ಪುತ್ತೂರು:ರಸ್ತೆಯಲ್ಲಿ ಗುಂಪುಕಟ್ಟಿ ನಿಂತ ತಂಡವೊಂದು ಮಾರುತಿ ಓಮ್ನಿಯನ್ನು ತಡೆದು ಚಾಲಕನಿಗೆ ಹಲ್ಲೆ ನಡೆಸಿದ ಘಟನೆ ಪುತ್ತೂರು ಸುಬ್ರಹ್ಮಣ್ಯ ರಸ್ತೆಯ ಮುಕ್ವೆ ಬಳಿ ಮೇ೧ರ ತಡ ರಾತ್ರಿ ನಡೆದ ಬಗ್ಗೆ ವರದಿಯಾಗಿದ್ದು, ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನರಿಮೊಗರು ಗ್ರಾಮದ ಎಲಿಕಾ ನಿವಾಸಿ ಮೋನಪ್ಪ ಗೌಡ(58ವ)ರವರು ಹಲ್ಲೆಗೊಳಗಾದವರು.`ನಾನು ತರಕಾರಿ ತರಲೆಂದು ಮುಕ್ವೆಗೆ ತೆರಳಿದ್ದು, ರಾತ್ರಿ ವೇಳೆ ಮುಕ್ವೆ ಜಂಕ್ಷನ್ನಲ್ಲಿ ಆಕ್ಟೀವಾ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಅದರ ಹತ್ತಿರ 5ರಿಂದ 6 ಜನ ಯುವಕರು ನಿಂತುಕೊಂಡು ಮಾತನಾಡುತ್ತಿದ್ದರು.ಈ ವೇಳೆ ನಾನು ಹಾರ್ನ್ ಹಾಕಿದರೂ ಅವರು ರಸ್ತೆ ಬಿಟ್ಟು ತೆರಳದೆ ಇದ್ದಾಗ ನಾನು ಮುಂದೆ ಹೋಗಲು ಯತ್ನಿಸಿದಾಗ ಯುವಕರ ತಂಡ ನನ್ನ ಓಮ್ನಿ ಕಾರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ ನನಗೆ ಹಲ್ಲೆ ನಡೆಸಿದ್ದಾರೆ.ಜೊತೆಗೆ ಕಾರನ್ನು ಸುಟ್ಟು ಹಾಕುವುದಾಗಿ ಬೆದರಿಕೆಯೊಡ್ಡಿದ್ದಾರೆ.ಈ ವೇಳೆ ನಾನು ಬೊಬ್ಬೆ ಹಾಕಿದಾಗ ಸಮೀಪದ ಅಂಗಡಿಯವರು ಕಾರಿನ ಬಳಿ ಓಡಿ ಬರುತ್ತಿರುವುದನ್ನು ನೋಡಿ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ’ ಎಂದು ಮೋನಪ್ಪ ಗೌಡರು ಆರೋಪಿಸಿದ್ದಾರೆ.ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.