ವಿಟ್ಲ: ಕಳವುಗೈದು ಮಾರಾಟ ಮಾಡಿದ ವಸ್ತುಗಳನ್ನು ಕೊಂಡೊಯ್ಯಲು ಆರೋಪಿಯೊಂದಿಗೆ ಕಾಸರಗೋಡು ಜಿಲ್ಲೆಯ ಬದಿಯಡ್ಕ ಠಾಣಾ ಎಸ್.ಐ. ನೇತೃತ್ವದ ಪೊಲೀಸರು ವಿಟ್ಲದ ಮೇಗಿನಪೇಟೆಯಲ್ಲಿರುವ ಗುಜಿರಿಅಂಗಡಿಯೊಂದಕ್ಕೆ ದಾಳಿ ಮಾಡಿದ ಘಟನೆ ಮೇ.5ರಂದು ನಡೆದಿದ್ದು, ಬಳಿಕದ ಬೆಳವಣಿಗೆಯಲ್ಲಿ ಅಂಗಡಿಯಲ್ಲಿದ್ದ ವ್ಯಕ್ತಿ ಈಗ ಬರುವುದಾಗಿ ಹೇಳಿ ಪರಾರಿಯಾಗಿರುವುದಾಗಿ ಬದಿಯಡ್ಕ ಪೊಲೀಸರು ತಿಳಿಸಿದ್ದಾರೆ.
ಬದಿಯಡ್ಕ ಠಾಣಾ ವ್ಯಾಪ್ತಿಯ ಪೆರ್ಲದಲ್ಲಿ ನಡೆದ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿಯೂರ್ವನನ್ನು ಬದಿಯಡ್ಕ ಠಾಣಾ ಪೊಲೀಸರು ಮೇ.೪ರಂದು ಬಂದಿಸಿದ್ದರು. ಆತ ನೀಡಿದ ಮಾಹಿತಿಯಂತೆ ಬದಿಯಡ್ಕ ಠಾಣಾ ಪೊಲೀಸರು ಆರೋಪಿ ಮಾರಾಟ ಮಾಡಿದ ಸಾಮಾಗ್ರಿಯನ್ನು ವಶಪಡಿಸಲು ವಿಟ್ಲದ ಗುಜಿರಿ ಅಂಗಡಿಗೆ ಬಂದಿದ್ದರು. ಈ ವೇಳೆ ಅಂಗಡಿಯಲ್ಲಿದ್ದ ವ್ಯಕ್ತಿಯೋರ್ವರು ಈಗ ತಂದುಕೊಡುವುದಾಗಿ ಹೇಳಿ ತೆರಳಿದವರು ಮರಳಿ ಬಾರದೆ ನಾಪತ್ತೆಯಾಗಿದ್ದರು. ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಬದಿಯಡ್ಕ ಠಾಣಾ ಪೊಲೀಸರು ಆ ವ್ಯಕ್ತಿಗಾಗಿ ಆತನ ಅಂಗಡಿಯಲ್ಲಿ ಆತನ ಬರುವಿಕೆಗಾಗಿ ಕಾದು ಕುಳಿತಿದ್ದರು. ಇದರಿಂದಾಗಿ ಅಲ್ಪಹೊತ್ತು ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿದ್ದು ಬದಿಯಡ್ಕ ಪೊಲೀಸರೊಂದಿಗೆ ಮಾಹಿತಿ ಪಡೆದು ಅಂಗಡಿಯಲ್ಲಿದ್ದ ಇನ್ನೋರ್ವ ವ್ಯಕ್ತಿಯನ್ನು ವಿಟ್ಲ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.