ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ, ದಕ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಬೆಳ್ತಂಗಡಿ ತಾಲೂಕು ಸೇವಾ ಪ್ರಾಧಿಕಾರ ಘಟಕ, ಬೆಳ್ತಂಗಡಿ ತಾಲೂಕು ವಕೀಲರ ಸಂಘ ಹಾಗೂ ತಾಲೂಕು ಆಡಳಿತ ಮತ್ತು ಬೆಳ್ತಂಗಡಿ ತಾಲೂಕು ಪಂಚಾಯತ್ ಸಹಯೋಗದಲ್ಲಿ ಇತ್ತೀಚಿಗೆ ಕಾನೂನು ಅರಿವಿನ ಮೂಲಕ ನಾಗರೀಕರಣ ಸಬಲೀಕರಣ ಅಭಿಯಾನ ಕಾರ್ಯಕ್ರಮ ನಡೆಯಿತು.
ಉದ್ಘಾಟನೆ ನೆರವೇರಿಸಿದ ಬೆಳ್ತಂಗಡಿ ತಾಲೂಕು ಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾದ ಟಿ ವಿಜಯೇಂದ್ರ ಅವರು, ” ಕಾನೂನಿನ ಅರಿವು ಎಲ್ಲರಿಗೂ ಅಗತ್ಯ. ಶಿಸ್ತು ಮತ್ತು ಸಭ್ಯತೆ ನಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸುತ್ತದೆ. ವಿಜ್ಞಾನದ ವಿದ್ಯಾರ್ಥಿಗಳು ಕಾನೂನು ಅಭ್ಯಾಸ ಮಾಡಿ, ನ್ಯಾಯಾಂಗ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದವರಿದ್ದಾರೆ. ಅವರ ಸಾಧನೆಗಳು ಇಂದಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಲಿ” ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳ್ತಂಗಡಿ ತಾಲೂಕಿನ ವಕೀಲರ ಸಂಘದ ಅಧ್ಯಕ್ಷ ಪ್ರಸಾದ್ ಕೆ ಎಸ್ ಅವರು ಮಾತನಾಡಿ, ” ಕಾನೂನು ಇರುವುದು ನಮ್ಮ ಬದುಕು ಹಸನಾಗಲಿ ಎಂದು. ನಿಯಮ ಬದ್ಧವಾಗಿ ಬದುಕಿದರೆ ಕಾನೂನಿಗೆ ಭಯ ಪಡಬೇಕಾದ ಆವಶ್ಯಕತೆಯೇ ಇಲ್ಲ. ” ಎಂದರು.
ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಶೈಲೇಶ್ ಆರ್ ತೋಸಾರ್ ಅವರು ಮಾತನಾಡಿ, ” ಸಂವಿಧಾನ ದತ್ತವಾದ ಹಕ್ಕುಗಳ ರಕ್ಷಣೆ ಯನ್ನು ಕಾನೂನು ಮಾಡುತ್ತದೆ.ವಿದ್ಯಾರ್ಥಿ ಜೀವನ ದಲ್ಲಿಯೇ ಕಾನೂನಿನ ಅರಿವು ಮೂಡಿದರೆ ಸತ್ಪ್ರಜೆಯಾಗಿ ಬಾಳ ಬಹುದು ” ಎಂದು ಹೇಳಿದರು. ಎಕ್ಸೆಲ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ನ್ಯಾಯಾಧೀಶರನ್ನು ಗೌರವಿಸಲಾಯಿತು. ವಕೀಲರ ಸಂಘದ ಉಮೇಶ್, ವಿನೋದ್ ಉದ್ಯಮಿ ಶಮಂತ್ ಕುಮಾರ್ ಜೈನ್, ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾನೂನು ಅರಿವಿನ ಭಾಗವಾಗಿ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಸುಭಾಷಿಣಿ, ಮುಮ್ತಾಜ್ ಬೇಗಂ, ಪ್ರಿಯಾಂಕ ಕೆ ಹಾಗೂ ಪ್ಯಾರಾ ಲೀಗಲ್ ಸ್ವಯಸೇವಕರು ಪಾಲ್ಗೊಂಡರು. ಆಂಗ್ಲ ಭಾಷಾ ವಿಭಾಗದ ವಿಕಾಸ್ ಹೆಬ್ಬಾರ್ ಸ್ವಾಗತಿಸಿದರು. ರಸಾಯನ ವಿಜ್ಞಾನ ವಿಭಾಗದ ಉಪನ್ಯಾಸಕಿ ಶಶಿಕಲಾ ನಿರೂಪಿಸಿದರು. ಹಿಂದಿ ವಿಭಾಗದ ಪುರುಷೋತ್ತಮ್ ವಂದಿಸಿದರು.