ಆಲಂಕಾರು:ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪರಾರಿಗುತ್ತು ಕಮಲಾಕ್ಷ ರೈ(೬೫ವ.)ಯವರು ಹೃದಯಾಘಾತಕ್ಕೊಳಗಾಗಿ ಮೇ ೫ರಂದು ನಿಧನರಾಗಿದ್ದಾರೆ.
ಪೆರಾಬೆ ಗ್ರಾಮದ ಮನವಳಿಕೆ ಗುತ್ತು ದಿ.ಸಂಜೀವ ರೈ ಹಾಗು ಪರಾರಿಗುತ್ತು ಸುನಂದಾ ರೈಯವರ ಪುತ್ರ ಕಮಲಾಕ್ಷ ರೈಯವರು ಮಾಡಾವಿನಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದರು.ಅಲ್ಲಿ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು ಕೂಡಲೇ ಸ್ಥಳೀಯ ವೈದ್ಯರನ್ನು ಕರೆಸಲಾಯಿತು. ಆದರೆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು. .ಬಳಿಕ ಮೃತದೇಹವನ್ನು ಪರಾರಿಗುತ್ತು ಮನೆಗೆ ಕೊಂಡೊಯ್ಯಲಾಯಿತು.
ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ, ಒಡಿಯೂರು ಶ್ರೀ ಗುರುದೇವಾ ಸೇವಾ ಬಳಗ ಪುತ್ತೂರು ಇದರ ಅಧ್ಯಕ್ಷರಾಗಿ, ಜಯಕರ್ನಾಟಕ ಆಲಂಕಾರು ವಲಯದ ಅಧ್ಯಕ್ಷರಾಗಿ, ಕನ್ನಡ ನಾಡು ಪಕ್ಷದ ತಾಲೂಕು ಅಧ್ಯಕ್ಷರಾಗಿ, ಎಂಡೋ ಸಲ್ಫಾನ್ ವಿರೋಧಿ ಹೋರಾಟಗಾರರಾಗಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಚಿರಪರಿಚಿತರಾಗಿದ್ದ ಇವರು ಉತ್ತಮ ಭಜನಾಪಟುವಾಗಿ, ಕಬಡ್ಡಿ ಆಟಗಾರರಾಗಿ, ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು.
ಅಳಿಯ ಶಿವರಾಮ ರೈಯವರ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮದ ನಿಮಿತ್ತ ಮೃತರ ಪತ್ನಿ, ಮನೆಯವರು ಪೂನಾಕ್ಕೆ ತೆರಳಿದ್ದರು.ಮೃತರು ತಾಯಿ ಸುನಂದಾ ರೈ, ಪತ್ನಿ ರೇವತಿ, ಮಗಳು ಸೌಮ್ಯಶಿವರಾಮ ರೈ, ಅಳಿಯಂದಿರಾದ ಸುದ್ದಿ ಬಿಡುಗಡೆಯ ಶ್ರೀಧರ್ ರೈ ಕೋಡಂಬು, ಶಿವರಾಮ ರೈ ಕೋಡಂಬು ಮತ್ತು ಮೊಮ್ಮಕ್ಕಳು ಹಾಗೂ ಸಹೋದರರಾದ ರಾಧಾಕೃಷ್ಣ ರೈ, ಕರುಣಾಕರ ರೈ, ಸಹೋದರಿ ಪವಿತ್ರಾ ಆಳ್ವ ಅವರನ್ನು ಅಗಲಿದ್ದಾರೆ.ಸಾಮಾಜಿಕ, ಧಾರ್ಮಿಕ, ರಾಜಕೀಯ ಸಹಿತ ವಿವಿಧ ಕ್ಷೇತ್ರಗಳ ಪ್ರಮುಖರು ಮೃತರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.
ಮೇ 6ರಂದು ಅಂತ್ಯಕ್ರಿಯೆ
ಮೇ6ರಂದು ಬೆಳಿಗ್ಗೆ 8 ಗಂಟೆಗೆ ಪರಾರಿಗುತ್ತು ಮನೆಯಲ್ಲಿ ಮೃತರ ಅಂತ್ಯಕ್ರಿಯಾದಿ ಕಾರ್ಯಗಳು ನಡೆಯಲಿವೆ ಎಂದು ಮೃತರ ಕುಟುಂಬ ಮೂಲಗಳು ತಿಳಿಸಿವೆ.