ನಿಡ್ಪಳ್ಳಿ; ತೀರಾ ಹದಗೆಟ್ಟು ಶಿಥಿಲಗೊಂಡ ಪಾಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಂದಲ್ಕಾನದಿಂದ ಗುರಿಕ್ಕೇಲು ಹೋಗುವ ರಸ್ತೆಯನ್ನು ಅಭಿವೃದ್ಧಿ ಗೊಳಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕೊಂದಲ್ಕಾನದಿಂದ ಗುರಿಕ್ಕೇಲು ಹೋಗುವ ಸುಮಾರು ಒಂದೂವರೆ ಕಿ.ಲೋ ಮೀಟರ್ ಉದ್ದದ ರಸ್ತೆಯ ಅಲ್ಲಲ್ಲಿ ಕಾಂಕ್ರೀಟ್ ಎದ್ದು ಗುಂಡಿ ಬಿದ್ದ ಪರಿಣಾಮ ವಾಹನ ಸವಾರರಿಗೆ ತೀರಾ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಅಲ್ಲದೆ ರಸ್ತೆಯ ಇಕ್ಕೆಲಗಳಲ್ಲಿ ನೀರು ಹರಿಯಲು ಸರಿಯಾದ ಚರಂಡಿ ಇಲ್ಲದೆ ಪೊದೆಗಳು ತುಂಬಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ರಸ್ತೆ ಅಲ್ಲಲ್ಲಿ ಹೊಂಡ ಗುಂಡಿ ಬಿದ್ದು ಇಡೀ ರಸ್ತೆ ಕೆಟ್ಟು ಹೋಗಿದೆ.ಎಲ್ಲಾ ಕಡೆ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗುತ್ತಿದೆ. ಆದರೆ ಈ ರಸ್ತೆ ಅಭಿವೃದ್ಧಿ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ ಬಗ್ಗೆ ಗ್ರಾಮಸ್ಥರು ಬಹಳ ಬೇಸರ ಗೊಂಡಿದ್ದಾರೆ. ಗ್ರಾಮ ಪಂಚಾಯತಿನಿಂದ ರಸ್ತೆ ಅಭಿವೃದ್ಧಿಗೆ ಬೇಕಾದಷ್ಟು ಅನುದಾನ ಇಡಲು ಸಾಧ್ಯವಿಲ್ಲ. ಇದಕ್ಕೆ ಶಾಸಕರು ಅಥವಾ ಸಂಸದರು ಮನಸ್ಸು ಮಾಡಿ ಅನುದಾನ ಇಟ್ಟರೆ ಮಾತ್ರ ಅಭಿವೃದ್ಧಿ ಸಾಧ್ಯವಾದೀತು ಎಂಬುದು ಇಲ್ಲಿಯ ಜನರ ಅಭಿಪ್ರಾಯವಾಗಿದೆ.
ತಕ್ಷಣ ರಸ್ತೆಗೆ ಡಾಮರ್ ಆಗಬೇಕು-
ಈ ರಸ್ತೆ ತೀರಾ ಹದಗೆಟ್ಟಿದ್ದು ವಾಹನ ಸವಾರರಿಗೆ ಮತ್ತು ಪಾದಾಚಾರಿಗಳಿಗೆ ಬಹಳ ಸಮಸ್ಯೆಯಾಗಿದೆ. ರಸ್ತೆ ಗುಂಡಿ ಬಿದ್ದ ಪರಿಣಾಮ ಸಂಚರಿಸಲು ಕಷ್ಟವಾಗಿದೆ.ಚುನಾವಣೆ ಬರುವಾಗ ಅಶ್ವಾಸನೆ ಕೊಡುವುದನ್ನು ಬಿಟ್ಟು ಈ ರಸ್ತೆ ಡಾಮರೀಕರಣಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಕ್ಷಣ ಸ್ಪಂದಿಸಿ ಡಾಮರ್ ಆಗುವಂತೆ ಪ್ರಯತ್ನಿಸಬೇಕು.
ನೊಂದ ಗ್ರಾಮಸ್ಥ
ನಿರ್ಣಯ ಮಾಡಿ ಕಳಿಸಿ ಸಾಕಾಗಿದೆ- ಈ ರಸ್ತೆ ಅಭಿವೃದ್ಧಿ ಗೊಳಿಸಲು ನಾವು ಪ್ರಯತ್ನ ಪಡುತ್ತಿದ್ದೇವೆ. ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ ಕಳಿಸಿ ಸಾಕಾಗಿದೆ.ಇದಕ್ಕೆ ಪಂಚಾಯತಿನಿಂದ ಅನುದಾನ ನೀಡಲು ಸಾಧ್ಯವಿಲ್ಲ. ಶಾಸಕರ ನಿಧಿಯಿಂದ ಸುಮಾರು 30 ಲಕ್ಷ ಅನುದಾನವಾದರು ನೀಡಿದರೆ ಡಾಮರ್ ಮಾಡಬಹುದು. ಈಗಾಗಲೇ ವಿಧಾನ ಪರಿಷತ್ ಸದಸ್ಯರಿಗೆ ಮನವಿ ಸಲ್ಲಿಸಲಾಗಿದೆ. – ನಾರಾಯಣ ನಾಯಕ್, ಪಂಚಾಯತ್ ವಾರ್ಡ್ ಸದಸ್ಯರು