರಿಸುವ ಯೋಜನೆ ಇದೆ ಎಂದು ರೋಟರಿ ಕ್ಲಬ್ ಪುತ್ತೂರು ಯುವದ ಪೂರ್ವಾಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ತಿಳಿಸಿದರು.









