- ಜನರು ಎಚ್ಚೆತ್ತುಕೊಂಡರೆ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ-ರತನ್ ರೈ
ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ನಲ್ಲಿ ೭೩ನೇ ಗಣರಾಜ್ಯೋತ್ಸವ ದಿಣಾಚರಣೆ ಪ್ರಯುಕ್ತ ಗ್ರಾ.ಪಂ ಅಧ್ಯಕ್ಷ ರತನ್ ರೈ ಕುಂಬ್ರ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವದ ವಿಚಾರವಾಗಿ ಮಾತನಾಡಿ ನಾಡಿನ ಜನತೆಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಸುದ್ದಿ ಜನಾಂದೋಲನ ವೇದಿಕೆ ಹಮ್ಮಿಕೊಂಡಿರುವ `ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ’ ಆಂದೋಲನದ ಅಂಗವಾಗಿ ಪ್ರತಿಕೃತಿ ದಹನ ನಡೆಯಿತು.
ಪ್ರತಿಕೃತಿಗೆ ಬೆಂಕಿ ಹಚ್ಚಿದ ಗ್ರಾ.ಪಂ ಅಧ್ಯಕ್ಷ ರತನ್ ರೈ ಕುಂಬ್ರ ಮಾತನಾಡಿ ಭ್ರಷ್ಟಾಚಾರ ಎನ್ನವುದು ಗ್ರಾಮ ಮಟ್ಟದಿಂದಲೇ ನಿರ್ಮೂಲನೆ ಆದರೆ ಜನರಿಗೆ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಹೆಚ್ಚಿನ ಶಕ್ತಿ ಬರುತ್ತದೆ, ಹಣ ಪಡೆಯುವುದು, ಆಮಿಷ ಒಡ್ಡುವುದು ಮಾತ್ರ ಭ್ರಷ್ಟಾಚಾರವಲ್ಲ ಬದಲಾಗಿ ತಮ್ಮ ವಿವಿಧ ಕೆಲಸಗಳಿಗಾಗಿ ಬೆದರಿಸಿ ಕೆಲಸ ಮಾಡಿಸುವುದು ಕೂಡಾ ಭ್ರಷ್ಟಾಚಾರವಾಗಿದೆ ಎಂದು ಅವರು ಹೇಳಿದರು. ಗ್ರಾಮ, ಜಿಲ್ಲೆ, ದೇಶ ಹೀಗೆ ಎಲ್ಲಾ ಕಡೆ ಭ್ರಷ್ಟಾಚಾರ ನಿರ್ಮೂಲನೆ ಆಗಬೇಕಾದರೆ ಜನರು ಸಹಕಾರ ನೀಡಬೇಕು, ಜನರು ಎಚ್ಚೆತ್ತುಕೊಂಡರೆ ಮಾತ್ರ ಲಂಚ, ಭ್ರಷ್ಟಾಚಾರವನ್ನು ತೊಡೆದು ಹಾಕಲು ಸಾಧ್ಯವಿದೆ ಎಂದು ಅವರು ಹೇಳಿದರು. ಕೆದಂಬಾಡಿ ಗ್ರಾಮವನ್ನು ಲಂಚ, ಭ್ರಷ್ಟಾಚಾರ ಮುಕ್ತ ಗ್ರಾಮವನ್ನಾಗಿ ಮಾಡಲು ಪ್ರಯತ್ನಿಸುವುದಾಗಿ ಹೇಳಿದ ರತನ್ ರೈ ಅವರು ಸುದ್ದಿ ಬಳಗ ಹಮ್ಮಿಕೊಂಡಿರುವ ಭ್ರಷ್ಟಾಚಾರದ ವಿರುದ್ಧದ ಆಂದೋಲನಕ್ಕೆ ಅಭಿನಂದನೆ ಸಲ್ಲಿಸಿದರು. ಗ್ರಾ.ಪಂ ಉಪಾಧ್ಯಕ್ಷ ಭಾಸ್ಕರ್ ರೈ ಮಿತ್ರಂಪಾಡಿ, ಸದಸ್ಯರಾದ ಕೃಷ್ಣ ಇದ್ಯಪೆ, ಅಭಿವೃದ್ಧಿ ಅಧಿಕಾರಿ ಅಜಿತ್ ಜಿ. ಕೆ, ಕಾರ್ಯದರ್ಶಿ ಸುನಂದಾ, ಸಿಬ್ಬಂದಿಗಳಾದ ಮೃದುಲಾ, ಶಶಿಪ್ರಭಾ, ಜಯಂತ ಮೇರ್ಲ, ಗಣೇಶ, ವಿದ್ಯಾಪ್ರಸಾದ್, ಗ್ರಂಥ ಪಾಲಕಿ ಸಾರಕಿ, ಗ್ರಾಮ ಸಹಾಯಕ ಶ್ರೀಧರ್, ಗ್ರಾಮಸ್ಥರಾದ ವಿಶ್ವನಾಥ ರೈ ಸಾಗು, ರವಿಕುಮಾರ್ ಕೈತಡ್ಕ, ಜಯಲತಾ ಉಪಸ್ಥಿತರಿದ್ದರು.