ಬೆಳ್ತಂಗಡಿ: ಪ್ರವಾದಿ ಪೈಗಂಬರ್ ಮುಹಮ್ಮದ್ ಮುಸ್ತಫಾ ಅವರ ಜನ್ಮ ದಿನಾಚರಣೆಯ ಅಂಗವಾಗಿ ಮೀಲಾದ್ ಹಬ್ಬವನ್ನು ತಾಲೂಕಿನಾಧ್ಯಂತ ಮುಸ್ಲಿಂ ಬಾಂಧವರು ಸಂಭ್ರಮ ಸಡಗರದಿಂದ ಆಯೋಜಿಸಿದರು.
ಪುಣ್ಯ ಪ್ರವಾದಿಯವರ ಜನ್ಮ ದಿನವಾದ ಅರೆಬಿಕ್ ಕ್ಯಾಲೆಂಡರ್ನ ರಬೀವುಲ್ ಅವ್ವಲ್ 11ಮತ್ತು 12 ರಂದು ಕಾರ್ಯಕ್ರಮಗಳು ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡಿತು.
ತಾಲೂಜಿನ 115 ರಷ್ಟು ಮಸ್ಜಿದ್ ಮತ್ತು150 ರಷ್ಟು ಮದರಸಗಳ ಮೊಹಲ್ಲಾಗಳಲ್ಲಿ ಪ್ರತ್ಯೇಕ ಕಾರ್ಯಕ್ರಮಗಳು, ಮೌಲೀದ್ ಪಾರಾಯಣ, ಮದರಸ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ, ಪ್ರವಾದಿ ಸಂದೇಶ ಸಾರುವ ಮೀಲಾದ್ ಜಾಥಾಗಳು, ಅನ್ನದಾನ ಇತ್ಯಾದಿಗಳು ನಡೆದವು.
ಕೆಲವೆಡೆ ಜಾಥಾದ ವೇಳೆ ಸರ್ವಧರ್ಮೀಯರಿಗೂ ಪಾನೀಯ, ಸಿಹಿತಿಂಡಿ ವಿತರಣೆಯೂ ನಡೆಯಿತು.ಕಾಜೂರು ಮಸ್ಜಿದ್ ನಲ್ಲಿ ಕಾಜೂರು ತಂಙಳ್ ನೇತೃತ್ವ ನೀಡಿದರು. ಗುರುವಾಯನಕೆರೆ ಮಸ್ಜಿದ್ ನಲ್ಲಿ ಸಾದಾತ್ ತಂಙಳ್, ಕಕ್ಕಿಂಜೆ ಮಸ್ಜಿದ್ ನಲ್ಲಿ ಶಂಶುದ್ದೀನ್ ಅಶ್ರಫ್ ಸಹಿತ ಆಯಾಯಾ ಮಸ್ಜಿದ್ನ ಧರ್ಮಗುರುಗಳ ಪ್ರಮುಖ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮ ಗಳು ಸಂಪನ್ನಗೊಂಡವು.
ಎಸ್ಕೆಎಸ್ಸೆಸ್ಸೆಫ್, ವಿಖಾಯಾ ತಂಡಗಳು, ಎಸ್ಸೆಸ್ಸೆಫ್, ಎಸ್ವೈಎಸ್, ಟೀಮ್ ಹಿಸಾಬಾ, ಸಮೂಹ ಸಂಘಟನೆಗಳ ಪದಾಧಿಕಾರಿಗಳು, ಎಸ್.ಎಮ್.ಎ, ಎಸ್.ಜೆ.ಎಮ್, ಎಸ್.ಜೆ.ಯು, ಬಹುತೇಕ ಕಡೆ ಯಂಗ್ ಮೆನ್ಸ್ ಅಸೋಸಿಯೇಷನ್ ಮೊದಲಾದ ಸಂಘಟನೆಯ ಪದಾಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಂಡರು.