ಶಿಬಾಜೆ: ತಾಲೂಕಿನ ರೈತಾಪಿ ಬಂಧುಗಳಿಗೆ ಆಯಾ ಜಮೀನನ್ನು ಸಕ್ರಮಗೊಳಿಸುವ ಅಕ್ರಮ-ಸಕ್ರಮ ಅರ್ಜಿ ವಿಲೇವಾರಿಯನ್ನು ಆಯಾ ಗ್ರಾಮ ಪಂಚಾಯತ್ನಲ್ಲಿ ಗ್ರಾಮ ವಾಸ್ತವ್ಯದ ಮೂಲಕ ನಡೆಸಿಕೊಡುವ ನಿಟ್ಟಿನಲ್ಲಿ ಶಿಬಾಜೆ ಗ್ರಾಮ ಪಂಚಾಯತ್ನ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡದಲ್ಲಿ ನ.23ರಂದು ಬೆಳ್ತಂಗಡಿ ತಾಲೂಕು ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಸಮಕ್ಷಮದಲ್ಲಿ ಅಕ್ರಮ-ಸಕ್ರಮ ಕಡತ ವಿಲೇವಾರಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಫಲಾನುಭವಿಗಳನ್ನು ಉದ್ಧೇಶಿಸಿ ಮಾತನಾಡಿ ಯಾವುದೇ ಕಾರಣಕ್ಕೂ ದಳ್ಳಾಲಿಗಳಿಗೆ ಹಣ ನೀಡಿ ಅಕ್ರಮ-ಸಕ್ರಮ ಅರ್ಜಿ ವಿಲೇವಾರಿ ಮಾಡುವಂತಿಲ್ಲ. ಒಂದು ವೇಳೆ ಹಣ ನೀಡಿದಲ್ಲಿ ಹಿಂತಿರುಗಿಸಿ ಕೊಡುವ ಕೆಲಸವನ್ನು ಮಾಡಿಕೊಡುತ್ತೇನೆ.
ಯಾವುದೇ ಕಾರಣಕ್ಕೂ ಜನಗಳು ತಾಲೂಕು ಕಛೇರಿ ಅಥವಾ ಇನ್ಯಾವುದೇ ಕಛೇರಿಗಳಿಗೆ ಅಲೆದಾಡುವಂತಾಗ ಬಾರದೆಂದು ಮನೆ ಬಾಗಿಲಿಗೆ ಸರ್ಕಾರ ಪಾರದರ್ಶಕ ಸೇವೆಯನ್ನು ನೀಡುತ್ತಾ ಬರುತ್ತಿದೆ ಹಾಗೂ ಭ್ರಷ್ಟಾಚಾರ ರಹಿತ ಸೇವೆ ನೀಡುವುದಾಗಿ ಶಾಸಕನಾಗಿದ್ದು ಕೊಂಡು ನನ್ನ ಆದ್ಯ ಕರ್ತವ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷ ಬಿ.ರತೀಶ್ ಗೌಡ, ಉಪಾಧ್ಯಕ್ಷ ವಿನಯಚಂದ್ರ, ಅಕ್ರಮ-ಸಕ್ರಮ ಸಮಿತಿ ಸದಸ್ಯ ಜಯಂತ್ ಕೋಟ್ಯಾನ್, ಶ್ರೀಮತಿ ಶಾರದಾ ಚಾರ್ಮಾಡಿ, ತಹಶೀಲ್ದಾರ್ ಪೃಥ್ವಿ ಸಾನಿಕಂ, ಕಂದಾಯ ನಿರೀಕ್ಷಕ ಪಾವಡಪ್ಪ ದೊಡ್ಡಮನಿ, ಗ್ರಾಮ ಲೆಕ್ಕಾಧಿಕಾರಿ ಶ್ರೀಮತಿ ತೇಜಸ್ವಿನಿ, ಪಂ. ಅಭಿವೃದ್ಧಿ ಅಧಿಕಾರಿ ಜಯರಾಜ್ ಕೆ., ಅರಣ್ಯ ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಂ. ಅಧ್ಯಕ್ಷ ಬಿ.ರತೀಶ್ ಗೌಡ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.