ಗುರುಹಿರಿಯರ ಮಾರ್ಗದರ್ಶನ ಹಾಗೂ ನಮ್ಮ ಆತ್ಮವಿಶ್ವಾಸ ಸಾಧನೆಗೆ ಪೂರಕವಾಗಿದೆ – ಪ್ರಣಮ್ಯ
ಪುತ್ತೂರು : ಬಾಲ್ಯದಿಂದಲೇ ನಮ್ಮ ಪಠ್ಯ ಹಾಗೂ ಪಠ್ಯಪೂರಕ ಚಟುವಟಿಕೆಗಳ ಬೆಳವಣಿಗೆಯಲ್ಲಿ ಗುರುಹಿರಿಯರ ಮಾರ್ಗದರ್ಶನದ ಜೊತೆಗೆ ನಮ್ಮ ಆತ್ಮವಿಶ್ವಾಸವು ಉತ್ತಮ ಸಾಧನೆಗೆ ಪ್ರೇರಣೆಯಾಗುತ್ತದೆ ಎಂದು ಶಾಲಾ ಹಿರಿಯ ವಿದ್ಯಾರ್ಥಿನಿ ಪ್ರಣಮ್ಯ ಅವರು ಹೇಳಿದರು. ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಪೂರ್ವ ಪ್ರಾಥಮಿಕ ಮತ್ತು 1ರಿಂದ 4ನೇ ತರಗತಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕ ವಸಂತ ಸುವರ್ಣ ಮಾತನಾಡಿ, ಮಕ್ಕಳನ್ನು ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯಾಗಿ ರೂಪುಗೊಳಿಸುವಲ್ಲಿ ಶಾಲೆ ಮತ್ತು ಪೋಷಕರ ಪಾತ್ರ ಮಹತ್ತರವಾದುದು ಎಂದು ಹೇಳಿ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಶಾಲಾ ಪೋಷಕರಾದ ಶ್ರೀರಂಜಿನಿ.ಕೆ ಇವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ವೇದಿಕೆಯಲ್ಲಿ ಶಾಲಾ ಸಹಶಿಕ್ಷಕಿ ವೀಣಾ ಕುಮಾರಿ ಉಪಸ್ಥಿತರಿದ್ದರು. ಸಹಶಿಕ್ಷಕರಾದ ಸ್ವಾತಿ, ಲಕ್ಷ್ಮೀ ಸಹಕರಿಸಿದರು. ಶಾಲಾ ವಿದ್ಯಾರ್ಥಿಗಳಾದ ವೈಷ್ಣವಿ ಸ್ವಾಗತಿಸಿ, ತ್ರಿಸ್ಥಾ ವಂದಿಸಿ, ಗಾನವಿ ಕಾರ್ಯಕ್ರಮವನ್ನು ನಿರೂಪಿಸಿದರು.
